ಬಳ್ಳಾರಿ,ಆ.10 : ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವು ಇದೇ ಆ.17ರವರೆಗೆ ಹಮ್ಮಿಕೊಳ್ಳಲಾಗಿದ್ದು, ಆಶಾ ಕಾರ್ಯಕರ್ತೆಯರು ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ನೀಡುವ ಮೂಲಕ 6,31,565 ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳನ್ನು ವಿತರಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಹೆಚ್.ಎಲ್ ಜನಾರ್ಧನ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಸೆಂಟ್ ಫೀಲೋಮಿನಾ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಂತುಹುಳು ನಿವಾರಣಾ ಕಾರ್ಯಕ್ರಮದಂದು ಎಲ್ಲಾ ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕ್ಕೊಂಡು,ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡಿ ಜಂತುಹುಳು ನಿವಾರಣಾ ಮಾತ್ರೆ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಎಲ್ಲಾ 1-19 ವರ್ಷ ವಯಸ್ಸಿನ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಅವರ ಮನೆಗಳಲ್ಲಿಯೇ ನೀಡಲಿದ್ದಾರೆ ಎಂದರು.
ಜಂತುಹುಳು ನಿವಾರಕ ಮಾತ್ರೆಯು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ.
ಜಂತು ನಿವಾರಣೆಯಿಂದ ಮಕ್ಕಳಿಗೆ ಅನುಕೂಲಗಳು:
ಪರೋಕ್ಷ ಅನುಕೂಲಗಳು-ರಕ್ತ ಹೀನತೆ ನಿಯಂತ್ರಣ, ಪೌಷ್ಠಿಕತೆಯಲ್ಲಿ ಸುಧಾರಣೆ. ಅಪರೋಕ್ಷ ಅನುಕೂಲಗಳು-ರೋಗ ನಿರೋಧಕ ಶಕ್ತಿಯ ಸುಧಾರಣೆ, ಏಕಾಗ್ರತೆ, ಓದಿನಲ್ಲಿ ಹೆಚ್ಚಿನ ಆಸಕ್ತಿ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ, ಕರ್ತವ್ಯ ನಿರ್ವಹಣೆಯಲ್ಲಿ ಕ್ಷಮತೆ, ಜೀವನ ನಿರ್ವಹಣೆಯಲ್ಲಿ ಸುಧಾರಣೆ, ಸಮುದಾಯದಲ್ಲಿ ಜಂತುಹುಳುವಿನ ಬಾದೆಯ ತೊಂದರೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಲಿದೆ.
ಮಗು ಖಾಯಿಲೆ ಬಳಲದೇ ಇದ್ದರೂ ಜಂತು ನಿವಾರಕ ಮಾತ್ರೆಯನ್ನು ನುಂಗಿಸಿಲು ಕಾರಣವೆಂದರೆ?-
ಜಂತು ಹುಳುಗಳ ಬಾಧೆಯಿಂದ ಸಮುದಾಯದಲ್ಲಿ ಎಲ್ಲಾ ಮಕ್ಕಳನ್ನು ರಕ್ಷಣೆ ಮಾಡುವುದಕ್ಕಾಗಿ. ಕೆಲವು ಬಾರಿ ಮಕ್ಕಳಲ್ಲಿಯ ಜಂತುಹುಳುವಿನ ತೊಂದರೆಯ ಲಕ್ಷಣಗಳು ಕಾಣದಿರಬಹುದು. ಆದ್ದರಿಂದ ಮಗುವಿನ ಭವಿಷ್ಯದ ಆರೋಗ್ಯ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ. ಜಂತುಹುಳು ನಿವಾರಕ ಮಾತ್ರೆ ಮಕ್ಕಳು ಮತ್ತು ವಯಸ್ಕರರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ. ಜಂತುಹುಳು ನಿವಾರಕ ಮಾತ್ರೆಯು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ.
ಏನಿದು ಅಲ್ಬೆಂಡಾಜೋಲ್ ಮಾತ್ರೆ?: 1-2 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧಮಾತ್ರೆಯನ್ನು ಮುರಿದು ಎರಡು ಚಮಚಗಳ ನಡುವೆ ಪುಡಿಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವುದಕ್ಕೆ ಒಂದೆರಡು ಹನಿ ಸುರಕ್ಷಿತ ನೀರನ್ನು ಸೇರಿಸಬೇಕು. 2-3 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ಎರಡು ಚಮಚಗಳ ನಡುವೆ ಪುಡಿ ಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವುದಕ್ಕೆ ಒಂದೆರಡು ಹನಿ ಸುರಕ್ಷಿತ ನೀರನ್ನು ಸೇರಿಸಬೇಕು. 3-19 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ನೀಡಬೇಕು ಹಾಗೂ ಗಂಟಲಲ್ಲಿ ಸಿಲುಕಿಸಿಕೊಳ್ಳುವುದನ್ನು ತಪ್ಪಿಸಲು ಜಂತು ನಿವಾರಕ ಮಾತ್ರೆಯನ್ನು ಯಾವಾಗಲೂ ಅಗಿಯಬೇಕು. ಸುರಕ್ಷಿತ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು.
ಯಾವುದೇ ವೈದ್ಯಕೀಯ ಸಹಾಯಕ್ಕಾಗಿ 104 ಉಚಿತ ಆರೋಗ್ಯ ಸಹಾಯವಾಣಿಗೆ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಕರಾದ ಅಂದಾನಪ್ಪ ವಡಗೇರಿ ಅವರು ಉದ್ಘಾಟಿಸಿ ಮಾತನಾಡಿದರು.
ಪಿವಿ ಕ್ಯಾಂಪೋಸಿಟ್ ಕಾಲೇಜ್ ಸೆಂಟ್ ಫಿಲೋಮಿನಾ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಫೆಲಿಸಿಟಾ ಅವರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಬಸರೆಡ್ಡಿ, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಆರ್.ಅನಿಲ್ ಕುಮಾರ್, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ್ ಬಿ ಚೌವ್ಹಾಣ, ಜಿಪಂನ ಬಿಸಿಯೂಟ ಕಾರ್ಯಕ್ರಮ ನಿರ್ದೇಶಕರಾದ ಗುರಪ್ಪ ಹೆಚ್, ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಉಷಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರಾದ ವೆಂಕಟೇಶ,ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರಿ, ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್ ದಾಸಪ್ಪನವರ, ಆರ್.ಕೆ.ಎಸ್.ಕೆ ಮನೋಹರ್, ಸುರೇಶ್ ಸಿ.ಪಿ.ಎಮ್, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಎವೆಡೆನ್ಸ್ ಆಕ್ಷನ್ನ ಶ್ರೀಧರ್ ಸೇರಿದಂತೆ ಸುನಿತ, ಅರುಣಾ ಹಾಗೂ ಆಶಾ ಕಾರ್ಯಕರ್ತೆಯರು, ಆರೊಗ್ಯ ಇಲಾಖೆ ಸಿಬ್ಬಂದಿ ಮತ್ತು ಸೆಂಟ್ ಮೇರಿ ಕನ್ನಡ ಮಾಧ್ಯಮ ಶಾಲಾ ಮಕ್ಕಳು ಹಾಜರಿದ್ದರು.