ಮಂಡ್ಯ : ಕರೋನಾದಿಂದ ಪಾರಾಗಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಲಸಿಕೆ ಪಡೆಯುವುದೇ ಉತ್ತಮಮಾರ್ಗ ಎಂದು ಜಿಲ್ಲಾಧಿಕಾರಿ ಎಸ್ .ಅಶ್ವಥಿ ಹೇಳಿದರು.
ಮದ್ದೂರಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಲಸಿಕಾ ಅಭಿಯಾನದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಆದ್ಯತಾ ವರ್ಗಕ್ಕೆ ಲಸಿಕೆಯನ್ನು ಹಾಕಲಾಗುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಸಾಮಾಜಿಕ ಅಂತರ , ಮಾಸ್ಕ್ ಧರಿಸುವುದು , ಸ್ಯಾನಿಟೈಜರ್ ಬಳಕೆ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು .
ಈ ಸಂದರ್ಭದಲ್ಲಿ ಮದ್ದೂರು ಶಾಸಕರಾದ ಡಿ.ಸಿ ತಮ್ಮಣ್ಣ, ಜಿಲ್ಲಾ ಆರ್ ಸಿ.ಹೆಚ್ ಅಧಿಕಾರಿ ಡಾ.ಸೋಮಶೇಖರ್, ಉಪವಿಭಾಗಾಧಿಕಾರಿ ಐಶ್ವರ್ಯ ಹಾಗೂ ಮತ್ತಿತರರು ಇದ್ದರು.