ವರದಿ ಫಲಶ್ರುತಿ
ಕೊಟ್ಟೂರು: ಪತ್ರಿಕೆ ನಿರಂತರವಾಗಿ ವರದಿಮಾಡಿದ ಹಿನ್ನೆಲೆಯಲ್ಲಿ ಪಟ್ಟಣದ ರಸ್ತೆಗಳಿಗೀಗ ಟಾರ್ ಭಾಗ್ಯ ಸಿಕ್ಕಿದೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದು ವಾಹನ ಸವಾರಿ ಇನ್ನಿಲ್ಲದ ಸಾಹಸಮಯವಾಗಿ ಹೋಗಿತ್ತು. ಇದರ ಜೊತೆಗೆ ಅರೆಬರೆ ಕಾಮಗಾರಿ ಕಾರಣಕ್ಕೆ ರಸ್ತೆಗಳು ದೂಳುಮಯವಾಗಿದ್ದವು. ಇದನ್ನು ಪದೇ ಪದೇ ಪತ್ರಿಕೆ ವರದಿಮಾಡುತ್ತಾ ಬಂದಿತ್ತು. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕರನ್ನು ಟೀಕೆಮಾಡಿಕೊಂಡು ಬಂದಿದ್ದರು. ಇದೀಗ ಎಚ್ಚೆತ್ತಿರುವ ತಾಲ್ಲೂಕು ಆಡಳಿತ ರಸ್ತೆಗಳ ದುರಸ್ತಿಗೆ ಮುಂದಾಗಿದೆ.
ಹರಪನಹಳ್ಳಿ ರಸ್ತೆ, ಮಠದ ರಸ್ತೆ, ಇವುಗಳಷ್ಟೇ ಅಲ್ಲದೇ ಇತ್ತೀಚಿಗೆ ತೋರಣಗಲ್ಲು- ಹರಪನಹಳ್ಳಿ ರಾಷ್ಟ್ರೀಯ ಹೆದ್ದಾರಿ, ಅರಭಾವಿ-ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿಗಳೆಂದು ಗುರುತಿಸಿ ಅಕ್ಕಪಕ್ಕದ ಮನೆ, ಅಂಗಡಿ ಮುಗ್ಗಟ್ಟುಗಳೆಲ್ಲವನ್ನೂ ತೆರವುಗೊಳಿಸಿ, ಸುಮಾರು ಎರಡು ವರ್ಷಗಳು ಕಳೆದರೂ, ಯಾವುದೇ ರಸ್ತೆ ಕಾಮಗಾರಿ ಆರಂಭಿಸಿರಲಿಲ್ಲ. ರಸ್ತೆಗಳು ಗುಂಡಿಬಿದ್ದ ಪರಿಣಾಮ ಎಲ್ಲಿ ಹೋದರೂ ತಗ್ಗುಗಳ ಕಾಟ ಇತ್ತು. ವಾಹನಗಳು ಓಡಾಡಿದರೆ ಏಳುವ ಧೂಳು ಎಲ್ಲವನ್ನೂ ಸಹಿಸಿಕೊಂಡು ಬದುಕಬೇಕಾದ ಪರಿಸ್ಥಿತಿ ಪಟ್ಟಣದ ಸಾರ್ವಜನಿಕರಿಗೆ ಬಂದೊದಗಿತ್ತು.
ಈ ಕುರಿತು ಪತ್ರಿಕೆ ಪದೇ ಪದೇ ವರದಿ ಪ್ರಕಟಿಸಿಕೊಂಡುಬಂದಿತ್ತು.
ಪತ್ರಿಕೆಯ ವರದಿಗಳಿಗೆ ವಿವಿಧ ಸಂಘಟನೆಗಳು ಸಾತ್ ನೀಡಿದ್ದವು. ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಸಲ್ಲಿಸಿ, ರಸ್ತೆ ದುರಸ್ತಿ ಕೈಗೊಳ್ಳಿ ಎಂದು ಮನವಿಮಾಡಿದ್ದರು. ಪತ್ರಿಕೆಯಲ್ಲಿನ ವರದಿಗಳು, ಸಂಘಟನೆಗಳ ಒತ್ತಾಯದ ಹಿನ್ನೆಲೆಯೋ, ಚುನಾವಣೆ ಸಮೀಪಿಸುತ್ತಿರುವ ಕಾರಣವೋ ಏಕಾಏಕಿ ತಾಲ್ಲೂಕು ಆಡಳಿತ ರಸ್ತೆ ಕಾಮಗಾರಿ ಆರಂಭಿಸಿದೆ.
ಈವರೆಗೆ ಟೆಂಡರ್, ರಿ- ಟೆಂಡರ್, ಎಸ್ಟಿಮೇಷನ್, ರಿ- ಎಸ್ಟಿಮೇಷನ್ ಅಂತ ಏನೇನೊ ಸಬೂಬು ಹೇಳುತ್ತಿದ್ದ ಅಧಿಕಾರಿಗಳಿಗೆ ಇದೀಗ ಯಾವುದೇ ಅಡೆತಡೆ ಎದುರಾದ ಹಾಗೆ ಕಾಣುತ್ತಿಲ್ಲ.ಇದೀಗ ರಸ್ತೆ ದಗದಗಿಸುತ್ತಿರುವುದನ್ನು ಕಂಡು ಸಾರ್ವಜನಿಕರು ಪತ್ರಿಕೆಗೆ ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ
ವರದಿ: ಶಿವರಾಜ್ ಕನ್ನಡಿಗ