ವಿಜಯನಗರ: (ನ,14) ಇಂದು ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಜವಾಹರಲಾಲ ನೆಹರು ಜನ್ಮದಿನದಂದು, ಮಕ್ಕಳ ದಿನಾಚರಣೆ ಆಚರಿಸಿ, ನಂತರ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ “ಓದಿನ ಮನೆಗೆ ಹೋಗೋಣ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮುದ್ದು ಪುಟಾಣಿಗಳು, ಗ್ರಂಥಾಲಯ ಓದುಗರು ಹಾಗೂ ಊರಿನ ಪ್ರಮುಖ ಗಣ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಯವರು, ಶಿಕ್ಷಣ ಕಾರ್ಯಪಡೆಯವರು ಭಾಗವಹಿಸಿದ್ದರು. ಗ್ರಂಥಪಾಲಕರಾದ ತುಡುಮ ಗುರುರಾಜ್ ಇವರು ಗ್ರಂಥಾಲಯದಲ್ಲಿ ಪುಸ್ತಕಗಳ ಪ್ರದರ್ಶನ ಏರ್ಪಡಿಸಿ, ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ಮಕ್ಕಳಿಗೆ ತಿಳಿಸಿದರು.
ಹಾಗೇ 6 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ನೊಂದಣಿ ಸದಸ್ಯತ್ವವನ್ನು ಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಕೊನೆಗೆ ಮಕ್ಕಳಿಗೆ ಸಿಹಿ ಹಂಚುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ವರದಿ:-ಮಂಜುನಾಥ್. ಹೆಚ್