ಕೊಟ್ಟೂರು:ಜುಲೈ:07:- ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಾಂಸ್ಕೃತಿಕ ಹಿನ್ನೆಲೆ ಅತ್ಯವಶ್ಯಕ ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧರಾಮ ಕಲ್ಮಠ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳು ಅಂಕಗಳ ಬೆನ್ನತ್ತಿ ಹೋಗುತ್ತಿರುವ ಭರದಲ್ಲಿ ಕಲೆ,ಸಾಹಿತ್ಯ ಮತ್ತು ಸಂಸ್ಕೃತಿ ಮರೆಯಾಗುತ್ತಿರುವುದನ್ನು ಮನಗಂಡು ಬಳ್ಳಾರಿ ಶ್ರೀ ಕೃಷ್ಣ ವಿಶ್ವವಿದ್ಯಾಲಯ ಎರಡು ದಿನಗಳ ಕಾಲ ಸಾಂಸ್ಕೃತಿಕ ವೈಭವ ಯುವಜನೋತ್ಸವವನ್ನು ಅಯೋಜಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಇದೇ 9 ಹಾಗೂ 10 ರಂದು ನಮ್ಮ ಕಾಲೇಜಿನ ಡಾ.ಎಚ್.ಜಿ.ರಾಜ್ ಸಭಾ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು
ಜಿಲ್ಲೆಯಾದ್ಯಂತ 31 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು ಒಂದು ಕಾಲೇಜಿನಿಂದ ಗರಿಷ್ಠ 40 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದ್ದು ಸ್ಪರ್ಧಾಳುಗಳಿಗೆ ವಸತಿ ವ್ಯವಸ್ಥೆ ಸಹ ಕಲ್ಪಿಸಲಾಗುತ್ತದೆ ಎಂದರು.
ಶನಿವಾರ ಬೆಳೆಗ್ಗೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಂ.ಗುರುಸಿದ್ಧಸ್ವಾಮಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕುಲಪತಿಗಳಾದ ಸಿದ್ಧು ಪಿ. ಅಲಗೂರು ನೆರವೇರಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಸಿಂಡಿಕೇಟ್ ಸದಸ್ಯರಾದ ಪದ್ಮಾ ವಿಠಲ್, ಡಾ ಅಜಯ್ ಹಾಗೂ ಬೆಳಗಲ್ಲು ವೀರಣ್ಣ, ಎಂ.ಎಂ.ಜೆ ಸತ್ಯಪ್ರಕಾಶ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಭಾನುವಾರ ಸಂಜೆ ಸಮಾರೋಪ ಸಮಾರಂಭಕ್ಕೆ ರಂಗ ಕಲಾವಿದೆ ಕೆ.ನಾಗರತ್ನಮ್ಮ, ಹಿ.ಮ.ಕೊಟ್ರಯ್ಯ ಮುಂತಾದ ಗಣ್ಯರು ಉಪಸ್ಥಿತರಿರುತ್ತಾರೆ ಹಾಗೂ ವಿಶ್ವವಿದ್ಯಾಲಯದ ಯುವ ಜನೋತ್ಸವದ ಸಂಚಾಲಕ ಎನ್.ಶಾಂತಾನಾಯಕ್ ಸಮಾರೋಪ ನುಡಿ ನಡೆಸಿಕೊಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪದವಿ ಕಾಲೇಜು ಪ್ರಾಂಶುಪಾಲ ಶಾಂತಮೂರ್ತಿ ಬಿ.ಕುಲಕರ್ಣಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಎಚ್.ಪ್ರಶಾಂತಕುಮಾರ್, ಯುವಜನೋತ್ಸವ ಸಂಚಾಲಕಿ ಕುಸುಮ ದೇವಿ ಸಜ್ಜನ್ ಇದ್ದರು.
ವರದಿ: ಶಿವರಾಜ್ ಕನ್ನಡಿಗ