ಕುಂದಾನಗರಿ ಬೆಳಗಾವಿಯ ಹುಡುಗರ ಸಾಹಸ, “ಪರ್ಯಾಯ” ಚಲನಚಿತ್ರ ತಂಡಕ್ಕೆ ಶುಭವಾಗಲಿ

0
250

ಉತ್ತರ ಕರ್ನಾಟಕದಲ್ಲಿ ಚಲನಚಿತ್ರ ರಂಗ ಅಷ್ಟೊಂದು ಬೆಳೆದಿಲ್ಲ. ಆಗಾಗ ಒಂದೊಂದು ಪ್ರಯತ್ನ ನಡೆದಿರುವುದುಂಟು. ಚಿತ್ರನಿರ್ಮಾಣಕ್ಕೆ ಅಗತ್ಯವಾದ ಸ್ಟುಡಿಯೋ ಸೌಕರ್ಯ ಈ ಭಾಗದಲ್ಲಿ ಇಲ್ಲದಿರುವುದೂ ಒಂದು ಕಾರಣ. ಬಹಳ ಹಿಂದೆ ಮದ್ರಾಸ್ ಬಿಟ್ಟರೆ ಕೊಲ್ಲಾಪುರ, ಪುಣೆ, ಮುಂಬಯಿಗಳಿಗೆ ಹೋಗಬೇಕಾಗುತ್ತಿತ್ತು. ಕನ್ನಡದ ಮೊದಲ ಚಿತ್ರ “ಸುಲೋಚನಾ” ಸಹ ೧೯೩೩-೩೪ ರಲ್ಲಿ ಕೊಲ್ಲಾಪುರದಲ್ಲಿ ಚಿತ್ರಣವಾಗಿತ್ತು. ೧೯೩೭ ರಲ್ಲಿ ಉತ್ತರ ಕರ್ನಾಟಕದ ಮೊದಲ ಚಿತ್ರ” ಚಿರಂಜೀವಿ” (ಭಕ್ತ ಮಾರ್ಕಂಡೇಯ) ಹುಬ್ಬಳ್ಳಿ ವಿಜಾಪುರದವರೆಲ್ಲ ಸೇರಿ ಮಾಡಿದ್ದರು. ನಂತರ ೧೯೪೬ ರಲ್ಲಿ ಚಂದ್ರಹಾಸ ಸಿನೆಮಾ ತಯಾರಾಯಿತು. ೧೯೬೬-೬೭ ರಲ್ಲಿ ಉತ್ತರ ಕರ್ನಾಟಕದವರು ನಿರ್ಮಿಸಿದ ” ಸಂಗೊಳ್ಳಿ ರಾಯಣ್ಣ” ಬಹಳ ಪ್ರಸಿದ್ಧಿ ಪಡೆಯಿತು. ಅದರಲ್ಲಿ ಲತಾ ಮಂಗೇಶಕರ್, ಆಶಾ ಭೋಸೆ, ಮನ್ನಾಡೇ ಎಲ್ಲ ಹಾಡಿದ್ದರು.” ಬೆಳ್ಳನೆ ಬೆಳಗಾಯಿತು” ಎಂಬ ಹಾಡು ಬಹಳ ಜನಪ್ರಿಯವಾಯಿತು. (೨೦೧೨ ರಲ್ಲಿ ಮತ್ತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ” ಸಿನಿಮಾ ಬೆಳಗಾವಿಯ ಆನಂದ ಅಪ್ಪುಗೋಳರಿಂದ ತಯಾರಾಯಿತು). ಹುಬ್ಬಳ್ಳಿಯಲ್ಲೇ ಮತ್ತೆ ಕೆಲ ಪ್ರಯತ್ನಗಳು ನಡೆದವು.

ಈಚೆಗೆ ಕೆಲವು ಉತ್ಸಾಹಿ ಹೊಸ ಹುಡುಗರು ಕಿರು ಚಿತ್ರಗಳನ್ನು ತಯಾರಿಸುವ ಪ್ರಯತ್ನಕ್ಕೆ ತೊಡಗಿದ್ದು ಕಂಡುಬರುತ್ತದೆ. ಇದೀಗ ಮಮತಾ ಕ್ರಿಯೇಶನ್ ಹೆಸರಿನ ಚಿತ್ರ ಸಂಸ್ಥೆ ನಿರ್ಮಿಸಿರುವ ” ಪರ್ಯಾಯ” ದಂತಹ ಒಂದು ಸಾಹಸ. ಬೆಳಗಾವಿಯ ರಾಜಕುಮಾರ ನಾಯಕ ಎಂಬವರು ಮತ್ತು, ಪತ್ರಕರ್ತ ಮುರುಗೇಶ ಶಿವಪೂಜಿ ಗೆಳೆಯರ ಬಳಗದವರು ನಿರ್ಮಿಸಿದ ಸುಮಾರು ಎರಡೂವರೆ ತಾಸುಗಳ ಈ ಪರ್ಯಾಯ ಈಗ ರಾಜ್ಯದ ಹಲವೆಡೆ ತೆರೆ ಕಂಡಿದೆ. ಬೆಳಗಾವಿಯ ನಿರ್ಮಲ ಟಾಕೀಸಿನಲ್ಲಿ ಅದು ಎರಡನೆಯ ವಾರಕ್ಕೆ ಕಾಲಿಟ್ಟಿದೆ. ಗೋವಿಂದ(ಕಿವುಡ), ಗೋಪಾಲ(ಅಂಧ) ಮತ್ತು ಪಾಂಡು (ಮೂಕ) ಎಂಬ ಮೂವರು ಯುವಕರ ಸುತ್ತ ಹೆಣೆದ ಕತೆ ಇದು. ಹಳ್ಳಿಯೊಂದರಲ್ಲಿ ವಾಸಿಸುವ ಈ ಮೂವರಿಗೂ ಹೇಗಾದರೂ ಶ್ರೀಮಂತರಾಗಿ ಸುಖ ಜೀವನ ನಡೆಸುವ ಆಸೆ. ಹತ್ತು ಹಲವು ಕನಸು. ಕನಸು ಕಾಣುವುದೂ ತಪ್ಪಲ್ಲ, ಆಸೆಗಳಿರುವುದೂ ತಪ್ಪಲ್ಲ. ಆದರೆ ಅದಕ್ಕಾಗಿ ಸರಿಯಾದ ದಾರಿ ಹಿಡಿಯುವುದೂ ಅಷ್ಟೇ ಮುಖ್ಯ.ಈ ಯುವಕರು” ಬಂಗಾರದ ಜಿಂಕೆ ” ಬೆನ್ನು ಹತ್ತಿ ಆಸೆಯಿಂದ ಮೋಸಗಾರರ ಬಲೆಗೆ ಬಿದ್ದು ಇದ್ದ ಮನೆ ಆಸ್ತಿಗಳನ್ನೂ ಕಳೆದುಕೊಳ್ಳುವಂತಾಗುತ್ತದೆ. ಇದು ಸಿನಿಮಾದ ಥೀಮ್

ಒಳ್ಳೆಯ ಪ್ರಯತ್ನ ಎಂದು ನೋಡುಗರಿಂದ ಪ್ರಶಂಸೆ ಪಡೆದ ” ಪರ್ಯಾಯ” ದಲ್ಲಿ ಕೆಲವೊಂದು ಸಣ್ಣಪುಟ್ಟ ಲೋಪದೋಷಗಳಿದ್ದರೂ ಒಮ್ಮೆ ನೋಡಿ ಪ್ರೋತ್ಸಾಹಿಸಬೇಕಾದ ಚಿತ್ರ. ಯಾವ ಬ್ರಾಂಡೆಡ್ ನಟನಟಿಯರೂ ಇಲ್ಲದೇ ಎಲ್ಲ ಈ ಭಾಗದ ಹೊಸಬರನ್ನೇ ಒಳಗೊಂಡಿರುವ ಚಿತ್ರತಂಡದ ಉತ್ಸಾಹ ಮೆಚ್ಚತಕ್ಕದ್ದೇ. ಛಾಯಾಗ್ರಹಣ ಚೆನ್ನಾಗಿದೆ. ಸಂಗೀತ ಪರವಾಗಿಲ್ಲ. ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗೋಪಾಲನ ತಾಯಿಯ ಪಾತ್ರದಲ್ಲಿ ಜಯಂತಿ ರೇವಡಿ ಅವರ ಅಭಿನಯ ಉತ್ತಮ. ಹಿರಿಯ, ಅನುಭವಿ ನಿರ್ದೇಶಕರ ಸಲಹೆ, ಮಾರ್ಗದರ್ಶನ ಪಡೆದುಕೊಂಡಲ್ಲಿ ಈ ತಂಡ ಇನ್ನಷ್ಟು ಉತ್ತಮ ಚಿತ್ರಗಳನ್ನು ಕೊಡಬಲ್ಲುದೆಂಬ ಭರವಸೆಯಿಡಬಹುದು. ಉತ್ತರ ಕರ್ನಾಟಕದಲ್ಲಿ ಚಿತ್ರೋದ್ಯಮ ಬೆಳೆಯಬೇಕಾದ ಅಗತ್ಯವಿದೆ. ಇಂತಹ ಸಾಹಸಗಳಿಗೆ ಬಂಡವಾಳದಾರರ ನೆರವು ಮತ್ತು ಪ್ರೇಕ್ಷಕರ ಉತ್ತೇಜನ ಸಿಗಬೇಕಾಗಿದೆ. ತಪ್ಪದೇ ನೋಡಿ

LEAVE A REPLY

Please enter your comment!
Please enter your name here