ಮುಂಡರಗಿ ಆಶ್ರಯ ಮಹಾತ್ಮಗಾಂಧಿ ಟೌನ್ ಶಿಪ್, ಜಿ+2 ಮನೆಗಳ ನಿರ್ಮಾಣ ಪ್ರಗತಿ ಪರಿಶೀಲನಾ ಸಭೆ ನಿಗದಿಪಡಿಸಿದ ಗಡುವಿನೊಳಗೆ ಮನೆಗಳು ನಿರ್ಮಿಸಲು ಜಿಲ್ಲಾಧಿಕಾರಿ ಮಾಲಪಾಟಿ ಸೂಚನೆ

0
141

ಬಳ್ಳಾರಿ : ನಗರದ ಮುಂಡರಗಿ ಅಶ್ರಯ ಮಹಾತ್ಮಗಾಂಧಿ ಟೌನ್ ಶಿಪ್ ಜಿ+2 ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ನಿಗದಿಪಡಿಸಿದ ಗಡುವಿನೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮುಂಡರಗಿ ಆಶ್ರಯ ಮಹಾತ್ಮಗಾಂಧಿ ಟೌನ್ ಶಿಪ್ ಜಿ+2 ಮನೆಗಳ ನಿರ್ಮಾಣ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುತ್ತಿಗೆದಾರರು ಯಾವುದೇ ಸಬೂಬುಗಳನ್ನು ಹೇಳದೇ ತಮಗೆ ವಹಿಸಲಾದ ಅವಧಿಯೊಳಗೆ ಕಾಮಗಾರಿ ಮುಗಿಸಿ ಎಂದು ಗುತ್ತಿಗೆ ಜವಾಬ್ದಾರಿ ಹೊಣೆಹೊತ್ತ ಎನ್‍ಸಿಸಿ ಲಿಮಿಟೆಡ್ ಅಧಿಕಾರಿಗಳಿಗೆ ಸೂಚಿಸಿದ ಡಿಸಿ ಮಾಲಪಾಟಿ ಅವರು ಈಗಾಗಲೇ ಆಯ್ಕೆ ಮಾಡಲಾಗಿರುವ ಫಲಾನುಭವಿಗಳಿಗೆ ಹಸ್ತಾಂತರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಡಿಸಿ ಮಾಲಪಾಟಿ ಅವರು ಫಲಾನುಭವಿಗಳ ಆಯ್ಕೆ, ಸಾಲದ ಅರ್ಜಿ ಬ್ಯಾಂಕ್‍ಗಳಿಗೆ ಸಲ್ಲಿಸಿದ ಕುರಿತು ಆದಾಯ ಪ್ರಮಾಣಪತ್ರ, ಪ್ರೊಜೆಕ್ಟ್ ರಿಪೋರ್ಟ್ ಮತ್ತು ರಿಲೀಸ್ ಸ್ಕೆಡ್ಯೂಲ್, ಕಾಮಗಾರಿ ಅನುಮತಿ, ಮೌಲ್ಯಮಾಪನ ಪ್ರೊಜೆಕ್ಟ್, ಪ್ರೊವಿಜನಲ್ ಅಲೋಟ್ಮೆಂಟ್ ಲೇಟರ್, ಸೇಲ್ ಕಂ ಲೀಸ್ ಡೀಡ್, ರೇರಾ ಆನ್ ಲೈನ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ಈ ಸಂದರ್ಭದಲ್ಲಿ ನೀಡಿದರು.
ಜಿ+2 ಮಾದರಿಯಲ್ಲಿ 5616 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 2592 ಮನೆಗಳನ್ನು ನಿರ್ಮಿಸಲಾಗುತ್ತಿದೆ. 2ನೇ ಹಂತದಲ್ಲಿ 3024 ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದರು.
ಈಗಾಗಲೇ 2389ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಮೊದಲನೇ ಕಂತಿನ ವಂತಿಕೆ ಹಣ ಪಾವತಿಸಿರುತ್ತಾರೆ. 629 ಅರ್ಜಿದಾರರು ವಸತಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದು, ಆಶ್ರಯ ಸಮಿತಿಯಿಂದ ಅನುಮೋದನೆ ಪಡೆದು ಸಲ್ಲಿಸಬೇಕಿರುವ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
ಹಣ ಪಾವತಿಸಿದ 2389 ಫಲಾನುಭವಿಗಳ ಪೈಕಿ 2355 ಫಲಾನುಭವಿಗಳ ಸಾಲದ ಅರ್ಜಿ ಹಾಗೂ ದಾಖಲೆಗಳನ್ನು ಬ್ಯಾಂಕ್ ಗೆ ಸಲ್ಲಿಸಲಾಗಿದ್ದು,ಉಳಿದ 34 ಅರ್ಜಿಗಳನ್ನು ಶೀಘ್ರ ಸಲ್ಲಿಸಲಾಗುವುದು ಎಂದು ಪಾಲಿಕೆಯ ವಸತಿ ಶಾಖೆಯ ಅಧಿಕಾರಿ ದೇವರಾಜ ಅವರು ಡಿಸಿ ಅವರ ಗಮನಕ್ಕೆ ತಂದರು.
ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್ ಪ್ರತಿನಿಧಿಗಳು ಇದ್ದರು.

LEAVE A REPLY

Please enter your comment!
Please enter your name here