ರಾಯಚೂರು ಜಿಲ್ಲೆಯಲ್ಲಿ ಜಲಸಂರಕ್ಷಣೆಗೆ ಆದ್ಯತೆ:ಉದ್ಯೋಗ ಖಾತ್ರಿ ಯೋಜನೆಯಡಿ ಜಲಶಕ್ತಿ ಅಭಿಯಾನ ಜಾರಿ

0
169

ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಗ್ರಾಮೀಣ ಭಾಗಗಳಲ್ಲಿ ಜಲಸಂರಕ್ಷಣೆ ಮಾಡುವ ಉದ್ದೇಶದಿಂದ ‘ಜಲಶಕ್ತಿ’ ಅಭಿಯಾನ ಜಾರಿಗೆ ತರಲಾಗಿದ್ದು, ಇದರ ಅಡಿಯಲ್ಲಿ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ 2021-22 ನೇ ಸಾಲಿನಲ್ಲಿ ಕ್ರಿಯಾಯೋಜನೆ ಮಾಡಿಕೊಳ್ಳಲಾಗಿದೆ. ಕೊವಿಡ್‌ ಕಾರಣದಿಂದ ಗ್ರಾಮೀಣ ಭಾಗಗಳಲ್ಲಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ಬಡವರಿಗೆ ಈ ಯೋಜನೆಯು ನೆರವಿಗೆ ಬಂದಿದ್ದು, 2020-21 ನೇ ಸಾಲಿನಲ್ಲಿ ನಡೆಸಿದ ಸಾಕಷ್ಟು ಕಾಮಗಾರಿಗಳು ಇದಕ್ಕೆ ಸಾಕ್ಷಿಯಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಬೇಡಿಕೆಗೆ ತಕ್ಕಂತೆ ಉದ್ಯೋಗ ಸೃಜನ ಮಾಡುವುದರ ಜೊತೆಗೆ ಕೆಲವು ಕಾಮಗಾರಿಗಳನ್ನು ಮಾಡುವುದಕ್ಕೆ ಕ್ರಿಯಾಯೋಜನೆ ಮಾಡಿರುವುದು ವಿಶೇಷ.

ಬರಗಾಲ ಪೀಡಿತ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿ ಪರಿಣಮಿಸಿದೆ. 2020-21ನೇ ಸಾಲಿನಲ್ಲಿ 1,869 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. 12,987 ಬದು ನಿರ್ಮಾಣ, 152 ಕೆರೆಗಳ ಹೂಳೆತ್ತಲಾಗಿದೆ. 466 ಕಡೆಗಳಲ್ಲಿ ಮಳೆನೀರು ಕೊಯ್ಲು ಕೈಗೊಳ್ಳಲಾಗಿದೆ. ಅಲ್ಲದೆ 36 ಕಲ್ಯಾಣಿಗಳಿಗೆ ಮರುಜೀವ ನೀಡಲಾಗಿದ್ದು, 93 ಕಡೆಗಳಲ್ಲಿ ಗೋಕಟ್ಟೆಗಳನ್ನು ನಿರ್ಮಿಸಲಾಗಿದೆ. ಆ ಮೂಲಕ ಅಂತರ್ಜಲ ಸಂರಕ್ಷಣೆಯಾಗಿದೆ.

2021-22ನೇ ಸಾಲಿನಲ್ಲಿಯೂ ಜಲಶಕ್ತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚು ಗುರಿ ಇಟ್ಟುಕೊಂಡು ಕಾರ್ಯಾರಂಭ ಮಾಡಲಾಗಿದೆ. 630 ಕೆರೆಗಳ ಸಮಗ್ರ ಅಭಿವೃದ್ಧಿ ಗುರಿ ಹೊಂದಲಾಗಿದ್ದು, ಈಗಾಗಲೇ 240 ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಈ ವರ್ಷ 20 ಕಲ್ಯಾಣಿಗಳಿಗೆ ಮರುಜೀವ ನೀಡಲಾಗುತ್ತಿದ್ದು, 101 ಕಡೆಗಳಲ್ಲಿ ಮಳೆನೀರು ಕೊಯ್ಲು ಮಾಡುವುದಕ್ಕೆ ಗುರಿ ನಿಗದಿಪಡಿಸಲಾಗಿದೆ ಎಂದು ರಾಯಚೂರು ಜಿಲ್ಲಾ ಪಂಚಾಯತ್​ ಸಿಇಒ ತನ್ವೀರ್​ ಆಸೀಫ್​ ಹೇಳಿದ್ದಾರೆ.

168 ಕಡೆಗಳಲ್ಲಿ ಅಂತರ್ಜಲ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗುತ್ತಿದೆ. 20 ಕಡೆಗಳಲ್ಲಿ ಅರಣ್ಯೀಕರಣ, 3580 ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತದೆ. ಒಟ್ಟಾರೆ ನೀರು ಸಂಗ್ರಹಣೆ ಮತ್ತು ಅದರ ಸದುಪಯೋಗಕ್ಕೆ ಸಂಬಂಧಿಸಿದಂತೆ 26,411 ಕಾಮಗಾರಿಗಳನ್ನು ಮಾಡುವ ಗುರಿ ನಿಗದಿ ಮಾಡಿ ಕೊಳ್ಳಲಾಗಿದೆ. ಲಾಕ್‌ಡೌನ್‌ ಜಾರಿ ಮಧ್ಯೆಯೂ ಸರ್ಕಾರದ ಮಾರ್ಗಸೂಚಿ ಅನುಸಾರ 3,146 ಕಾಮಗಾರಿಗಳನ್ನು ಆರಂಭಿಸಲಾಗಿದೆ.

ವರ್ಷಾರಂಭ ಏಪ್ರಿಲ್‌ನಲ್ಲಿ ಮಾನವ ದಿನಗಳ ಸೃಜನೆ ಸಂಪೂರ್ಣ ಸ್ಥಗಿತವಾಗಿತ್ತು. ಕೊವಿಡ್‌ ಸೊಂಕು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹರಡಿತ್ತು. ಅತಿಹೆಚ್ಚು ಸೋಂಕಿತರು ಮತ್ತು ಪ್ರಾಣಹಾನಿ ಕಂಡುಬಂದಿದ್ದರಿಂದ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಸವಾಲಾಗಿ ಪರಿಣಮಿಸಿತ್ತು. ಆದರೆ ಬಡಜನರ ಉಪಜೀವನಕ್ಕೆ ನೆರವಾಗಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಕೋವಿಡ್‌ ನಿಯಮ ಪಾಲನೆಯೊಂದಿಗೆ ಮತ್ತೆ ಮೇ, ಜೂನ್‌ನಲ್ಲಿ ವ್ಯಾಪಕವಾಗಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್​ ಸಿಇಒ ತನ್ವೀರ್​ ಆಸೀಫ್​ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here