ಕುರುಗೋಡು ವಿಚಾರಣೆಗೆಂದು ಕರೆತಂದಿದ್ದ ವದ್ದಟ್ಟಿ ಗ್ರಾಮದ ಯುವಕ ಭರತ್ ಹರಿಜನ ಮೇಲೆ ಪಿಎಸ್ಐ ಮೌನೇಶ್ ರಾಥೋಡ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ, ತಕ್ಷಣವೆ ಅವರನ್ನು ಸೇವೆಯಿಂದ ವಜಾ ಗೊಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಶನಿವಾರ ಮುಖ್ಯ ವೃತ್ತದಲ್ಲಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಹಲ್ಲೆಗೊಳಗಾದ ಯುವಕನ ತಾಯಿ ದುರುಗಮ್ಮ ಹರಿಜನ ಮಾತನಾಡಿ, ನನ್ನ ಮಗ ಭರತ್ ಹರಿಜನ ಜಿಂದಲ್ನಲ್ಲಿ ನೌಕರ, ವದ್ದಟ್ಟಿ ಗ್ರಾಮದಲ್ಲಿ ಎಮ್ಮೆ ಕಳವು ವಿಚಾರವಾಗಿ ಗ್ರಾಮಸ್ಥರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದ ಪೊಲೀಸರು ಆರಂಭದಲ್ಲಿ ನನ್ನ ಇನ್ನೊಬ್ಬ ಮಗ ಮಂಜು ನನ್ನು ವಿಚಾರಿಸಿದ್ದಾರೆ. ಬಳಿಕ ಆತನ ಸಹೋದರ ಭರತ್ನನ್ನು ಪೊಲೀಸರು ಗುರುವಾರ ಸಂಜೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ಆರಂಭಿಸಿದ ಠಾಣೆಯ ಪಿಎಸ್ಐ ಮೌನೇಶ್ ರಾಥೋಡ್ ಮನಸೋ ಇಚ್ಛೆ ತಳಿಸಿದ್ದಾರೆ. ಶುಕ್ರವಾರ ಸಂಜೆ ಆದರೂ ಯುವಕನನ್ನು ಬಿಟ್ಟಿರಲಿಲ್ಲ. ಹೀಗಾಗಿ ಕೇಳಲು ಹೋದ ಕುಟುಂಬಸ್ಥರಿಗೆ ಮತ್ತು ಮುಖಂಡರಿಗೆ ಬಾಯಿಗೆಬಂದಂತೆ ಬೈದು ಕಳುಹಿಸಿದ್ದಾರೆ.
ಪಿಎಸ್ಐ ಏಟಿನಿಂದ ನನ್ನ ಮಗ ಮೂರ್ಚೆ ಹೋದ ಹಿನ್ನೆಲೆ ಪೊಲೀಸರೇ ಒಪಿಡಿಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಹಾಗೂ ಎಫ್ಐಆರ್ ಕೂಡ ದಾಖಲಿಸಿದೆ 24 ಗಂಟೆ ಠಾಣೆಯಲ್ಲಿ ಇಟ್ಟುಕೊಂಡಿದ್ದು ಬಲವಂತವಾಗಿ ಕೇಸ್ ಒಪ್ಪಿಕೊಳ್ಳುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.
ಡಿವೈಎಸ್ಪಿ ಎಸ್ಎಸ್.ಕಾಳಿ ಮಾತನಾಡಿ, ಘಟನೆ ಕುರಿತು ಈ ವರೆಗೂ ಯಾವುದೇ ದೂರು ದಾಖಲಾಗಿಲ್ಲ, ಈಗಲಾದರೂ ನೀವು ಲಿಖಿತ ದೂರನ್ನು ನೀಡಿ. ನಂತರ ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುತ್ತೇವೆ ಹಾಗೂ ಆಸ್ಪತ್ರೆಯಲ್ಲಿರುವ ಭರತ್ ಹರಿಜನ ಗೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ ಎಂದು ವೈದ್ಯರು ದೃಡ ಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಪಿಎಸ್ಐ ಮೇಲೆ ದೂರು ನೀಡಿದರೆ, ಎರಡು ದಿನ ರಜೆಗಳು ಇರುವ ಕಾರಣ ಸೋಮವಾರ ಪ್ರಕರಣದ ಬಗ್ಗೆ ತಿಳಿಸಿಲಾಗುವುದು ಎಂದು ಹೇಳಿದರು.
ಮುಖಂಡರಾದ ಟಿ.ಸಿದ್ದಪ್ಪ, ಗಾದಿಲಿಂಗಪ್ಪ, ಚಾನಾಳ್ ಚನ್ನಬಸವರಾಜ ಮಾತನಾಡಿದರು.
ಸಿಪಿಐ ಚಂದನ್ಗೋಪಾಲ್, ಪಿಎಸ್ಐ ಅಮರೇಶ್ಗೌಡ ಮುಖಂಡರಾದ ಶೇಖಣ್ಣ, ಎನ್.ನಾಗರಾಜ, ಶೆಟ್ಟಿ ಮಂಜುನಾಥ, ಜೆ.ಮಹೇಶ್ ಇತರರಿದ್ದರು.
ಶುಕ್ರವಾರ ರಾತ್ರಿ ಆಗಿದ್ದೇನು? : ಪೊಲೀಸ್ ಠಾಣೆಯಲ್ಲಿ ಮೂರ್ಚೆ ಹೋಗಿದ್ದ ಭರತ್ ಹರಿಜನನನ್ನು ತಕ್ಷಣವೇ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ಗೆ ದಾಖಲಿಸಿದ್ದಾರೆ. ಘಟನೆ ಕುರಿತು ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸ್ ಠಾಣೆಯ ಎದುರು ರಾತ್ರಿ ಪೂರ್ತಿ ಪ್ರತಿಭಟೆನೆ ನಡೆಸಿದರು.