ಬಳ್ಳಾರಿ,ಅ.04 :ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ 11 ಟನ್ ಒಂದು ಬಾರಿ ಬಳಕೆ ಮಾಡಬಹುದಾದ (ಎಕ ಬಳಕೆ ಪ್ಲಾಸ್ಟಿಕ್) ಪ್ಲಾಸ್ಟಿಕ್ ಸಂಗ್ರಹಿಸುವ ಗುರಿಯನ್ನು ಅವಳಿ ಜಿಲ್ಲೆಗಳಲ್ಲಿ ಹೊಂದಲಾಗಿದೆ. ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಪವೃತ್ತರಾಗುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಮೇಶ್ ಅವರು ಸೂಚನೆ ನೀಡಿದ್ದಾರೆ.
ಸ್ವಚ್ಛ ಭಾರತ ಕಾರ್ಯಕ್ರಮದ ಅನುಷ್ಠಾನಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅವಳಿ ಜಿಲ್ಲಾಡಳಿತಗಲು ಹಾಕಿಕೊಂಡಿರುವ ನಿರ್ದಿಷ್ಟ ಗುರಿ ಸಾಧನೆಗೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಮಹಾನಗರಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ. ಕಸ ಸಂಗ್ರಹದ ವಾಹನಗಳಿಗೆ ಪೋಸ್ಟರ್ ಮತ್ತು ಧ್ವನಿವರ್ಧಕಗಳನ್ನು ಅಳವಡಿಸುವ ಮೂಲಕ ಪ್ಲಾಸ್ಟಿಕ್ ಸಂಗ್ರಹದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ವಲಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿರುವ ಪ್ರಮುಖ ಶಾಲೆಗಳನ್ನು ಗುರುತಿಸಿ, ಆಯಾ ಶಾಲೆಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಎಂದರು.
ಈ ತಿಂಗಳಾದ್ಯಂತ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಸಂಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಎಂದರು.
ನೆಹರು ಯುವಕೇಂದ್ರದ ಅಧಿಕಾರಿ ಮಾಂಟು ಪಾತರ್ ಅವರು ಮಾತನಾಡಿ ಜಿಲ್ಲೆಗೆ ನೀಡಿರುವ 11 ಟನ್ ಗುರಿಗೂ ಮೀರಿ 20 ಟನ್ ಪ್ಲಾಸ್ಟಿಕ್ ಸಂಗ್ರಹ ಮಾಡಿ ರಾಜ್ಯಕ್ಕೆ ಮಾದರಿಯಾಗುವ ನಿರೀಕ್ಷೆ ಇದೆ. ಪ್ಲಾಸ್ಟಿಕ್ ಸಂಗ್ರಹ ಕಾರ್ಯವು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ತಿಳಿದು ಪ್ರತಿಯೊಬ್ಬರು ಈ ಕೆಲಸದಲ್ಲಿ ಪಾಲ್ಗೊಳ್ಳಿ. ಇಡೀ ಭಾರತದಲ್ಲಿ ನಮ್ಮ ಜಿಲ್ಲೆ ಗುರುತಿಸಿಕೊಳ್ಳಬೇಕಾದರೆ ನಿಮ್ಮ ಶ್ರಮ ಅಗತ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.