ಗಾಲಿ ರೆಡ್ಡಿಗೆ ಬಿಜೆಪಿ ವರಿಷ್ಟರ ಬೇಲಿ?

0
99

ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯಲು ಹೊರಟ ಬಿಜೆಪಿ ವರಿಷ್ಟರಿಗೆ ಈಗ ಗಾಲಿ ಜನಾರ್ಧನ ರೆಡ್ಡಿ ಮೇಲೆ ಸಿಟ್ಟು ಬಂದಿದೆಯಂತೆ.
ಇತ್ತೀಚೆಗೆ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದಾಗ ಮೋದಿ-ಅಮಿತ್ ಷಾ ಜೋಡಿಗೆ ಪಾಸಿಟಿವ್ ಸಂದೇಶ ರವಾನೆಯಾಗಿತ್ತು.
ಎಷ್ಟೇ ಆದರೂ ಜನಾರ್ಧನರೆಡ್ಡಿ ಅವರ ಪಕ್ಷ ಹೈದ್ರಾಬಾದ್-ಕರ್ನಾಟಕದ ಜಿಲ್ಲೆಗಳನ್ನು ಕೇಂದ್ರೀಕರಿಸಿಕೊಂಡಿದೆ.ಬಳ್ಳಾರಿ,ವಿಜಯ ನಗರ,ರಾಯಚೂರು,ಕೊಪ್ಪಳ ಸೇರಿದಂತೆ ಅದು ತಲೆ ಎತ್ತುತ್ತಿರುವ ಜಿಲ್ಲೆಗಳಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ನಡುವೆ ಫೈಟು ಇದೆ.
ಇಂತಲ್ಲಿ ಜನಾರ್ಧನರೆಡ್ಡಿ ಅವರ ಪಕ್ಷ ಕಾಂಗ್ರೆಸ್ಸಿನ ಅತೃಪ್ತರನ್ನು ಸೆಳೆದರೆ,ಮುಸ್ಲಿಂ ಮತಗಳನ್ನು ಡಿವೈಡ್ ಮಾಡಿದರೆ ಅದರಿಂದ ಕಾಂಗ್ರೆಸ್ಸಿಗೆ ಹಾನಿಯಾಗಿ,ಬಿಜೆಪಿಗೆ ಅನುಕೂಲವಾಗುತ್ತದೆ ಎಂಬುದು ಈ ಸಂದೇಶ.
ಆದರೆ ದಿನ ಕಳೆದಂತೆ ಜನಾರ್ಧನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾಂಗ್ರೆಸ್ಸಿಗಿಂತ ಹೆಚ್ಚಾಗಿ ಬಿಜೆಪಿಗೇ ಡ್ಯಾಮೇಜು ಮಾಡುತ್ತದೆ ಎಂಬ ವರದಿ ಕಮಲ ಪಾಳೆಯವನ್ನು ತಬ್ಬಿಬ್ಬುಗೊಳಿಸಿದೆ.
ಕಾರಣ?ಪಕ್ಷ ಕಟ್ಟಲು ಹೊರಟ ಜನಾರ್ಧನರೆಡ್ಡಿ ಅವರ ಗಾಳಕ್ಕೆ ಕಾಂಗ್ರೆಸ್ ಕೊಳಕ್ಕಿಂತ,ಬಿಜೆಪಿ ಕೊಳದಲ್ಲೇ ಹೆಚ್ಚು ಮೀನುಗಳು ಸಿಗತೊಡಗಿವೆ.ಅರ್ಥಾತ್,ಕಾಂಗ್ರೆಸ್ಸಿನ ಅತೃಪ್ತರಿಗಿಂತ ಬಿಜೆಪಿಯ ಅತೃಪ್ತರೇ ಹೆಚ್ಚಿನ ಸಂಖ್ಯೆಯಲ್ಲಿ ‘ಗಾಲಿ’ ಪಾಳೆಯಕ್ಕೆ ಸೇರತೊಡಗಿದ್ದಾರೆ.ಕಾರಣ?ಇಷ್ಟು ವರ್ಷಗಳ ಕಾಲ ಜನಾರ್ಧನರೆಡ್ಡಿ ಬಿಜೆಪಿಯಲ್ಲೇ‌ ಇದ್ದವರು.ಹೀಗಾಗಿ ಅಲ್ಲಿರುವವರ ಜತೆ ಅವರಿಗೆ ಆತ್ಮೀಯತೆ ಇದೆ.
ಆದರೆ ಜನಾರ್ಧನರೆಡ್ಡಿ ಅವರ ಹವಾ ನಡೆಯುತ್ತಿದ್ದ ಕಾಲದಲ್ಲಿ ಅದರ ಬಿಸಿಗೆ ಬೆಂದವರು ಕಾಂಗ್ರೆಸ್ಸಿಗರು.ಹೀಗಾಗಿ ರೆಡ್ಡಿಗಾರು ಜತೆ ಸೇರಲು ಕಾಂಗ್ರೆಸ್ಸಿಗರು ಉತ್ಸಾಹ ತೋರಿಸುತ್ತಿಲ್ಲ.ಬದಲಿಗೆ ಬಿಜೆಪಿ ಪಾಳೆಯದಿಂದಲೇ ಹೆಚ್ಚಿನ ಜನ ಬರುತ್ತಿದ್ದಾರೆ.
ಅಂದ ಹಾಗೆ ರೆಡ್ಡಿಗಾರು ಕಟ್ಟಿದ ಹೊಸ ಪಕ್ಷಕ್ಕಿರುವುದು ಮೂವತ್ತು ಕ್ಷೇತ್ರಗಳ ಟಾರ್ಗೆಟ್.ಮತ್ತು ಬಹುತೇಕ ಕ್ಷೇತ್ರಗಳಲ್ಲಿ ಅದು ಮೂರರಿಂದ ಐದು ಸಾವಿರ ಮತಗಳನ್ನು ಪಡೆಯಬಹುದು.ಸಹಜವಾಗಿ ಅದರ ಗಳಿಕೆಯಿಂದ ಹಾನಿ ಅನುಭವಿಸುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ.
ಹೀಗಾಗಿ ಒಂದೋ ಜನಾರ್ಧನರೆಡ್ಡಿ ಜತೆ ಮಾತುಕತೆ ನಡೆಸಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಿ.ಸಿಂಧನೂರು ವಿಧಾನಸಭಾ ಕ್ಷೇತ್ರದಿಂದಲೋ,ಇನ್ನೆಲ್ಲಿಂದಲೋ ಸ್ಪರ್ಧಿಸಲು ಟಿಕೆಟ್ಟು ಕೊಡಿ.ಇಲ್ಲವೇ ಹಳೆಯ ಕೇಸುಗಳನ್ನು ಮೇಲೆತ್ತಿ ಅವರಿಗೆ ಹಳೆ ರುಚಿ ತೋರಿಸಿ ಎಂಬುದು ಬಿಜೆಪಿ ನಾಯಕರ ಮಾತು.
ಅಂದರೆ?ಇದ್ದಕ್ಕಿದ್ದಂತೆ ಜನಾರ್ಧನರೆಡ್ಡಿ ಹೆಸರು ರಾಜ್ಯ ರಾಜಕೀಯದ ಅಂಗಳದಲ್ಲಿ ಪಟಪಟಿಸತೊಡಗಿದೆ.

ಗಾಲಿಗೆ ಸಂತೋಷ್ ಬ್ರೇಕ್

ಕುತೂಹಲದ ಸಂಗತಿ ಎಂದರೆ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಜನಾರ್ಧನ ರೆಡ್ಡಿ ಅವರ ಪಕ್ಷಕ್ಕೆ ಹವಾ ಇದೆ ಎಂಬ ವರದಿ ಬಂದಾಗ ಸಿಎಂ ಬೊಮ್ಮಾಯಿ ಆ ಕಡೆ ನೋಡಿದ್ದರಂತೆ.
ಅದರಲ್ಲೂ ತಮ್ಮ ಸಂಪುಟದ ಸಹೋದ್ಯೋಗಿ,ಸಾರಿಗೆ ಸಚಿವ ಶ್ರೀರಾಮುಲು ಇದಕ್ಕೆ ತುಪ್ಪ ಸುರಿದಾಗ,ಜನಾರ್ಧನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಒಲವು ತೋರಿಸಿದ್ದರಂತೆ.
ಆದರೆ ಬಿಜೆಪಿ ಪಾಳೆಯಕ್ಕೆ ಗಾಲಿ ಹರಿದು ಬರಲು ಬಿ.ಎಲ್.ಸಂತೋಷ್ ಬ್ರೇಕ್ ಹಾಕಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿದ್ದಾಗ,ಗಣಿ ಸಾಮ್ರಾಜ್ಯದ ಅಬ್ಬರ ನಡೆಯುತ್ತಿದ್ದಾಗ ಜನಾರ್ಧನ ರೆಡ್ಡಿ ನಡೆದುಕೊಳ್ಳುತ್ತಿದ್ದ ರೀತಿಯೇ ಸಂತೋಷ್ ಅವರ ಅಸಮಾಧಾನಕ್ಕೆ ಕಾರಣ.ಅಂದ ಹಾಗೆ ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟವರೇ ಜನಾರ್ಧನ ರೆಡ್ಡಿ.
2008 ರಲ್ಲಿ ಪಕ್ಷ ಅಧಿಕಾರ ಹಿಡಿಯಲು ಅವರು ನೀಡಿದ ಸಹಕಾರ ದೊಡ್ಡದೇ.ಆದರೆ 2013 ರ ಹೊತ್ತಿಗೆ ಬಿಜೆಪಿಯ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದರಲ್ಲಿ ಜನಾರ್ಧನ ರೆಡ್ಡಿ ಪಾತ್ರ ಇನ್ನೂ ದೊಡ್ಡದು ಅಂತ ಸಂತೋಷ್ ಕೊಟ್ಟ ವರದಿ ಮೋದಿ-ಷಾ ಟೇಬಲ್ಲಿಗೆ ತಲುಪಿತ್ತು.
ಪರಿಣಾಮ?ಅದೇನೇ ಕಸರತ್ತು ಮಾಡಿದರೂ ಜನಾರ್ಧನ ರೆಡ್ಡಿಯವರಿಗೆ ಕಮಲ ಪಾಳೆಯದ ಬಾಗಿಲು ಓಪನ್ ಆಗಲಿಲ್ಲ.

ಶ್ರೀರಾಮುಲು ಬಗ್ಗೆ ರೆಡ್ಡಿಗಾರು ಅನುಮಾನ?

ಅಂದ ಹಾಗೆ ಜನಾರ್ಧನ ರೆಡ್ಡಿ ಅವರಿಗೆ ಬಿಜೆಪಿ ಬಾಗಿಲು ತೆರೆಯಲಿ ಅಂತ ಅವರ ಜೀವದ ಗೆಳೆಯ ಶ್ರೀರಾಮುಲು ಪ್ರಯತ್ನಿಸಿದ್ದು ನಿಜವಾದರೂ ಗಾಲಿಗೆ ಅನುಮಾನ ಶುರುವಾಗಿದೆಯಂತೆ.
ಕೆಲ ಮೂಲಗಳ ಪ್ರಕಾರ,ಶ್ರೀರಾಮುಲು ಬಗ್ಗೆ ಜನಾರ್ಧನ ರೆಡ್ಡಿ ಅವರಿಗೆ ಅನುಮಾನ ಮೂಡಲು ಕಾರಣರಾದವರು ಅವರ ಪತ್ನಿ ಶ್ರೀಮತಿ ಅರುಣಾ ಲಕ್ಷ್ಮಿ.ಇವತ್ತು ಬಳ್ಳಾರಿಯಿಂದ ಬೆಂಗಳೂರಿಗೆ ಶ್ರೀರಾಮುಲು ತಲುಪಿದ್ದರೆ ಅದಕ್ಕೆ ನೀವು ಕಾರಣ.ಆದರೆ ಇವತ್ತು ನೀವು ಸಂಕಟಕ್ಕೆ ಸಿಲುಕಿದ್ದೀರಿ.ಶ್ರೀರಾಮುಲು ಮಾತ್ರ ಅಧಿಕಾರ ಅನುಭವಿಸುತ್ತಿದ್ದಾರೆ.
ಹೋಗಲಿ,ನೀವು ಪುನ: ಬಿಜೆಪಿಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಬಹುದು ಎಂದುಕೊಂಡರೆ,ಅದಕ್ಕೆ ಅಡ್ಡಗಾಲು ಹಾಕುತ್ತಿರುವವರೇ ಶ್ರೀರಾಮುಲು.ಅವರಿಗೆ ನೀವು ರಾಜಕಾರಣದಲ್ಲಿ ಬೆಳೆಯುವುದು ಬೇಕಿಲ್ಲ.ಈಗ ಅಧಿಕಾರದಲ್ಲಿದ್ದು ಶಕ್ತಿ ಬೆಳೆಸಿಕೊಂಡಿರುವುದರಿಂದ ನಿಮ್ಮ ಅಗತ್ಯವೂ ಅವರಿಗಿಲ್ಲ ಅಂತ ಪತ್ನಿ ಅರುಣಾ ಲಕ್ಷ್ಮಿಯವರು ಹೇಳಿದ್ದು ಗಾಲಿ ನೆತ್ತಿಗೆ ನಾಟಿತಂತೆ.
ಇವತ್ತು ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮೇಲೆದ್ದು ನಿಲ್ಲಲು ಇದು ಮೂಲ ಎಂಬುದು ಈಗ ಚಾಲ್ತಿಯಲ್ಲಿರುವ ಮಾತು.
ಅದೇನೇ ಇರಲಿ,ಒಟ್ಟಿನಲ್ಲಿ ಮೇಲೆದ್ದು ನಿಂತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹವಾ ಒಂದು ಮಟ್ಟಿಗೆ ಶುರುವಾಗಿದೆ.ಖುದ್ದು ಜನಾರ್ಧನ ರೆಡ್ಡಿಯವರು ಗಂಗಾವತಿಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರೆ,ಅವರ ಪತ್ನಿ ಶ್ರೀ ಮತಿ ಅರುಣಾ ಲಕ್ಷ್ಮಿಯವರು ಬಳ್ಳಾರಿ ನಗರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಬಳ್ಳಾರಿಯಲ್ಲಿ ಅರುಣಾ ಲಕ್ಷ್ಮಿ ಅವರಿಗೆ ಎದುರಾಗುತ್ತಿರುವವರು ಜನಾರ್ಧನ ರೆಡ್ಡಿಯವರ ಸಹೋದರ ಸೋಮಶೇಖರರೆಡ್ಡಿ ಎಂಬುದು ಕುತೂಹಲಕಾರಿ.
ಅಂದ ಹಾಗೆ ಇವರಿಬ್ಬರು ಎದುರಾಳಿಗಳಾಗುತ್ತಿರುವುದು ವೈರತ್ವದ ಲಕ್ಷಣ ಎಂದು ಬಣ್ಣಿಸಲಾಗುತ್ತಿದೆಯಾದರೂ,
ಇಲ್ಲೊಂದು ಟ್ವಿಸ್ಟ್ ಇದೆ.
ಅದೆಂದರೆ ಅರುಣಾ ಲಕ್ಷ್ಮಿಯವರನ್ನು ಕಣಕ್ಕಿಳಿಸಲು ಜನಾರ್ಧನ ರೆಡ್ಡಿ ಅವರಿಗೆ ಸಿಕ್ಕ ಒಂದು ಮೆಸೇಜು ಕಾರಣ.ಅದೆಂದರೆ ಬಿಜೆಪಿ ವತಿಯಿಂದ ಶಾಸಕರಾಗಿರುವ ಸೋಮಶೇಖರರೆಡ್ಡಿ ಅವರಿಗೆ ಈ ಬಾರಿ ಟಿಕೆಟ್ ನೀಡಲು ಕಮಲ ಪಾಳೆಯ ಹಿಂದೆ ಮುಂದೆ ನೋಡುತ್ತಿದೆ.ಹಾಗೇನಾದರೂ ಆದರೆ ತಮ್ಮ ಕುಟುಂಬದ ಹಿಡಿತದಿಂದ ಕ್ಷೇತ್ರ ತಪ್ಪಬಾರದು ಎಂಬುದು ಜನಾರ್ಧನರೆಡ್ಡಿ ಲೆಕ್ಕಾಚಾರ.
ಅದೇ ರೀತಿ ತಮ್ಮ ಪತ್ನಿ ಕಣಕ್ಕಿಳಿಯುವುದಾಗಿ ಹೇಳಿರುವುದರಿಂದ ಬಿಜೆಪಿ ವರಿಷ್ಟರು ತಮ್ಮ ನಿರ್ಧಾರ ಬದಲಿಸಿ,ಸೋಮಶೇಖರರೆಡ್ಡಿ ಅವರಿಗೇ ಮತ್ತೆ ಟಿಕೆಟ್ ಕೊಡಬಹುದು ಎಂಬುದು ಜನಾರ್ಧನ ರೆಡ್ಡಿ ಯೋಚನೆ.
ಅರ್ಥಾತ್,ಮೇಲ್ನೋಟಕ್ಕೆ ಹೇಗೇ‌ ಕಂಡರೂ ರೆಡ್ಡಿ ಬ್ರದರ್ಸ್ ಒಗ್ಗಟ್ಟಾಗಿಯೇ ಇದ್ದಾರೆ.ಅಷ್ಟೇ ಅಲ್ಲ,ಬಿಜೆಪಿಗೆ ಹಲ್ವಾ ತಿನ್ನಿಸಲು ನಿರ್ಧರಿಸಿದ್ದಾರೆ ಎಂಬುದು ಹಲವರ ಅನುಮಾನ.
ಪರಿಣಾಮ?ಒಂದು ಮಟ್ಟದಲ್ಲಾದರೂ ಮೇಲೇಳುತ್ತಿರುವ ಗಾಲಿ ಜನಾರ್ಧನ ರೆಡ್ಡಿ ಹವಾಕ್ಕೆ ಬ್ರೇಕ್ ಹಾಕಬೇಕು ಎಂಬ ಮೆಸೇಜು ಬಿಜೆಪಿ ವರಿಷ್ಟರಿಗೆ ತಲುಪಿದೆ.ಈ ಮೆಸೇಜನ್ನು ಅವರು ನಿಶ್ಚಿತವಾಗಿ ವಿಕೋಪಕ್ಕೆ ತೆಗೆದುಕೊಂಡು ಹೋಗುತ್ತಾರೆ.ಆ ಮೂಲಕ ಗಾಲಿಗೆ ಹಿಂದಿನಂತೆಯೇ ಸಂಕಷ್ಟದ ದಿನಗಳು ಎದುರಾಗಲಿವೆ ಎಂಬುದು ಹಲವರ ಗುಸು-ಗುಸು.

ಹೊಸ ಚಿಂತೆಗೆ ಬಿದ್ದರು ಕುಮಾರಸ್ವಾಮಿ

ಇನ್ನು ಪಂಚರತ್ನ ಯಾತ್ರೆಯ ಮೂಲಕ ಎದುರಾಳಿ ಪಕ್ಷಗಳು ಅಚ್ಚರಿಗೊಳ್ಳುವಂತೆ ಮಾಡಿದ್ದ ಜೆಡಿಎಸ್ ಪಾಳೆಯದಲ್ಲಿ ‘ಮನೆ ಗದ್ದಲ’ದ ಸದ್ದು ಕೇಳುತ್ತಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಷಯವೇ ಈ ಗದ್ದಲದ ಮೂಲ.ಅಂದ ಹಾಗೆ ಹಾಸನದಲ್ಲಿ ದಾಸ ಒಕ್ಕಲಿಗ ಮತಗಳು ಸಾಲಿಡ್ ಆಗಿರುವುದರಿಂದ ಮಾಜಿ ಶಾಸಕ,ದಿವಂಗತ ಪ್ರಕಾಶ್ ಅವರ ಪುತ್ರ ಸ್ವರೂಪ್ ಅವರಿಗೆ ಪಕ್ಷದ ಟಿಕೆಟ್ ಕೊಡುವುದು ಹೆಚ್.ಡಿ.ಕುಮಾರಸ್ವಾಮಿ ಅವರ ಯೋಚನೆ.
ಆದರೆ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ತಮಗೆ ಸವಾಲು ಹಾಕುತ್ತಿರುವುದರಿಂದ ಕೆರಳಿದ ಹೆಚ್.ಡಿ.ರೇವಣ್ಣ,ಈ ಕ್ಷೇತ್ರದಲ್ಲಿ ತಮ್ಮ ಪತ್ನಿ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸಲು ಬಯಸಿದ್ದಾರೆ.
ಹೀಗೆ ಕುಮಾರಸ್ವಾಮಿ-ರೇವಣ್ಣ ಅವರ ಬಯಕೆಗಳು ಪರಸ್ಪರ ಘರ್ಷಿಸಿರುವುದೇ ಗೌಡ್ರ ಮನೆ ಗದ್ದಲಕ್ಕೆ ಮೂಲ ಕಾರಣ.
ಈ ಮಧ್ಯೆ ರೇವಣ್ಣ ಅವರ ಪುತ್ರ ಸೂರಜ್ ಅವರು,ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಅನ್ನುವಂತಹ ಮಾತು ಬಿಡಬೇಕು.ಭವಾನಿ ರೇವಣ್ಣ ಅವರು ಸ್ಪರ್ದಿಸಿದರೆ ಗೆಲುವು ನಿಶ್ಚಿತ ಎಂಬುದನ್ನು ಮರೆಯಬಾರದು.ಇವತ್ತು ಜಿಲ್ಲೆಯಲ್ಲಿ ರೇವಣ್ಣ ಅವರಂತಹ ನಾಯಕರು ಮತ್ತೊಬ್ಬರಿಲ್ಲ ಎಂಬ ಧಾಟಿಯಲ್ಲಿ ಮಾತನಾಡಿದ್ದು ಕುಮಾರಸ್ವಾಮಿಯವರ ಬೆಂಬಲಿಗರನ್ನು ಕೆರಳಿಸಿದ್ದು ಸಹಜವೇ.
ಪರಿಣಾಮ?ರೇವಣ್ಣ ಮತ್ತವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಬೆಂಬಲಿಗರು ಯುದ್ದಕ್ಕಿಳಿದರು.ನಂತರ ರೇವಣ್ಣ ಎಂಟ್ರಿಯಾಗಿ,ಕುಮಾರಸ್ವಾಮಿ ಅವರೇ ನಮ್ಮ ನಾಯಕ ಎಂದ ಮೇಲೆ ಪರಿಸ್ಥಿತಿ ತಣ್ಣಗಾಯಿತೇನೋ ನಿಜ.
ಆದರೆ ಹಾಸನದ ಟಿಕೆಟ್ ವಿಷಯದಲ್ಲಿ ಕುಮಾರಸ್ವಾಮಿ,ರೇವಣ್ಣ ಇಬ್ಬರ ನಿಲುವೂ ಬದಲಾಗಿಲ್ಲ.
ಕುಮಾರಸ್ವಾಮಿ ಅವರು ಸ್ವರೂಪ್ ರನ್ನು ಕರೆಸಿ:ನಿಮಗೆ ಪಕ್ಷದ ಟಿಕೆಟ್ ಗ್ಯಾರಂಟಿ.ಹೋಗಿ ಪ್ರಚಾರದ ಕಡೆ ಗಮನ ಕೊಡಿ ಎಂದು ಹೇಳಿದರೆ,ರೇವಣ್ಣ ಮಾತ್ರ,ದೇವೇಗೌಡ್ರು,ಕುಮಾರಸ್ವಾಮಿ ಮತ್ತು ಪಕ್ಷದ ಅಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರು ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತ ಅಡ್ಡೇಟು ಹಾಕಿದ್ದಾರೆ.
ಆದರೆ ಈ ನಡುವೆ ಏನೋ ಮಿಸ್ ಹೊಡೆಯುತ್ತಿದೆ ಅಂತ ಕುಮಾರಸ್ವಾಮಿ ಅವರಿಗೆ ಅನುಮಾನ ಕಾಡುತ್ತಿದೆಯಂತೆ.
ಹಾಸನ ಕ್ಷೇತ್ರದ ಟಿಕೆಟ್ ಗೆ ಸಂಬಂಧಿಸಿದಂತೆ ರೇವಣ್ಣ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರಿಂದ ಎ,ಬಿ,ಸಿ ಫಾರಂಗಳನ್ನು ಮುಂಚಿತವಾಗಿ ಪಡೆದುಕೊಂಡು ಬಿಟ್ಟಿದ್ದಾರಾ?ಎಂಬುದು ಈ ಅನುಮಾನ.
ಎಷ್ಟೇ ಆದರೂ ದೇವೇಗೌಡರಿಗೆ ರೇವಣ್ಣ ಎಂದರೆ ಪರಮ ಪ್ರೀತಿ.ಮತ್ತು ಈ ಕಾರಣಕ್ಕಾಗಿ ಅವರು ಮುಂಚಿತವಾಗಿ ಎ,ಬಿ ಮತ್ತು ಸಿ ಫಾರಂಗಳನ್ನು ಭವಾನಿ ರೇವಣ್ಣ ಅವರಿಗೆ ಕೊಟ್ಟು ಬಿಟ್ಟಿದ್ದರೆ ಕುಮಾರಸ್ವಾಮಿ ಅಸಹಾಯಕರಾಗುತ್ತಾರೆ.
ಯಾಕೆಂದರೆ ಇಂತವರಿಗೆ ಟಿಕೆಟ್ ನೀಡಿದ್ದೇವೆ ಅಂತ ಚುನಾವಣಾ ಆಯೋಗಕ್ಕೆ ಕೊಡಲು ಎ ಮತ್ತು ಬಿ ಫಾರಂ ಕೊಡಲಾಗುತ್ತದೆ.ಒಂದು ವೇಳೆ ಒಬ್ಬರಿಗೆ ಕೊಟ್ಟ ಎ,ಬಿ ಫಾರಂಗಳನ್ನು ಅನೂರ್ಜಿತಗೊಳಿಸಿ,ಬೇರೆಯವರಿಗೆ ಟಿಕೆಟ್ ಕೊಡಬೇಕೆಂದರೆ ಸಿ ಫಾರಂ ಕೊಡುವುದು ವಾಡಿಕೆ.
ಆದರೆ ಈಗಾಗಲೇ ಭವಾನಿ ರೇವಣ್ಣನವರ ಹೆಸರಿಗೆ ದೇವೇಗೌಡರು ಎ,ಬಿ,ಸಿ ಫಾರಂಗಳನ್ನು ಬರೆದುಕೊಟ್ಟು ಬಿಟ್ಟಿದ್ದರೆ ಸ್ವರೂಪ್ ಅವರಿಗೆ ಟಿಕೆಟ್ ಕೊಡಿಸುವ ಕುಮಾರಸ್ವಾಮಿಯವರ ಇಚ್ಚೆ ಭಗ್ನವಾಗುತ್ತದೆ.
ಹಾಗಂತ ಈಗಲೇ ಈ ವಿಷಯದ ಬಗ್ಗೆ ದೇವೇಗೌಡರ ಜತೆ ಮಾತನಾಡುವುದು ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲ.ಯಾಕೆಂದರೆ ಈಗಾಗಲೇ ದೇವೇಗೌಡರು ಬಳಲಿದ್ದಾರೆ.ಹೀಗಾಗಿ ತಾವು ಮಾಡುವ ಪ್ರಸ್ತಾಪ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದು ಕುಮಾರಸ್ವಾಮಿ ಅವರ ಚಿಂತೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here