ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ, ಶಿಕ್ಷಣದಷ್ಟೇ ಪ್ರಾಮುಖ್ಯತೆಯನ್ನು ಆರೋಗ್ಯಕ್ಕೆ ನೀಡಬೇಕು: ಎಂ.ಎಲ್.ವೈಶಾಲಿ.

0
126

ಶಿವಮೊಗ್ಗ, ನವೆಂಬರ್ 23: ಶಿಕ್ಷಣದಷ್ಟೇ ಪ್ರಾಮುಖ್ಯತೆಯನ್ನು ಆರೋಗ್ಯಕ್ಕೂ ನೀಡಬೇಕು. ಆರೋಗ್ಯವಂತರಾಗಿದ್ದರೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಆರೋಗ್ಯದೆಡೆ ಹೆಚ್ಚಿನ ಗಮನ ಹರಿಸಬೇಕು. ಹಾಗೂ ಎಲ್ಲ ಮಕ್ಕಳು ಜಂತುಹುಳು ನಾಶಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿವಮೊಗ್ಗ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆ, ಎನ್.ಟಿ.ರಸ್ತೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸರ್ಕಾರಿ ಉರ್ದು ಪ್ರೌಢಶಾಲೆ, ಎನ್.ಟಿ.ರಸ್ತೆ ಶಿವಮೊಗ್ಗ ಇಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಸಾಧಿಸಲು ಉತ್ತಮ ಆರೋಗ್ಯ ಹೊಂದಿರಬೇಕು. ಆದ ಕಾರಣ ಪ್ರತಿ ಮಕ್ಕಳು ಶಾಲೆ, ಅಂಗನವಾಡಿಗಳಲ್ಲಿ ನೀಡಲಾಗುವ ಜಂತುಹುಳು ನಾಶಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಹಾಗೂ ತಮ್ಮ ಕುಟುಂಬ, ನೆರೆಹೊರೆಯವರು ಈ ಮಾತ್ರೆ ಸೇವನೆ ಮಾಡುವಂತೆ ತಿಳಿಸಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನವೆಂಬರ್ 23 ರಿಂದ 27 ರವರೆಗೆ 1 ರಿಂದ 19 ವರ್ಷದ ಮಕ್ಕಳಿಗೆ ಆಲ್ಬೆಂಡಜೋಲ್ ಜಂತುಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಎಲ್ಲ ಮಕ್ಕಳೂ ಇದರ ಸದುಪಯೋಗ ಪಡೆಯಬೇಕೆಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ ಮಲ್ಲಪ್ಪ ಮಾತನಾಡಿ, ಜಂತಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ, ಪದವಿಪೂರ್ವ ಕಾಲೇಜು, ಐಟಿಐ ಕಾಲೇಜ್, ಟೆಕ್ನಿಕಲ್ ಕೋರ್ಸ್ ಕಾಲೇಜು, ನರ್ಸಿಂಗ್ ಕಾಲೇಜ್, ಪ್ರಥಮ ಬಿ.ಎ, ಮೆಡಿಕಲ್ ಮತ್ತು ಆಯುರ್ವೇದಿಕ್ ಕಾಲೇಜುಗಳಲ್ಲಿ ವಿತರಿಸಲಾಗುತ್ತಿದೆ. 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧಮಾತ್ರೆ ಹಾಗೂ 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆ ನೀಡಲಾಗುವುದು. 2021-22 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,29,195 ಮಕ್ಕಳು ನೋಂದಣಿಯಾಗಿದ್ದು ಜಿಲ್ಲೆಯ ಎಲ್ಲ ಮಕ್ಕಳ ಪೋಷಕರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದರು.

ಸರ್ಕಾರಿ ಉರ್ದು ಪ್ರೌಢಶಾಲೆಯ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ ತಮ್ಮ ಶಾಲೆಯಲ್ಲಿ ಮಕ್ಕಳಲ್ಲಿ ಆರೋಗ್ಯ ಪ್ರಜ್ಞೆ ಹೆಚ್ಚುಸವಂತಹ ಹಾಗೂ ಸ್ವಚ್ಚತೆ ಮತ್ತು ಆರೋಗ್ಯ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಲ್ಲಿ ರಕ್ತಹೀನತೆ ಉಂಟು ಮಾಡಿ ಅನಾರೋಗ್ಯಕ್ಕೀಡು ಮಾಡಿ ಏಕಾಗ್ರತೆಯನ್ನು ಕುಂಠಿತಗೊಳಿಸುವ ಜಂತುಹುಳು ನಿವಾರಣೆಗಾಗಿ ಸರ್ಕಾರ ನಿಯಮಿತವಾಗಿ ನೀಡುವ ಜಂತುಹುಳು ನಾಶಕ ಮಾತ್ರೆಗಳನ್ನು ಎಲ್ಲ ಮಕ್ಕಳಿಗೆ ನೀಡಲಾಗುತ್ತಿದೆ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಸಿಡಿಪಿಓ ರೇಖಾ, ಬಿಹೆಚ್‍ಇಓ ಪ್ರತಿಮಾ ಉಪಸ್ಥಿತರಿದ್ದರು. ಡಿಹೆಚ್‍ಇಓ ದೊಡ್ಡವೀರಪ್ಪ ನಿರೂಪಿಸಿದರು.

LEAVE A REPLY

Please enter your comment!
Please enter your name here