ಭ್ರಷ್ಟಚಾರದ ಕೂಪವಾಗುತ್ತಿರುವ ಕೊಟ್ಟೂರು ಪಟ್ಟಣ ಪಂಚಾಯಿತಿ..!?

0
376

ಕೊಟ್ಟೂರು:ಜು:21:-ಪಟ್ಟಣ ಪಂಚಾಯಿತಿಯ ಆಡಳಿತದಲ್ಲಿ ಭ್ರಷ್ಟಾಚಾರದ ಕೂಪವಾಗಿ ಮಾರ್ಪಡುತ್ತಿದೆ. ಇತ್ತೀಚೆಗೆ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಸಿಕೊಳ್ಳಲು ಹಣ ಕೊಟ್ಟರೆ ಮಾತ್ರ ಕೆಲಸವಾಗುತ್ತವೆ.? ಒಂದು ವೇಳೆ ಹಣ ನೀಡದೇ ಹೋದರೆ ಅವರ ಕೆಲಸಗಳ ಫೈಲ್‌ಗಳು ಧೂಳಿಡಿದು ಮೂಲೆ ಸೇರುತ್ತಿವೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ ಪರಿಸ್ಥಿತಿ. ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಕೊಟ್ಟೂರು ಪಟ್ಟಣ ಪಂಚಾಯಿತಿಯ ಬಗ್ಗೆ ಮೌನ ವಹಿಸಿರುವುದಕ್ಕೆ ಕಾರಣವೇನು ಎಂಬುದು ಸಾರ್ವಜನಿಕರಿಗೆ ತಿಳಿಯದಾಗಿದೆ.?


ಪಂಚಾಯಿತಿ ಎಂಬುದು ಬಹಳ ಹಿಂದಿನಿಂದಲೂ ಬೆಳೆದು ಬಂದಿರುವ ಒಂದು ಪದ್ಧತಿ. ಬಹಳ ಹಿಂದೆ ‘ಪಂಚರು’ ಪಂಚಾಯಿತಿಯ ಮುಖ್ಯಸ್ಥರಾಗಿರುತ್ತಿದ್ದರು. ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ ಪಂಚರಾಗಿ ಅಧಿಕಾರ ನಡೆಸಲು ಅವಕಾಶವಿತ್ತು. ಈ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ ಎಂಬ ಆರೋಪಗಳಿವೆ. ಸಿರಿವಂತರು, ಶಕ್ತಿವಂತರ ಹೇಳಿಕೆಗಳು ನ್ಯಾಯವಾಗಿ ಬಿಡುತ್ತಿತ್ತು. ಅವರ ಅಭಿಪ್ರಾಯಗಳನ್ನು, ತೀರ್ಮಾನಗಳನ್ನು ಜನಸಾಮಾನ್ಯರು ವಿರೋಧಿಸುವ ಹಾಗಿರಲಿಲ್ಲ.
ಪ್ರಜಾಪ್ರಭುತ್ವ ಬಂದ ಮೇಲೆ ಜನರಿಂದ ಆಯ್ಕೆಯಾಗಿರುವ ಸದಸ್ಯರು ಸರ್ಕಾರದಿಂದ ನೇಮಕವಾದ ಅಧಿಕಾರಿಗಳೊಂದಿಗೆ ಜೊತೆಗೂಡಿ ಸ್ಥಳೀಯ ಪಂಚಾಯಿತಿಗಳ ಆಡಳಿತ ನಡೆಸುವುದು ರೂಢಿ. ಆದರೆ ಜನರಿಂದ ಆಯ್ಕೆಯಾದ ಜನರೂ ಹಾಗೂ ನೇಮಕವಾದ ಸರ್ಕಾರಿ ಅಧಿಕಾರಿಗಳೇ ಹಣಕ್ಕೆ ಬಾಯ್ತೆರೆದು ಕುಳಿತಿರುವ ಪರಿಸ್ಥಿತಿ ಬಂದೊದಗಿದೆ.?
ಬಡವರಿಗೆ ಒಂದು ಕಾನೂನು, ಹಣ ಇದ್ದವರಿಗೊಂದು ಕಾನೂನು ಹೀಗೆ ತಾರತಮ್ಯ ನಡೆಯುತ್ತಿರುವುದು ಇಲ್ಲಿ ಅಸಹಜವೇನಲ್ಲ. ಹಣವಿದ್ದವರು ಹಣದ ಆಮಿಷ ಒಡ್ಡಿ ತಮ್ಮ ಕೆಲಸಗಳನ್ನು ಕ್ಷಣಮಾತ್ರದಲ್ಲಿ ಮಾಡಿಸಿಕೊಳ್ಳುತ್ತಾರೆ ಆದರೆ ಹಣವಿಲ್ಲದವರು ತಮ್ಮ ಚಪ್ಪಲಿ ಸವೆಯುವವರೆಗೂ ಓಡಾಡಿ ಹೈರಾಣ ಆಗುತ್ತಿದ್ದಾರೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅವರ ಪರವಾಗಿ ಕೆಲಸ ಮಾಡುತ್ತಾ, ಬಡಬಗ್ಗರ ಕೆಲಸಗಳಿಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಗಂಟೆಗಟ್ಟಲೇ ರಾಜಕಾರಣಿಗಳನ್ನು ಕುಳ್ಳಿರಿಸಿಕೊಂಡು ಕುಶಲೋಪರಿ ವಿಚಾರಿಸಲು ಇವರಿಗೆ ಸಮಯವಿರುತ್ತದೆ ಆದರೆ ಬಡಜನರ ಕೆಲಸ ಕಾರ್ಯಗಳನ್ನು ಮಾಡಲು ಇವರಿಗೆ ಸಮಯವಿರುವುದಿಲ್ಲವೆ?
ಕೂಡಲೇ ಸರ್ಕಾರ, ಭ್ರಷ್ಟಾಚಾರ ನಿಗ್ರಹ ದಳ ಇತ್ತ ಗಮನ ಹರಿಸಿ ಕೊಟ್ಟೂರು ಪಟ್ಟಣ ಪಂಚಾಯಿತಿಯ ಆಡಳಿತ ವೈಖರಿಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತರಾದ ಪಿ.ಚಂದ್ರಶೇಖರ್ ಆಗ್ರಹಿಸಿದರು. ನೂರ್ ಅಹ್ಮದ್, ಬಿ.ಕೊಟ್ರೇಶ್ ಪತ್ರಿಕೆಗೆ ತಿಳಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here