ಬಳ್ಳಾರಿ, :ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಜಿಲ್ಲಾ ಗೃಹರಕ್ಷಕರದಳ, ವಿಮ್ಸ್ ಮತ್ತು ಬಳ್ಳಾರಿ ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ವಿಮ್ಸ್ ರಕ್ತ ಭಂಡಾರದ ಸಭಾಂಗಣದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಿಮಿತ್ತ ಸೋಮವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಮೂಲತಃ ಎಸ್ಬಿಐ ನೌಕರರಾದ ದೇವಣ್ಣ ಅವರು 100ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ದಾಖಲೆ ಮಾಡಿದರು. ಶಿಬಿರದಲ್ಲಿ 25ಕ್ಕಿಂತ ಹೆಚ್ಚು ಜನ ರಕ್ತದಾನ ಮಾಡಿದರು.
ಇದೇ ಸಮಯದಲ್ಲಿ ವಿಮ್ಸ್ ರಕ್ತ ಭಂಡಾರದಲ್ಲಿ ಕೋವಿಡ್ ನಿಮಿತ್ತ ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿರುವ ಡಾ.ಶೋಭಾ ಬಿರಾದಾರ ಮತ್ತು ಲ್ಯಾಬ್ ಸಿಬ್ಬಂದಿಗಳಾದ ಸಂತೋಷ, ತಿರುಮಲಮ್ಮ, ಅಂಜಿನಪ್ಪ, ವೀರಮ್ಮ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿಗಳು ಹಾಗೂ ವಿಮ್ಸ್ ನಿರ್ದೇಶಕರಾದ ಡಾ.ಗಂಗಾಧರ್ ಗೌಡ, ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎ.ಷಕೀಬ್ ಮತ್ತು ರೆಡ್ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಮತ್ತು ವಿಮ್ಸ್ ಸಿಬ್ಬಂದಿ ಇದ್ದರು.