ಬಳ್ಳಾರಿ,ಮಾ.24 : ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ನಿವೃತ್ತ ರಾಜ್ಯ ಸರಕಾರಿ ನೌಕರರ ಪಿಂಚಣಿ ಅದಾಲತ್ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಕಾನ್ಪರೆನ್ಸ್ ಹಾಲ್ನಲ್ಲಿ ಗುರುವಾರ ಜರುಗಿತು.
ಖಜಾನೆ ಇಲಾಖೆಯ ಆಯುಕ್ತರಾದ ಉಜ್ವಲಕುಮಾರ್ ಘೋಷ್ ಹಾಗೂ ಪಿಂಚಣಿ,ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ನಿರ್ದೇಶಕರಾದ ಎನ್.ರಂಗಯ್ಯ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ನಿವೃತ್ತ ರಾಜ್ಯ ಸರಕಾರಿ ನೌಕರರ ಕುಂದುಕೊರತೆಗಳನ್ನು ಆಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ವಿವಿಧ ಇಲಾಖೆಗಳ ನಿವೃತ್ತ ನೌಕರರ ವಾರ್ಷಿಕ ಮುಂಬಡ್ತಿ, ಗಳಿಕೆ ರಜೆ ನಗದೀಕರಣ,
ಮಹಾಲೇಖಪಾಲಕರಿಂದ ಪಿಂಚಣಿ ಇತ್ಯರ್ಥಗಳ ಕುರಿತು ಬಳ್ಳಾರಿಯ ಪಿಂಚಣಿ,ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ ಅವರು ಆಯುಕ್ತರಾದ ಉಜ್ವಲಕುಮಾರ ಘೋಷ್ ಹಾಗೂ ನಿರ್ದೇಶಕರಾದ ರಂಗಯ್ಯ ಅವರ ಗಮನಕ್ಕೆ ತಂದರು.
ಪಿಂಚಣಿ ಕುಂದುಕೊರತೆ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಆಯುಕ್ತ ಉಜ್ವಲಕುಮಾರ ಘೋಷ್ ಅವರು ಸೂಚಿಸಿದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾಜಿರಾವ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನೀಲಪ್ಪ, ವಿಜಯನಗರ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಪ್ಪ, ಉಪಾಧ್ಯಕ್ಷ ಸಿದ್ದಪ್ಪ, ಪಿಂಚಣಿ,ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಿಬ್ಬಂದಿಗಳಾದ ಸುಧೀಶ್,ರತ್ನಾ,ಗುರುಲಿಂಗಪ್ಪ, ನಿವೃತ್ತ ಅಧಿಕಾರಿಗಳಾದ ಶ್ರೀ ಹರಿ,ಅಶೋಕ ದಿನ್ನಿ,ಜಿ.ಚಂದ್ರಕಾಂತ್,ದೇವೇಂದ್ರಪ್ಪ ಮತ್ತಿತರರು ಇದ್ದರು.