ಬಹುಮುಖಿ ಪ್ರತಿಭೆ, ಬರಹಗಾರ್ತಿ, ಪೂರ್ಣಚಂದ್ರ ತೇಜಸ್ವಿ ಅವರ ಜೊತೆಗಿನ ತೇಜಸ್ಸಾಗಿದ್ದ ಅವರ ಸಹಧರ್ಮಿಣಿ ರಾಜೇಶ್ವರಿ ತೇಜಸ್ವಿ ಇಂದು ಮುಂಜಾನೆ ಈ ಲೋಕವನ್ನಗಲಿದ್ದಾರೆ.
ರಾಜೇಶ್ವರಿ ಅವರು 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಹೆಣ್ಣುಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯವರ ಉದಾತ್ತ ಧ್ಯೇಯದಿಂದಾಗಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ ಮಾಡಲು ಮೈಸೂರಿನ ಮಾನಸ ಗಂಗೋತ್ರಿಗೆ ಬಂದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಸ್ನೇಹಪರಿಚಯವಾಯಿತು. ಮುಂದೆ 1966ರಲ್ಲಿ ರಾಜೇಶ್ವರಿ – ಪೂರ್ಣಚಂದ್ರ ತೇಜಸ್ವಿ ದಂಪತಿಗಳಾದರು.
ಪೂರ್ಣಚಂದ್ರ ತೇಜಸ್ವಿ ಅವರ ಕುರಿತಾದ
‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕ. ಇದು ನಿರಂತರವಾಗಿ ಹಲವಾರು ಮರುಮುದ್ರಣಗಳನ್ನು ಕಂಡ ಕೃತಿಯಾಗಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ರಾಜೇಶ್ವರಿ ಅವರ ಮತ್ತೊಂದು ಕೃತಿ.
ರಾಜೇಶ್ವರಿ ಅವರದು ಕ್ರಿಯಾಶೀಲ ಬದುಕು. ಮೂಡಿಗೆರೆಯಲ್ಲಿನ ತಮ್ಮ ಕಾಫಿತೋಟವನ್ನು ನೋಡಿಕೊಳುತ್ತಲೇ ಪೂರ್ಣಚಂದ್ರ ತೇಜಸ್ವಿ ಅವರ ಎಲ್ಲ ಕ್ರಿಯಾಶೀಲ ಬದುಕಿಗೂ ಆಸರೆಯ ಜೊತೆಯಾಗಿದ್ದು; ಸಾಫ್ಟ್ವೆರ್ ತಂತ್ರಜ್ಞಾನದತ್ತ ಹೊರಳಿದ ಮಕ್ಕಳ ಬೆಳವಣಿಗೆಗೆ ಒತ್ತಾಸೆಯಾಗಿ; ಮೊಮ್ಮಕ್ಕಳನ್ನು ಪೋಷಿಸುವುದರ ಜೊತೆ ಜೊತೆಗೆ, ಅವರು, ಕಸೂತಿ, ಅಂಚೆ ಚೀಟಿ ಸಂಗ್ರಹ ಮುಂತಾದ ಅನೇಕ ಹವ್ಯಾಸಗಳನ್ನೂ ರೂಡಿಸಿಕೊಂಡಿದ್ದರು.
ಪೂರ್ಣಚಂದ್ರ ತೇಜಸ್ವಿಯವರ ನೆನಪನ್ನು ಬೆಳಗಿಸಿದ ರಾಜೇಶ್ವರಿ ಆ ತೇಜಸ್ಸಿನೊಂದಿಗೆ ಇಂದು ಲೀನವಾಗಿದ್ದಾರೆ.