ನವದೆಹಲಿ.ಏ.೨೯- ನೂರಾರು ಮಹಿಳೆಯರ ಜೀವನ ಹಾಳು ಮಾಡಿದ ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮೌನವಾಗಿದ್ದೀರಿ ಎಂದು ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಎಕ್ಸ್ನಲ್ಲಿ ಬರೆದಿರುವ ಪ್ರಿಯಾಂಕಾ ಗಾಂಧಿ, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಪ್ರಧಾನಿ ಮೋದಿ ಮೌನದ ಕುರಿತು ಪ್ರಿಯಾಂಕಾ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ಈ ನಾಯಕನ ಭುಜದ ಮೇಲೆ ಕೈ ಹಾಕಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಚುನಾವಣೆಗೆ ೧೦ ದಿನ ಬಾಕಿ ಇರುವಾಗ ಈ ನಾಯಕನ ಪರವಾಗಿ ಪ್ರಧಾನಿ ಪ್ರಚಾರಕ್ಕೆ ಹೋಗುತ್ತಾರೆ. ವೇದಿಕೆಯಲ್ಲಿ ಹಾಡಿ ಹೊಗಳುತ್ತಾರೆ. ಇಂದು ಕರ್ನಾಟಕದ ಈ ನಾಯಕ ದೇಶ ಬಿಟ್ಟು ಓಡಿಹೋಗಿದ್ದಾನೆ. ಆ ವ್ಯಕ್ತಿ ಘೋರ ಅಪರಾಧಗಳನ್ನು ಕೇಳಿದರೆ ಹೃದಯ ನಡುಗುತ್ತದೆ. ಆ ನಾಯಕ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಆದರೂ ಮೋದಿ ಅವರೇ ನೀವಿನ್ನೂ ಮೌನವಾಗಿರುತ್ತೀರಾ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಸಂಸದ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.ಈ ಪ್ರಕರಣದಿಂದ ಬಿಜೆಪಿ ದೂರ ಉಳಿಯಲು ನಿರ್ಧರಿಸಿದೆ. ಪ್ರಕರಣ ಎಸ್ಐಟಿ ಅಂಗಳದಲ್ಲಿದ್ದು ಸತ್ಯಾಂಶ ಹೊರಬರಲಿ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಹೇಳಿದ್ದಾರೆ.ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದಿದ್ದಾರೆ. ಪ್ರಜ್ವಲ್ ತಪ್ಪು ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.