ಜುಲೈ 19 ಹಾಗೂ 22 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ; ಸರ್ವ ಸಿದ್ಧತೆ

0
107

ಧಾರವಾಡ : 2021 ರ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಬರುವ ಜುಲೈ 19 ಹಾಗೂ 22 ರಂದು ನಡೆಯಲಿವೆ. ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜಿಲ್ಲೆಯಲ್ಲಿ 161 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು 29,464 ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಪ್ರತಿಯೊಂದು ಪರೀಕ್ಷಾ ಬ್ಲಾಕಿನಲ್ಲಿ 12 ವಿದ್ಯಾರ್ಥಿಗಳನ್ನು ಪರಸ್ಪರ 6 ಅಡಿ ಅಂತರದೊಂದಿಗೆ ಜಿಗ್‍ಜಾಗ್ ಮಾದರಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 119 ಸರ್ಕಾರಿ ಶಾಲೆಗಳು, 140 ಖಾಸಗಿ ಅನುದಾನಿತ ಹಾಗೂ 154 ಅನುದಾನರಹಿತ ಶಾಲೆಗಳು ಸೇರಿ ಒಟ್ಟು 413 ಶಾಲೆಗಳಿಂದ 15,912 ಬಾಲಕ ಹಾಗೂ 13,552 ಬಾಲಕಿಯರು ಸೇರಿ ಒಟ್ಟು 29,464 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ನಗರ ಪ್ರದೇಶಗಳಲ್ಲಿ 76 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 85 ಸೇರಿ ಒಟ್ಟು 161 ಪರೀಕ್ಷಾ ಕೇಂದ್ರಗಳ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಹಾಯ ಕೇಂದ್ರ (ಹೆಲ್ಪ್ ಡೆಸ್ಕ್) ಸ್ಥಾಪಿಸಲಾಗುವುದು ಅಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ದೈಹಿಕ ಶಿಕ್ಷಣ ಶಿಕ್ಷಕರು, ಎನ್.ಸಿ.ಸಿ., ಸ್ಕೌಟ್ಸ್, ಗೈಡ್ಸ್ ಸ್ವಯಂ ಸೇವಕರು ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್‍ಗಳೊಂದಿಗೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಎಲ್ಲರಿಗೂ ಪ್ರತ್ಯೇಕವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್‍ಗಳನ್ನು ಪೂರೈಸುವರು. ಕೇಂದ್ರ ಸಚಿವರು ಹಾಗೂ ಧಾರವಾಡ ಲೋಕಸಭಾ ಸದಸ್ಯರೂ ಆಗಿರುವ ಪ್ರಲ್ಹಾದ ಜೋಷಿಯವರು ಕ್ಷಮತಾ ಸಂಸ್ಥೆಯ ಮೂಲಕ ಇವುಗಳನ್ನು ಪ್ರಾಯೋಜಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವ ಎಲ್ಲ ಮಕ್ಕಳಿಗೆ ಲಘು ಉಪಹಾರ ಹಾಗೂ ಪಾನೀಯ ವ್ಯವಸ್ಥೆಗಳನ್ನು ಇಸ್ಕಾನ್ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ಬೆಳಿಗ್ಗೆ 9 ಗಂಟೆಗೆ ಹಾಜರಿರಲು ಸೂಚನೆ:- ಜುಲೈ 19, ಸೋಮವಾರ ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಸಂಗೀತ ವಿಷಯಗಳ ಪರೀಕ್ಷೆಗಳು, ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿದೆ ಪರೀಕ್ಷೆಗಳು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30 ರ ವರೆಗೆ ನಡೆಯಲಿವೆ ಆದರೆ ಆರೋಗ್ಯ ತಪಾಸಣೆ, ನೂಕು ನುಗ್ಗಲು ತಡೆಯುವ ಉದ್ದೇಶದಿಂದ ಮಕ್ಕಳು ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 9 ಗಂಟೆಗೆ ಹಾಜರಿರಬೇಕು.

ಧ್ವನಿವರ್ಧಕ ವ್ಯವಸ್ಥೆ:- ಆಸನ ವ್ಯವಸ್ಥೆ ಕುರಿತು ಸೂಚನಾ ಫಲಕಗಳಲ್ಲಿ ಮಾಹಿತಿ ಅಳವಡಿಸಲಾಗಿರುತ್ತದೆ. ಆದರೆ ಅಲ್ಲಿ ನೂಕು ನುಗ್ಗಲು ಉಂಟಾಗಬಾರದು ಎಂಬ ಉದ್ದೇಶದಿಂದ ಮಕ್ಕಳಿಗೆ ಧ್ವನಿ ವರ್ಧಕಗಳ ಮೂಲಕವೂ ಆಸನ ವ್ಯವಸ್ಥೆಯ ಮಾಹಿತಿ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಲಸೆ ವಿದ್ಯಾರ್ಥಿಗಳು: ಈ ಬಾರಿ ಜಿಲ್ಲೆಯಲ್ಲಿ 227 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 208 ವಿದ್ಯಾರ್ಥಿಗಳು ಜಿಲ್ಲೆಯಿಂದ ಹೊರಗಡೆ ವಲಸೆ ಹೋಗಿ ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಅಂತಹ ವಿದ್ಯಾರ್ಥಿಗಳು ತಮ್ಮ ಮೂಲ ಶಾಲೆ , ಆಯ್ದುಕೊಂಡಿರುವ ಪರೀಕ್ಷಾ ಕೇಂದ್ರ ಅಥವಾ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದಲೂ ಪರೀಕ್ಷಾ ಹಾಲ್ ಟಿಕೆಟ್‍ಗಳನ್ನು ವಲಸೆ ವಿದ್ಯಾರ್ಥಿಗಳು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here