ಬಿಜೆಪಿ ಗೆದ್ದರೆ ಯಾರಾಗ್ತಾರೆ ಸಿಎಂ?

0
112

ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ನಾಯಕರೊಬ್ಬರನ್ನು ಸಿಎಂ ಮಾಡಲು ಬಿಜೆಪಿ ವರಿಷ್ಟರು ನಿರ್ಧರಿಸಿದ್ದಾರಂತೆ.
ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಬಂದು ಹೋಗುತ್ತಿದ್ದಂತೆಯೇ ಕಮಲ ಪಾಳೆಯದಲ್ಲಿ ಹರಡಿರುವ ಈ ಸುದ್ದಿ ಕುತೂಹಲ ಕೆರಳಿಸುವಂತಿದೆ.
ಹಿಂದುಳಿದ ವರ್ಗಕ್ಕೆ ಸೇರಿದವರನ್ನು ಸಿಎಂ ಮಾಡಿ,ದಲಿತರೊಬ್ಬರನ್ನು ಡಿಸಿಎಂ ಮಾಡಿದರೆ ಕರ್ನಾಟಕದ ರಾಜಕಾರಣದಲ್ಲಿ ಬಿಜೆಪಿ ನೆಲೆಯಾಗುತ್ತದೆ ಎಂಬುದು ಮೋದಿ-ಅಮಿತ್ ಷಾರ ಈಗಿನ ಲೆಕ್ಕಾಚಾರವಂತೆ.
ಕಾರಣ?ಪಕ್ಷಕ್ಕೆ ಬಲಿಷ್ಟ ವರ್ಗದವರು ಮೂಲ ಶಕ್ತಿಯಾದರೆ ಬಯಸಿದಾಗ ಅವರನ್ನಿಳಿಸುವುದು ಕಷ್ಟ.ಅಂದ ಹಾಗೆ ಪಕ್ಷಕ್ಕೆ ಬಲಿಷ್ಟ ವರ್ಗಗಳ ಬೆಂಬಲ ಬೇಕು.ಆದರೆ ಆ ವರ್ಗ ಬಯಸಿದಂತೆಯೇ ಹೆಜ್ಜೆ ಇಡುವುದು ಕಷ್ಟದ ಕೆಲಸ ಎಂಬುದು ಮೋದಿ-ಅಮಿತ್ ಷಾ ಅವರ ಯೋಚನೆ.
ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ನೆಲೆಯಲ್ಲಿ ಒಂದು ಬಲಿಷ್ಟ ವರ್ಗದ ಬೆಂಬಲ ಸಿಕ್ಕರೆ,ಮತ್ತೊಂದು ಬಲಿಷ್ಟ ವರ್ಗದ ಬೆಂಬಲ ಸಿಗುವುದು ಕಷ್ಟ.
ಕಳೆದ ಎರಡು ದಶಕಗಳ ಕಾಲ ಪಕ್ಷವನ್ನು ಲಿಂಗಾಯತರು ಬೆಂಬಲಿಸುತ್ತಾ ಬಂದಿದ್ದರಾದರೂ ಈ ಬಾರಿ ಅವರು ಸಾಲಿಡ್ಡಾಗಿ ಬಿಜೆಪಿ ಜತೆ ನಿಲ್ಲುವುದಿಲ್ಲ.
ಕಾರಣ?ಇದುವರೆಗೆ ಅವರ ಕಣ್ಣಿಗೆ ಭವಿಷ್ಯದ ನಾಯಕರಂತೆ ಕಾಣುತ್ತಿದ್ದ ಯಡಿಯೂರಪ್ಪ ಈಗ ಸೈಡ್ ವಿಂಗಿಗೆ ಸರಿಯುತ್ತಿದ್ದಾರೆ.ಚುನಾವಣೆಯ ನಂತರ ಬೊಮ್ಮಾಯಿ ಅವರನ್ನು ಮರಳಿ ಸಿಎಂ ಮಾಡುವ ಲಕ್ಷಣವೂ ಕಾಣುತ್ತಿಲ್ಲ
ಹೀಗಾಗಿ ಈ ಬಾರಿ ಲಿಂಗಾಯತ ಮತ ಬ್ಯಾಂಕ್,ಲೋಕಲ್ ಷೇರುಗಳ ಖರೀದಿಗೆ ಆದ್ಯತೆ ಕೊಡುತ್ತದೆಯೇ ಹೊರತು ಸ್ಟೇಟ್ ಲೆವೆಲ್ ಷೇರಿಗೆ ಕೈ ಹಾಕುವುದಿಲ್ಲ ಎಂಬುದು ಮೋದಿ-ಅಮಿತ್ ಷಾ ಅವರಿಗೆ ತಲುಪಿರುವ ಮಾಹಿತಿ.
ಈ ಮಧ್ಯೆ ಸಾಮೂಹಿಕ ನಾಯಕತ್ವದ ಮಾತನಾಡಿ ಎಲ್ಲ ವರ್ಗಗಳ ಮತ ಪಡೆದು ನಂತರ ಪೇಶ್ವೆ ಮೂಲದ ಬ್ರಾಹ್ಮಣ ಪ್ರಹ್ಲಾದ್ ಜೋಷಿ ಅವರನ್ನು ಸಿಎಂ ಮಾಡಲು ಆರೆಸ್ಸೆಸ್ ಹುನ್ನಾರ ನಡೆಸಿದೆ ಎಂಬ ಕುಮಾರಸ್ವಾಮಿ ಮಾತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಪಾಳೆಯವನ್ನು ತಲ್ಲಣಗೊಳಿಸಿದೆ.
ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಮೋದಿ-ಅಮಿತ್ ಷಾ ಜೋಡಿ ತನ್ನ ಗೇಮ್ ಪ್ಲಾನನ್ನು ಬದಲಿಸಿದೆಯಂತೆ.
ಅದರ ಪ್ರಕಾರ,ಮುಂದಿನ ಚುನಾವಣೆಯಲ್ಲಿ ಗೆದ್ದು ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ಸಮುದಾಯದವರನ್ನು ಮುಖ್ಯಮಂತ್ರಿ ಹುದ್ದೆಗೇರಿಸುವುದು,ದಲಿತ ಸಮುದಾಯದವನ್ನು ಉಪಮುಖ್ಯಮಂತ್ರಿ ಹುದ್ದೆಗೇರಿಸುವುದು ಮೋದಿ-ಅಮಿತ್ ಷಾ ಜೋಡಿಯ ಲೆಕ್ಕಾಚಾರ.
ಈ ಪೈಕಿ ಉಪಮುಖ್ಯಮಂತ್ರಿ ಹುದ್ದೆಗೆ ಅವತ್ತಿನ ಸನ್ನಿವೇಶಕ್ಕೆ ಅನುಗುಣವಾಗಿ ಇನ್ನಷ್ಟು ಮಂದಿ ಬರಬಹುದು.
ಆದರೆ ಮುಖ್ಯಮಂತ್ರಿ ಹುದ್ದೆಗೆ ಹಿಂದುಳಿದ ಸಮುದಾಯದವರೊಬ್ಬರನ್ನು ತರಲೇಬೇಕು ಅಂತ ಅದು ಸಂಕಲ್ಪ ಮಾಡಿದೆಯಂತೆ.
ಈ ಲೆಕ್ಕಾಚಾರ ಹಾಗೇ‌ ಇರುತ್ತದೋ ಅಥವಾ ಬದಲಾಗುತ್ತದೋ ಗೊತ್ತಿಲ್ಲ.ಆದರೆ ಸಧ್ಯದ ಸ್ಥಿತಿಯಲ್ಲಂತೂ ಈ ಹಿಂದುಳಿದ ವರ್ಗದ ನಾಯಕ ಯಾರು?ಎಂಬ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಕುತೂಹಲ ಶುರುವಾಗಿದೆ.

ಅಮಿತ್ ಷಾ ಹಾಗೇಕೆ ಮಾಡಿದರು?

ಅಂದ ಹಾಗೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಕ್ಷದ ವಿಭಾಗೀಯ ಮಟ್ಟದ ಸಭೆಗೆ ಅಮಿತ್ ಷಾ ಬಂದಿದ್ದರು.
ಮಂಗಳೂರು,ಉಡುಪಿ,ಶಿವಮೊಗ್ಗ,ಚಿಕ್ಕಮಗಳೂರು,ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಮೂವತ್ಮೂರು ಕ್ಷೇತ್ರಗಳ 29 ಮಂದಿ ಶಾಸಕರು,ಸಂಸದರು ಸೇರಿದಂತೆ ನೂರೈವತ್ತು ಮಂದಿ ಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಒಂದು ಅಚ್ಚರಿಯ ಬೆಳವಣಿಗೆ ನಡೆಯಿತು.
ಅದೆಂದರೆ,ಅವತ್ತಿನ ಸಭೆಯ ವೇದಿಕೆಯಲ್ಲಿ ನಾಲ್ಕು ಮಂದಿಗೆ ಖುರ್ಚಿ ಹಾಕಲಾಗಿತ್ತು.ಈ ಖುರ್ಚಿಯಲ್ಲಿ ಯಾರ್ಯಾರು ಬಂದು ಕೂರಬಹುದು ಅಂತ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾಗ ಅಮಿತ್ ಷಾ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಲ್ಲಿಗೆ ಬಂದರು.
ಆದರೆ ಈ ಸಂದರ್ಭದಲ್ಲಿ ನಿಂತೇ‌ ಇದ್ದ ಅಮಿತ್ ಷಾ ಅಲ್ಲಿದ್ದ ನಾಲ್ಕು ಖುರ್ಚಿಗಳನ್ನು ನೋಡಿ ಮತ್ತೊಂದು ಖುರ್ಚಿ ತರಲು ಸೂಚಿಸಿದರು.
ನಂತರ ಸಭೆಯ ಕಡೆ ಕಣ್ಣು ಹಾಯಿಸಿ ಯಾರನ್ನೋ ಹುಡುಕತೊಡಗಿದ ಷಾ,
ಕೊನೆಗೊಮ್ಮೆ ಎರಡನೇ ಸಾಲಿನಲ್ಲಿ ಕುಳಿತಿದ್ದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಕರೆದು ತಮ್ಮ ಬಳಿ ಕೂರಿಸಿಕೊಂಡರಂತೆ.
ಅಮಿತ್ ಷಾ ಅವರ ಈ ನಡೆ ಹಲವರಿಗೆ ಒಂದು ಅನುಮಾನ ಮೂಡಿಸಿದೆ.ವರಿಷ್ಟರು ಹುಡುಕುತ್ತಿರುವ ಹಿಂದುಳಿದ ವರ್ಗದ ಸಿಎಂ ಕ್ಯಾಂಡಿಡೇಟ್ ಈಶ್ವರಪ್ಪ ಅವರೇ ಇರಬಹುದಾ?ಎಂಬುದು ಈ ಅನುಮಾನ.
ಅಂದ ಹಾಗೆ ಆರೋಪವೊಂದಕ್ಕೆ ಸಿಲುಕಿ ಬೊಮ್ಮಾಯಿ ಸಂಪುಟದಿಂದ ಹೊರಬಂದ ಕೆ.ಎಸ್.ಈಶ್ವರಪ್ಪ ಈ ಕ್ಷಣದವರೆಗೆ ಮರಳಿ ಮಂತ್ರಿಯಾಗಲು ಸಾಧ್ಯವಾಗಿಲ್ಲ.
ಇನ್ನು,ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಮನಸ್ಸಿಲ್ಲ.ಹೀಗಾಗಿ ನೀನೇ ಸ್ಪರ್ಧಿಸು.ನಾನು ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ ಅಂತ ಅವರು ಪುತ್ರ ಕಾಂತೇಶ್ ಅವರಿಗೆ ಹೇಳುತ್ತಿದ್ದಾರೆ.
ಹೀಗೆ ಒಂದು ಕಡೆಯಿಂದ ಸೈಡ್ ವಿಂಗಿಗೆ ಸರಿಯುತ್ತಿರುವ ಈಶ್ವರಪ್ಪ ವರಿಷ್ಟರ‌ ಕಣ್ಣಿಗೆ ಸಿಎಂ ಕ್ಯಾಂಡಿಡೇಟ್ ಆಗಿ ಕಾಣಲು ಸಾಧ್ಯವಿಲ್ಲ ಎಂಬ ಭಾವನೆ ಬರುವುದು ಸಹಜವಾದರೂ ರಾಜಕಾರಣದಲ್ಲಿ ಪವಾಡಗಳು ಸಂಭವಿಸುವುದು ಅಸಹಜವೇನಲ್ಲ.
1991 ರಲ್ಲಿ ದೇಶದ ಪ್ರಧಾನಿ ಗದ್ದುಗೆಗೇರಿದ ಪಿ.ವಿ.ನರಸಿಂಹರಾವ್ ಇದಾಗುವ ಕೆಲವೇ ದಿನಗಳ ಹಿಂದೆ ವಾನಪ್ರಸ್ಥಾಶ್ತಮಕ್ಕೆ ಹೋಗುವ ತಯಾರಿಯಲ್ಲಿದ್ದರು.
ಆದರೆ ಯಾವಾಗ ಎಐಸಿಸಿ ಅಧ್ಯಕ್ಷ ರಾಜೀವ್ ಗಾಂಧಿಯವರ ಹತ್ಯೆಯಾಯಿತೋ?ಆಗ ಇದ್ದಕ್ಕಿದ್ದಂತೆ ನರಸಿಂಹರಾಯರ ಸ್ಟಾರು ತಿರುಗಿ ಈ ದೇಶದ ಪ್ರಧಾನಿ ಹುದ್ದೆಗೇರುವಂತಾಯಿತು.
ಅಂದ ಹಾಗೆ ಕೆಲವೇ ಕಾಲದ ಹಿಂದೆ ಈಶ್ವರಪ್ಪನವರ ವಿಷಯ ಬಂದಾಗ,ಈ ಸಲ ಅವರಿಗೆ ಶಿವಮೊಗ್ಗದಲ್ಲಿ ಸ್ಪರ್ಧಿಸಲೂ ಟಿಕೆಟ್ ಸಿಗುವುದಿಲ್ಲ ಅಂತ ಬಿಜೆಪಿ ಪಾಳೆಯದಲ್ಲಿ ಗುಸು ಗುಸು ಶುರುವಾಗಿತ್ತು.
ಆದರೆ ಮೊನ್ನೆ ಈಶ್ವರಪ್ಪ ಅವರನ್ನು ಕರೆಸಿಕೊಂಡಿದ್ದ ಸಂಘಪರಿವಾರದ ನಾಯಕರು,ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿಯಾಗಿ ಎಂದಿದ್ದಾರೆ.
ಈ ಬೆಳವಣಿಗೆಯಾದ ನಂತರ ಅವರ ಪುತ್ರ ಕಾಂತೇಶ್ ಕೂಡಾ,ಇದೊಂದು ಸಲ ನೀವೇ ಸ್ಪರ್ಧಿಸಿ ಅಂತ ತಂದೆಗೆ ಹೇಳಿದ್ದಾರಂತೆ.
ಮುಂದೇನೋ ಗೊತ್ತಿಲ್ಲ,ಆದರೆ ಒಂದಂತೂ ನಿಜ.ಇವತ್ತು ರಾಜಕಾರಣದಲ್ಲಿ ಉತ್ಪ್ರೇಕ್ಷೆಯಂತೆ ಕಾಣುವುದು ನಾಳೆ ಸಹಜವಾಗಿ ಕಾಣಬಹುದು.ಅದೇ ರೀತಿ ಇವತ್ತು ಸಹಜವಾಗಿ ಕಾಣುತ್ತಿರುವುದು ನಾಳೆ ಉತ್ಪ್ರೇಕ್ಷೆಯಾಗಿ ಪರಿವರ್ತಿತವಾಗಬಹುದು.
ಅಂದ ಹಾಗೆ ಸಿಎಂ ಹುದ್ದೆಗೆ ಹಿಂದುಳಿದ ಸಮುದಾಯದವರು ಬರಬಹುದು ಎಂಬ ಮಾತು ಈಶ್ವರಪ್ಪ ಒಬ್ಬರಿಗೇ ಸಂಬಂಧಿಸಿದ್ದಲ್ಲ,ಆದರೆ ಈ ಮಾತು ಬಂದಾಗ ಬಿಜೆಪಿ ಪಾಳೆಯದಲ್ಲಿ ಬೇರೆ ಹೆಸರುಗಳು ಪ್ರಸ್ತಾಪವಾಗುತ್ತಿಲ್ಲ.

ಮೈತ್ರಿ ಸರ್ಕಾರ ಬಿಲ್ ಕುಲ್ ಬೇಡ

ಈ ಮಧ್ಯೆ ಅಮಿತ್ ಷಾ ಅವರು,ನಾವು ಮೈತ್ರಿ ಸರ್ಕಾರದ ಪಾಲುದಾರರಾಗುವುದು ಬೇಡ ಎಂದು ರಾಜ್ಯದ ನಾಯಕರಿಗೆ ಹೇಳಿದ್ದಾರೆ.
ಒಂದೋ,ನಾವು ಸ್ವಯಂಬಲದ ಮೇಲೆ ಗೆದ್ದು ಸರ್ಕಾರ ರಚಿಸಬೇಕು.ಇಲ್ಲವೇ ಪ್ರತಿಪಕ್ಷದ ಸ್ಥಾನದಲ್ಲಿ ಕೂರಬೇಕು ಎಂಬುದು ಅಮಿತ್ ಷಾ ಮಾತು.
ಚುನಾವಣೆಯ ನಂತರ ಜೆಡಿಎಸ್ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿದೆವು ಎಂದುಕೊಳ್ಳಿ.ಆಗ ನಮ್ಮಿಚ್ಚೆಯಂತೆ ಹೆಜ್ಜೆ ಇಡಲು ಸಾಧ್ಯವಿಲ್ಲ.ಪ್ರತಿಯೊಂದಕ್ಕೂ ಅವರನ್ನೇ ಕೇಳಬೇಕಾದ ಸ್ಥಿತಿ ಬರುತ್ತದೆ.
ಅದೇ ರೀತಿ ಮೈತ್ರಿ ಸರ್ಕಾರ ಇಟ್ಟುಕೊಂಡು 2024 ರ ಪಾರ್ಲಿಮೆಂಟ್ ಚುನಾವಣೆಗೆ ಹೋಗುವುದು ಕಷ್ಟ.2019 ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಉಭಯ ಪಕ್ಷಗಳಿಗೂ ಹಾನಿ ಮಾಡಿತು.ಕಾರಣ?ಅವುಗಳ ನಡುವಣ ಕಚ್ಚಾಟ.
ಅರ್ಥಾತ್,ಮೈತ್ರಿ ಸರ್ಕಾರದ ಪಾಲುದಾರರಾಗಿ ಪಾರ್ಲಿಮೆಂಟ್ ಚುನಾವಣೆಗೆ ಹೋದರೆ ನಷ್ಟ ಗ್ಯಾರಂಟಿ.ಹೀಗಾಗಿ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯೋಣ.
ನೀವು ಬೂತ್ ಮಟ್ಟಗಳಲ್ಲಿ ಪಕ್ಷದ ಸಂಘಟನೆಯನ್ನು ಬಲ ಪಡಿಸಿ.ನಿಶ್ಚಿತವಾಗಿ ನಾವು ನೂರಿಪ್ಪತ್ತೈದು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ.
ಈಗಿರುವ ಮಾಹಿತಿಯ ಪ್ರಕಾರ,ನಾವು ತೊಂಭತ್ತೈದು ಕ್ಷೇತ್ರಗಳಲ್ಲಿ ಗೆಲ್ಲುವುದು ಗ್ಯಾರಂಟಿ.ಸಂಘಟನೆಗೆ ಇನ್ನಷ್ಟು ಒತ್ತು ನೀಡಿದರೆ ಬಹುಮತ ನಿಶ್ಚಿತ.
ಒಂದು ವೇಳೆ ನಮ್ಮೆಲ್ಲ ಪ್ರಯತ್ನಗಳನ್ನು ಮೀರಿ ನೂರು ಸೀಟುಗಳ ಗಡಿಯಲ್ಲಿ ನಿಂತೆವು ಎಂದುಕೊಳ್ಳಿ.ಆಗ 2018 ರಲ್ಲಿಟ್ಟ ಹೆಜ್ಜೆ ಇಡೋಣ.
ಅರ್ಥಾತ್,ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕೈ ಜೋಡಿಸಿ ಸರ್ಕಾರ ಮಾಡಲು ಬಿಡೋಣ.ಮುಂದೆ ಆರೇ ತಿಂಗಳಲ್ಲಿ ಉಭಯ ಪಕ್ಷಗಳ ನಡುವೆ ಕಚ್ಚಾಟ ಶುರುವಾಗುತ್ತದೆ.ಆಗ ಆ ಪಕ್ಷಗಳಿಂದ ಶಾಸಕರನ್ನು ಸೆಳೆದು ಸರ್ಕಾರ ಮಾಡೋಣ ಎಂಬುದು ಅಮಿತ್ ಷಾ ಸೂಚನೆ.
ಅಂದ ಹಾಗೆ ಕಾಂಗ್ರೆಸ್ಸಿನ ಟಿಕೆಟ್ ಗೊಂದಲ ಅದನ್ನು ಮುಳುಗಿಸುತ್ತದೆ,ಬಿಜೆಪಿಯ ಹಡಗು ದಡ ಸೇರುವಂತೆ ಮಾಡುತ್ತದೆ ಎಂಬುದು ಅಮಿತ್ ಷಾ ಅವರಿಗಿರುವ ವಿಶ್ವಾಸ.
ಕರ್ನಾಟಕದ ಅರವತ್ತೆರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ಧರಾಮಯ್ಯ-ಡಿಕೆಶಿ ಬೆಂಬಲಿಗರ ನಡುವೆ ಟಿಕೆಟ್ ಗಾಗಿ ಟಫ್ ಫೈಟ್ ಇದೆ.
ನಮ್ಮ ಪಕ್ಷದಲ್ಲಿ ಟಿಕೆಟ್ ಗಾಗಿ ಫೈಟ್ ಇಲ್ಲ ಅಂತಲ್ಲ.ಆದರೆ ಇದು ಹದಿನೆಂಟು ಕ್ಷೇತ್ರಗಳಲ್ಲಷ್ಟೇ ಇದೆ ಅಂತ ಅಮಿತ್ ಷಾ ವಿವರಿಸಿದ್ದಾರಂತೆ.

ನಿಟ್ಟುಸಿರು ಬಿಟ್ಟ ಬಿಜೆಪಿ ಶಾಸಕರು

ಇನ್ನು ಚುನಾವಣೆಯಲ್ಲಿ ತಮಗೆ ಪಕ್ಷದ ಟಿಕೆಟ್ ತಪ್ಪಬಹುದು ಎಂಬ ಆತಂಕದಲ್ಲಿದ್ದ ಬಿಜೆಪಿ ಶಾಸಕರು ನಿಟ್ಟುಸಿರು ಬಿಡುತ್ತಿದ್ದಾರೆ.
ಅಂದ ಹಾಗೆ ಹಲವು ಮಾನದಂಡಗಳನ್ನು ರಚಿಸಿ,ಇದರ ವ್ಯಾಪ್ತಿಗೆ ಬರುವ ಶಾಸಕರನ್ನು ಕಿತ್ತು ಹಾಕುವ ಯೋಚನೆ ಬಿಜೆಪಿ ವರಿಷ್ಟರಿಗಿತ್ತು.
ಆದರೆ ದಿನ ಕಳೆದಂತೆ ವರಿಷ್ಟರಿಗೆ ಕರ್ನಾಟಕ ಗುಜರಾತ್ ಅಲ್ಲ ಎಂಬುದು ಸ್ಪಷ್ಟವಾಗಿದೆ.ಹೀಗಾಗಿ ಕರ್ನಾಟಕದಲ್ಲಿ ಪಕ್ಷದ ಬಹುತೇಕ ಶಾಸಕರಿಗೆ ಟಿಕೆಟ್ ನೀಡುವ ಇಂಗಿತ ಅಮಿತ್ ಷಾ ಅವರಿಂದ ವ್ಯಕ್ತವಾಗಿದೆ.ತೀರಾ ಅನಿವಾರ್ಯವಾದರೆ ನಾಲ್ಕೈದು ಮಂದಿ ಶಾಸಕರಿಗೆ ಟಿಕೆಟ್ ತಪ್ಪಿಸಬಹುದೇ ಹೊರತು ತುಂಬ ಜನರಿಗಲ್ಲ ಎಂಬುದು ಅಮಿತ್ ಷಾ ಇಂಗಿತ.
ಕಾರಣ?ಪ್ರತಿಯೊಬ್ಬ ಶಾಸಕರೂ ಕ್ಷೇತ್ರದಲ್ಲಿ ನೆಟ್ ವರ್ಕ್ ಇಟ್ಟುಕೊಂಡಿರುತ್ತಾರೆ.ಹೀಗಿರುವಾಗ ಅವರಿಗೆ ಟಿಕೆಟ್ ತಪ್ಪಿಸಿದರೆ ಉಲ್ಟಾ ಹೊಡೆಯುತ್ತಾರೆ.ಹೀಗಾಗಿ ಟಿಕೆಟ್ ತಪ್ಪಿಸುವ ಮುನ್ನ ಅವರನ್ನು ಸಮಾಧಾನಿಸುವುದು ಮುಖ್ಯ ಎಂಬುದು ಅಮಿತ್ ಷಾ ನಿಲುವು.
ಅಂದ ಹಾಗೆ ಈ ಬಾರಿ ಪಕ್ಷದ ಹಾಲಿ ಶಾಸಕರ ಪೈಕಿ ಇಪ್ಪತ್ತಾರು ಮಂದಿಗೆ ಟಿಕೆಟ್ ಕೊಡಬಾರದು ಎಂಬ ಇಂಗಿತ ಆರೆಸ್ಸೆಸ್ ನಲ್ಲಿದೆಯಂತೆ.
ವಯೋಮಿತಿ ಮೀರಿದವರು,ಕ್ರಿಯಾಶೀಲರಲ್ಲದವರು,ಜನರ ಪ್ರೀತಿ ಕಳೆದುಕೊಂಡವರು,ಸಂಘದ ಸಭೆಗಳನ್ನು ನಿರ್ಲಕ್ಷಿಸಿದವರು ಆರೆಸ್ಸೆಸ್ ನ ಬ್ಲಾಕ್ ಲಿಸ್ಟ್ ನಲ್ಲಿದ್ದಾರೆ.
ಆದರೆ ಇಂತಹ ಲಿಸ್ಟ್ ತಯಾರಿಸಲು ಈ ಹಿಂದೆ ಹೇಳಿದ್ದ ಅಮಿತ್ ಷಾ ಈಗ ಇದ್ದಕ್ಕಿದ್ದಂತೆ ಈ ಪಟ್ಟಿಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ.
ಮುಂದೇನಾಗುತ್ತದೋ?ಕಾದು ನೋಡಬೇಕು.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here