ತಣಿಗೆರೆ ಗ್ರಾಮದಲ್ಲಿ ಜನಸ್ಪಂದನ ಸಭೆ ಚನ್ನಗಿರಿ ಪಟ್ಟಣಕ್ಕೆ ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಬಿ.ಎ ಬಸವರಾಜ

0
105

ದಾವಣಗೆರೆ ಮಾ.01:ಚನ್ನಗಿರಿ ಪಟ್ಟಣದ ಕುಡಿಯುವ ನೀರಿಗಾಗಿ ನಗರಾಭಿವೃದ್ದಿ ಇಲಾಖೆಯಿಂದ ರೂ.5.47 ಕೋಟಿ ಮಂಜೂರು ಮಾಡಲಾಗಿದೆ ಎಂದು ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹೇಳಿದರು.
ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂತೆಬೆನ್ನೂರು ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕಳೆದ 3 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರದಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆಯಡಿ ಪ್ರತಿಯೊಂದು ಗ್ರಾಮದಲ್ಲೂ ಜನರ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಲಿದೆ ಎಂದರು.

ಸೋಮವಾರ ಈ ಭಾಗದಲ್ಲಿ ರೂ.28.79 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳು ನೆರವೇರಿದ್ದು, ಶಾಸಕರ ಕಾಳಜಿಯಿಂದಾಗಿ ತಾಲ್ಲೂಕು ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ ಎಂದ ಅವರು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನಾಯಕತ್ವದ ನಮ್ಮ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ದಿ ದೃಷ್ಟಿಯಲ್ಲಿಟ್ಟುಕೊಂಡು ಕರೋನಾ ಸಂದರ್ಭದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಕಾರ್ಯಕ್ರಮಗಳನ್ನು ನೀಡಿದೆ ಎಂದರು.
ಈ ಜನಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶ ಗ್ರಾಮಗಳ ಅಭಿವೃದ್ಧಿಯಾಗಿದೆ. ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ದೇವಸ್ಥಾನಗಳ ಜೀರ್ಣೋದ್ದಾರ, ಸಮುದಾಯ ಭವನಗಳ ನಿರ್ಮಾಣ, ಶಾಲೆಗಳ ನವೀಕರಣಕ್ಕಾಗಿ ಸರ್ಕಾರದಿಂದ ರೂ28.79 ಲಕ್ಷವನ್ನು ಮಂಜೂರು ಮಾಡಲಾಗಿದೆ ಎಂದರು.
ರೈತರು, ಬಡವರು, ಮತ್ತು ದೀನದಲಿತರಿಗಾಗಿ ಕೃಷಿಯಂತ್ರೋಪಕರಣಗಳನ್ನು, ಹಾಗೂ ಕೈಗಾಡಿಗಳನ್ನು ಫಲಾನುಭವಿಗಳಿಗೆ ವಿತರಿಸಿದ ಅವರು, ಗ್ರಾಮದ ಜನರಿಗೆ ಆರ್ಥಿಕವಾಗಿ ಸಬಲರಾಗಬೇಕಾದರೆ ಸರ್ಕಾರದಿಂದ ಬರುವ ಅನುದಾನದ ಸೌಲಭ್ಯ ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಪಡೆದು ವ್ಯವಸಾಯಕ್ಕೆ ರೈತರು ಬಳಸಿಕೊಳ್ಳಬಹುದು. ಪಿ.ಎಂ.ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಕೇಂದ್ರದಿಂದ ರೂ.6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ ರೂ.4 ಸಾವಿರ ಹಣ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಹಾಗೂ ಕೃಷಿ ಇಲಾಖೆಯಿಂದ ಕೃಷಿ ಯಂತ್ರೋಪಕರಣಗಳನ್ನು ನಿಗದಿತ ಬಾಡಿಗೆ ರೂಪದಲ್ಲಿ ಪಡೆದು ವ್ಯವಸಾಯಕ್ಕೆ ಅನುಕೂಲ ಪಡೆಯಬಹುದು.
ಹಾಗೆಯೇ ಈ ಬಾರಿಯ ಬಜೆಟ್‍ನಲ್ಲಿ ನಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು ದಾವಣಗೆರೆ ಜಿಲ್ಲೆಯ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಆರಂಭ ಮಾಡಲು ಚರ್ಚಿಸಲಾಗಿದೆ. ಹಾಗೂ ನಮ್ಮ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆಯಾಗಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್.ಡಿ.ಎಲ್. ನ ಅಧ್ಯಕ್ಷರು ಹಾಗೂ ಚನ್ನಗಿರಿ ಕ್ಷೇತ್ರದ ಶಾಸಕ ಕೆ.ಮಾಡಾಳ್ ವಿರುಪಾಕ್ಷಪ್ಪ, ಜನರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹುಡುಕುವ ಬದಲಾಗಿ ಅವರೇ ಜನರ ಬಳಿ ಬಂದಾಗ ಸಮಸ್ಯೆಗಳು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಯುತ್ತದೆ ಇದರಿಂದ ನಾವು ಮಾಡಬೇಕಾಗಿರುವ ಕೆಲಸದ ಅರಿವು ನಮಗಾಗುತ್ತದೆ ಎಂದರು.
ಅಧಿಕಾರಿಗಳ ಭೇಟಿಗೆ ಸಾಮಾನ್ಯ ಜನ ತೆರಳಿದರೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿಯಿದೆ. ಬದಲಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ನಡುವೆ ಇದ್ದಲ್ಲಿ ಜನರ ಕಷ್ಟ-ಸುಖಗಳನ್ನು ಮಕ್ತವಾಗಿ ಗ್ರಹಿಸುವ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ಈ ಕಾರ್ಯಕ್ರಮದಿಂದ ಸಾಧ್ಯವಾಗಲಿದೆ. ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ನಿರ್ಗತಿಕ ವಿಧವಾ ವೇತನ, ಅಂಗವಿಕಲರ ವೇತನ, ಮನಸ್ವಿನಿ ವೇತನ, ಅಕ್ರಮ ಸಕ್ರಮ ಯೋಜನೆ ನಿವೇಶನ ಹಕ್ಕು ಪತ್ರಗಳಿಗಾಗಿ ವಿ.ಎ, ಆರ್.ಐ ಬಳಿ ತಿಂಗಳಗಟ್ಟಲೇ ಅಲೆದಾಡುವ ಸಮಸ್ಯೆ ಇತ್ತು. ಇಂದು ಸರ್ಕಾರ ಮತ್ತು ಅಧಿಕಾರಿಗಳು ನಿಮ್ಮ ಬಳಿಗೆ ಬಂದು ಸುಮಾರು ರೂ. 37.70 ಲಕ್ಷಗಳ ವಿವಿಧ ಪ್ರಯೋಜನಗಳನ್ನು ವಿತರಿಸಲಾಗಿದೆ. ಹಾಗೂ 60 ವರ್ಷ ಮೇಲ್ಪಟ್ಟಂತಹ ಜನರನ್ನು ಅಧಿಕಾರಿಗಳೇ ಗುರುತು ಮಾಡಿ ಅವರಿಗೆ ಮುಂದಿನ ತಿಂಗಳಿಂದಲೇ ಮಾಶಾಸನ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಇಂದು ಬಹಳ ಜನ ರೈತರು ಬಗರ್ ಹುಕುಂ ಸಾಗುವಳಿ ಮಾಡಿದ್ದು ಅಂತಹವರಿಗೆ ಸರ್ಕಾರದ ಜಮೀನನ್ನು ಕೊಡಲು ಅವಕಾಶವಿದ್ದರೆ ಹಾಗೂ ಅರಣ್ಯ ಇಲಾಖೆಯ ಆಕ್ಷೇಪಣೆ ಇಲ್ಲದಿದ್ದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಮರಡಿ ಗ್ರಾಮದಲ್ಲಿ 1965-66 ನೇ ಸಾಲಿನಲ್ಲಿ ನೀಲಕಂಠಪ್ಪ ಎಂಬುವರು ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಸುಮಾರು 40 ರಿಂದ 50 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದು ಇದುವರೆಗೂ ಯಾವುದೇ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಇಂದಿಗೂ ಆ ಪ್ರದೇಶ ಕೈಗಾರಿಕೆ ಪ್ರದೇಶವಾಗಿಯೇ ಉಳಿದಿದೆ. ಆ ಪ್ರದೇಶವನ್ನು ಬಗರ್ ಹುಕುಂ ಸಾಗುವಳಿದಾರರಿಗೆ ವಿತರಿಸಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಬಹಳಷ್ಟು ಬಡ ಜನರು ಮರಣ ಹೊಂದಿದಲ್ಲಿ ಹೂಳಲು ಜಾಗವಿಲ್ಲದೆ ಪರದಾಡುವ ಸ್ಥಿತಿಯಿದೆ ಹಾಗಾಗಿ ಸರ್ಕಾರಿ ಜಮೀನು ಲಭ್ಯವಿರುವೆಡೆ ಗ್ರಾಮಕ್ಕೊಂದು ರುದ್ರಭೂಮಿ ನಿರ್ಮಾಣ ಮಾಡಲು ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಲಾಗಿದೆ. ಮಾದರಿಯಾಗಿ ಮಂಗೇನಹಳ್ಳಿ ಗ್ರಾಮದಲ್ಲಿ ಸುಮಾರು ರೂ.50 ಲಕ್ಷ ವೆಚ್ಚದಲ್ಲಿ ರುದ್ರಭೂಮಿ ನಿರ್ಮಾಣ ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿ ತಲಾ ರೂ.20 ಲಕ್ಷ ವೆಚ್ಚದಲ್ಲಿ ಎಸ್ ಟಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ತಾಲ್ಲೂಕಿನಲ್ಲಿ ಕೆ.ಇ.ಬಿ ಯಿಂದ ತಂತಿಗಳು ಮತ್ತು ಹಳೆ ಕಂಬಗಳನ್ನು ಬದಲಾಯಿಸಿ ಹೊಸ ಟಿ.ಸಿ ಗಳನ್ನು ಸ್ಥಾಪಿಸಲು ಸುಮಾರು ರೂ.120 ಕೋಟಿ ಹಣ ಮಂಜೂರಾತಿ ಮಾಡಿಸಲಾಗಿದೆ ಎಂದರು.

ಸಂಸದರಾದ ಜಿ.ಎಂ. ಸಿದ್ದೇಶ್ವರ ಮಾತನಾಡಿ ಈ ಕಾರ್ಯಕ್ರಮದ ಮೂಲಕ ಜನರು ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳ ಬಳಿ ಹಾಗೂ ವಿವಿಧ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಿ ಇಲಾಖೆಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ವಿವಿಧ ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿನ ಗ್ರಾಮಗಳ ಜನರ ಸಮಸ್ಯೆಗಳನ್ನು ಪರಿಶೀಲಿಸಿದರೆ ಪರಿಹಾರ ನೀಡಲು ನೆರವಾಗುತ್ತದೆ. ಸರ್ಕಾರದ ಮತ್ತೊಂದು ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ನೀಡುತ್ತಿದೆ. ಜನರಿಗೆ ವೃದ್ಧಾಪ್ಯವೇತನ, ವಿಧವಾವೇತನ, ಅಂಗವಿಕಲರ ವೇತನ, ಮುಂತಾದ ಸೌಲಭ್ಯಗಳನ್ನು ಕಾಲವಿಳಂಬವಿಲ್ಲದೇ ಮಾಡಲು ಅನುಕೂಲವಾಗಿದೆ. ಸರ್ಕಾರವು ರೈತರಿಗಾಗಿ, ಬಡವರಿಗಾಗಿ ದೀನ-ದಲಿತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಉಜ್ವಲ ಯೋಜನೆಯಡಿ ದೇಶದಲ್ಲಿ ಸುಮಾರು ರೂ.12 ಕೋಟಿ ಫಲಾನುಭವಿಗಳಿಗೆ ಉಚಿತ ಒಲೆ ಮತ್ತು ಗ್ಯಾಸ್ ಸೌಲಭ್ಯ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯೆಕ್ಷೆ ಕೆ.ವಿ.ಶಾಂತಕುಮಾರಿ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ್, ಚನ್ನಗಿರಿ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಕವಿತಾ ಕಲ್ಲೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯೆಕ್ಷೆ ಚಂದ್ರಮ್ಮ ರುದ್ರಪ್ಪ, ತಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಣಿ ಪ್ರಕಾಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮುಖ್ಯ ಕಾರ್ಯನಿರ್ವಹಕಾಧಿಕಾರಿ ವಿಜಯ ಮಹಾಂತೇಶ ಬಿ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ, ಪ್ರಭಾರ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ ಎಸ್, ಚನ್ನಗಿರಿ ತಹಶೀಲ್ದಾರ್ ಡಾ. ಪಟ್ಟರಾಜ ಗೌಡ ಮುಂತಾದವರು ಉಪಸ್ಥತಿತರಿದ್ದರು.

LEAVE A REPLY

Please enter your comment!
Please enter your name here