ಬಳ್ಳಾರಿ,ಮೇ 18 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಸಂವಾದಲ್ಲಿ ನೀಡಲಾಗಿರುವ ಸಲಹೆಗಳು ಮತ್ತು ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.
ಪ್ರಧಾನಮಂತ್ರಿಗಳ ವಿಡಿಯೋ ಸಂವಾದದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕಾದರೆ ಗ್ರಾಪಂ ಸದಸ್ಯರಿಂದ ಹಿಡಿದು ಎಲ್ಲಾ ರೀತಿಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಂದಾಗಿ ಕಾರ್ಯ ನಿರ್ವಹಿಸಿ ಎಂದು ಮೋದಿಯವರು ಸಲಹೆ ನೀಡಿದ್ದಾರೆ; ಅವರ ಸಲಹೆಯಂತೆ ಎಲ್ಲರೂ ಒಂದಾಗಿ ಕೆಲಸ ಮಾಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ, ಆಕ್ಸಿಜನ್ ನಿರ್ವಹಣಾ ಕಮಿಟಿ, ಆಕ್ಸಿಜನ್ ಕೊರತೆಯಾಗದಂತೆ ನೋಡಿ ಕೊಳ್ಳುವುದರ ಜೊತೆಗೆ ಫ್ರಂಟ್ಲೈನ್ ವಾರಿಯರ್ಸ್ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸೈನ್ಯದ ರೀತಿಯಲ್ಲಿ ಕೆಲಸ ಮಾಡಿ ಎಂದು ಹೇಳಿದ್ದಾರೆ; ಅದರಂತೆ ಎಲ್ಲಾ ಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಪ್ರಧಾನಿ ಮೋದಿಯವರು ಮುಂಬರುವ ಮೂರನೇ ಅಲೆಗೆ ಸಿದ್ಧತೆಯ ಜೊತೆÀಗೆ ಮಳೆಗಾಲದ ಸಮಯದಲ್ಲಿ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದು, ವಿದ್ಯುತ್ ನಿರಂತರ ಪೂರೈಕೆಗೆ ಶ್ರಮವಹಿಸುಂತೆ ತಿಳಿಸಿದ್ದಾರೆ ಅದರಂತೆ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಹೇಳಿದರು.
ಜಿಂದಾಲ್ ಬಳಿ ನಿರ್ಮಿಸಲಾಗಿರುವ 1 ಸಾವಿರ ಆಕ್ಸಿಜನ್ ಬೆಡ್ಗಳಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ 300 ಹಾಸಿಗೆಗಳು ಸಿದ್ದಗೊಂಡಿದ್ದು,ಮೇ 19ರಂದು ಸಂಜೆ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಪ್ರಕಟಣೆ ನೀಡಿದ ನಂತರ ನಾಲ್ಕು ತಜ್ಞ ವೈದ್ಯರು, 8 ಜನ ವೈದ್ಯರು ಈಗಾಗಲೇ ಬಂದಿದ್ದಾರೆ. ನರ್ಸ್ ಹಾಗೂ ಗ್ರೂಪ್ ಡಿ ಸಿಬ್ಬಂದಿ ಕೂಡ ಸಮರ್ಪಕ ಪ್ರಮಾಣದಲ್ಲಿದೆ/ 40 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಅಚ್ಚುಕಟ್ಟಾಗಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದರು.