ಆಯುಶ್ಮಾನ್ ಭವ’ ಮೇಳಗಳಲ್ಲಿಯೇ 8875 ಆಭಾ ಕಾರ್ಡ್ ಸೃಜನೆ;ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೂ ಸಹ ಕಾರ್ಡ್ ಪಡೆಯಲು ಅವಕಾಶ: ಡಿಹೆಚ್‍ಓ ಡಾ.ವೈ. ರಮೇಶ್‍ಬಾಬು

0
34

ಬಳ್ಳಾರಿ,ಫೆ.13:
ಕಡು ಬಡವರು ಸಹಿತ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸರ್ಕಾರ ರೂಪಿಸಿರುವ “ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ – ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ” ಕಾರ್ಡ್‍ಗಳನ್ನು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಮಂಗಳವಾರದಂದು ಹಮ್ಮಿಕೊಳ್ಳುವ ಆಯುಷ್ಮಾನ್ ಭವ ಮೇಳಗಳಲ್ಲಿಯೇ ಸೃಜನೆ ಮಾಡಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಈವರೆಗೆ 8875 ಕಾರ್ಡ್‍ಗಳನ್ನು ಆಯುಷ್ಮಾನ್ ಭವಃ ಮೇಳಗಳಲ್ಲಿಯೇ ಸೃಜನೆ ಮಾಡಿಕೊಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಕ್ಕಾಗಿ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.

ಗಂಭಿರ ಆರೋಗ್ಯ ಸಮಸ್ಯೆಗಳ ಚಿಕಿತ್ಸಾ ಸಂದರ್ಭದಲ್ಲಿ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚದ ಸೌಲಭ್ಯವನ್ನು ಈ ಕಾರ್ಡ್‍ಗಳಿಂದ ಪಡೆದುಕೊಳ್ಳಬಹುದಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬೆಂಬಲದೊಂದಿಗೆ ಜಿಲ್ಲೆಯಾದ್ಯಂತ ವಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆ ಮತ್ತು ಸ್ಥಳೀಯ ತಜ್ಞ ವೈದ್ಯರುಗಳಿಂದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್‍ಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿಗಳ ಮೂಲಕ ಉಪಕೇಂದ್ರ – ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಜರುಗಿರುವ ಮೇಳಗಳಲ್ಲಿ ಇಲ್ಲಿಯವರೆಗೆ ಒಟ್ಟು 111536 ಜನ ಭಾಗವಹಿಸಿ ವಿವಿಧ ರೋಗಗಳಿಗೆ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆಯುಷ್ಮಾನ್ ಭವಃ ದಡಿಯಲ್ಲಿ ಇಲ್ಲಿಯವರೆಗೆ ಒಟ್ಟು 2475 ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ. ಮೇಳಗಳಲ್ಲಿ 10534 ಗರ್ಭಿಣಿಯರು, ತಪಾಸಣೆ ಮಾಡಿಸಿಕೊಂಡಿದ್ದು, 83436 ಜನಕ್ಕೆ ರಕ್ತದೊತ್ತಡ ಮತ್ತು 79990 ಜನರಿಗೆ ಮಧುಮೇಹ ಪರೀಕ್ಷೆ ಕೈಗೊಳ್ಳಲಾಗಿದೆ.
ಅಲ್ಲದೇ 44216 ಜನರಿಗೆ ಬಾಯಿ ಕ್ಯಾನ್ಸರ್, 13804 ಜನರಿಗೆ ಸ್ತನ ಕ್ಯಾನ್ಸರ್, 7040 ಜನರಿಗೆ ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆ ಮಾಡಲಾಗಿದೆ. 10514 ಜನರಿಗೆ ನೇತ್ರ ಪರೀಕ್ಷೆ ಮಾಡಲಾಗಿದ್ದು, 11551 ಜನರಿಗೆ ಕ್ಷಯರೋಗದ ಪರೀಕ್ಷೆ ಮಾಡಲಾಗಿದೆ. 7649 ಜನರಿಗೆ ಕುಷ್ಠರೋಗ ಪರೀಕ್ಷೆ ಕೈಗೊಳ್ಳಾಗಿದೆ. 4495 ಜನರಿಗೆ ಕುಟುಂಬ ಕಲ್ಯಾಣದ ವಿಧಾನಗಳ ಸೇವೆಗಳನ್ನು ಒದಗಿಸಲಾಗಿದೆ. ಶಿಬಿರಗಳಲ್ಲಿ ಇ-ಸಂಜೀವಿನಿ ಆಪ್ ಮೂಲಕ ತಜ್ಞ ವೈದ್ಯರನ್ನು ಯಾವುದೇ ಹಣದ ವೆಚ್ಚವಿಲ್ಲದೆ 13955 ಜನ ಸಂಪರ್ಕಿಸಿದ್ದಾರೆ. ಶಿಬಿರದಲ್ಲಿ 8018 ಜನರಿಗೆ ಆಯುಷ್ ಪದ್ದತಿ ಸೇವೆ ನೀಡಲಾಗಿದೆ. ಮೇಳಗಳಲ್ಲಿ 1686 ಆಹಾರ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ.

ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಜಾಗೃತಿ:
ಮೇಳಗಳಲ್ಲಿ ಹೆಣ್ಣುಭ್ರೂಣ ಹತ್ಯೆ ತಡೆಗಟ್ಟುವಿಕೆಗಾಗಿ ಪ್ರತಿಯೊಬ್ಬರಿಗೂ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಕುರಿತು ಜಾಗೃತಿಯನ್ನು ನೀಡಲಾಗುತ್ತಿದ್ದು, ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳಿಗೆ 3 ವರ್ಷ ಜೈಲು ಶಿಕ್ಷೆ, ರೂ.10 ಸಾವಿರ ದಂಡ ಇದೆ. ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದಲ್ಲಿ ಮೊದಲ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ರೂ.10 ಸಾವಿರ ದಂಡ ಮತ್ತು 2ನೇ ಬಾರಿ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ರೂ.50 ಸಾವಿರ ದಂಡವಿದೆ. ಅಲ್ಲದೇ ಗರ್ಭಿಣಿ ಮಹಿಳೆಗೆ ಕುಟುಂಬದ ಸದಸ್ಯರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದರೆ. ಮೊದಲ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ದಂಡ, ಪುನಃ 2ನೇ ಬಾರಿ ಭ್ರೂಣಲಿಂಗ ಪತ್ತೆ ಮಾಡಿಸಿದಲ್ಲಿ 5 ವರ್ಷ ಜೈಲು ಶಿಕ್ಷೆ ರೂ.1 ಲಕ್ಷ ದಂಡವಿದೆ ಎಂದಿದ್ದಾರೆ.

ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್ ಮಾಡಿಸುವ ಮೂಲಕ ದೇಶದ ಯಾವುದೆ ಭಾಗದಲ್ಲಿ ಚಿಕಿತ್ಸೆಗೆ ತೆರಳಿದರೂ ಸಹ ಸಕಾಲದಲ್ಲಿ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ನೋಂದಣಿ ಮಾಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆರೋಗ್ಯ ಮೇಳಗಳ ಯಶಸ್ವಿಗಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಮತ್ತು ತಂಡ ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಹಾಗೂ ತಾಲ್ಲೂಕ ಆರೋಗ್ಯ ಅಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ಕೈಗೊಳ್ಳಲಾಗುತ್ತಿದ್ದು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದು, ಆರೋಗ್ಯ ಶಿಕ್ಷಣಾಧಿಕಾರಿಗಳು ಆರೋಗ್ಯ ಜಾಗೃತಿ ಕಾರ್ಯ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರು ಮೇಳಗಳಲ್ಲಿ ಭಾಗವಹಿಸಿ ಆರೋಗ್ಯಯುತ ಬಳ್ಳಾರಿ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here