ದಾವಣಗೆರೆ,ಸೆ.04 : ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸೆ.5 ರಂದು ಹಮ್ಮಿಕೊಂಡಿರುವ ರೈತ ವಿದ್ಯಾನಿಧಿ ಕಾರ್ಯಕ್ರಮ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿನಿಧಿಗಳಾಗಿ ದಾವಣಗೆರೆ ಜಿಲ್ಲೆಯಿಂದ ಐವರು ರೈತರ ಮಕ್ಕಳು (ವಿದ್ಯಾರ್ಥಿಗಳು) ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ವಿದ್ಯಾರ್ಥಿಗಳಿಗೆ ಶನಿವಾರದಂದು ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು, ಇಲಾಖೆಯ ಅಧಿಕಾರಿಗಳು, ಪೋಷಕರು ಶುಭ ಹಾರೈಸಿದರು.
ರೈತ ವಿದ್ಯಾನಿಧಿ ಯೋಜನೆಯಡಿ ಪದವಿಯ ಮುಂಚೆ ಪಿಯುಸಿ, ಐ.ಟಿ.ಐ, ಡಿಪ್ಲೊಮಾ ಮಾಡಿರುವ ಹುಡುಗರಿಗೆ ರೂ.2500 ಹುಡುಗಿಯರು ಅಥವಾ ಅನ್ಯ ಲಿಂಗದವರಿಗೆ ರೂ.3000, ಎಲ್ಲಾ ಬಿ.ಎ, ಬಿಎಸ್ಸಿ, ಬಿ.ಕಾಂ, ಎಂ.ಬಿ.ಬಿ.ಎಸ್., ಬಿ.ಇ, ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸ್ಗಳನ್ನು ಹೊರತುಪಡಿಸಿ ಪುರುಷರಿಗೆ ರೂ.5000, ಮಹಿಳೆಯರಿಗೆ ಹಾಗೂ ಅನ್ಯ ಲಿಂಗದವರಿಗೆ ರೂ.5500, ಎಲ್.ಎಲ್.ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗಳಲ್ಲಿ ಅಭ್ಯಾಸ ಮಾಡುವ ಪುರುಷರಿಗೆ ರೂ.7500, ಮಹಿಳೆಯರಿಗೆ ರೂ.8000, ಎಂ.ಬಿ.ಬಿ.ಎಸ್, ಬಿ.ಇ, ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳಲ್ಲಿ ಅಭ್ಯಾಸ ಮಾಡುವ ಪುರುಷರಿಗೆ ರೂ.10000, ಮಹಿಳೆಯರಿಗೆ ಹಾಗೂ ಅನ್ಯ ಲಿಂಗದವರಿಗೆ ರೂ.11000 ಶಿಷ್ಯ ವೇತನ ನೀಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.