ಬಳ್ಳಾರಿ, ಜ.15: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು, ಇದೇ ರೀತಿ ಅವಹೇಳನಕಾರಿಯಾಗಿ ಮಾತನಾಡಿದರೆ ಜನರೇ ನಿಮಗೆ ಧರ್ಮದೇಟು ನೀಡಬಹುದು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ ಕನಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನಾರೋಗ್ಯಕ್ಕೀಡಾಗಿ ಮರಣ ಶಯ್ಯೆ ತಲುಪಿದ್ದ ಅನಂತಕುಮಾರ್ ಈಗ ಗುಣಮುಖರಾಗುತ್ತಿದ್ದಂತೆ ಬಾಯಿಗೆ ಬಂದಂತೆ ಮಾತಾಡಲಾರಂಭಿಸಿದ್ದಾರೆ. ನಾಲ್ಕು ವರ್ಷಗಳ ಕಾಲ ಅನಾರೋಗ್ಯದ ಕಾರಣ ಜನರ ಒಂದೇ ಒಂದು ಕೆಲಸ ಮಾಡದ ಈ ನಿಷ್ಪ್ರಯೋಜಕ ಸಂಸದ ರಾಜಕೀಯಕ್ಕೇ ಬೇಡವಾಗಿರುವ ವ್ಯಕ್ತಿ. ಇಂತಹ ವ್ಯಕ್ತಿ ಜನಪರ ನಾಯಕರಾಗಿರುವ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ತರವಲ್ಲ. ಇವರು ಹೀಗೇ ಮಾತನಾಡಿದರೆ ಮುಂದೊಂದು ದಿನ ಜನರೇ ಪಾಠ ಕಲಿಸಲಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ತೋಟ, ಇಲ್ಲಿ ಎಲ್ಲ ಸಮುದಾಯ, ಜಾತಿ, ಧರ್ಮಗಳ ಜನರು ಸೌಹಾರದತೆಯಿಂದ ಬದುಕುತ್ತಿದ್ದಾರೆ, ಅಧಿಕಾರದ ಆಸೆಗೆ ಬಿಜೆಪಿಯ ನಾಯಕರು ಸೌಹಾರ್ದ ಕದಡುವ ಕೆಲಸ ಮಾಡಬಾರದು. ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಜನರ ಮೇಲೆ ಹಿಂದಿನ ಬಿಜೆಪಿ ಸರ್ಕಾರ ನಡೆಸಿದ ದೌರ್ಜನ್ಯಕ್ಕೆ ಪ್ರತಿಯಾಗಿ ಜನರು ತಕ್ಕ ಪಾಠ ಕಲಿಸಿದ್ದಾರೆ. ಈಗ ಅನಂತಕುಮಾರ್ ಅವರಿಗೂ ಪಾಠ ಕಲಿಸುವ ಸಮಯ ಬಂದಿದೆ ಎಂದು ಎಂ.ಜಿ ಕನಕ ಹೇಳಿದ್ದಾರೆ.