ಬೆಂಗಳೂರು:ಮಾ:05:-ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಾಗೂ ವಾಸವಿ ಎಜುಕೇಶನ್ ಟ್ರಸ್ಟ್, ಪ್ರಥಮ ದರ್ಜೆ ಕಾಲೇಜು ಜೆ.ಪಿ.ನಗರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ “ಕಾನೂನು ಅರಿವು” ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಶ್ರೀ ಕೆ. ದ್ವಾರಕನಾಥ್ ಬಾಬು ಅವರು ಕಾನೂನುಗಳ ತಿಳುವಳಿಕೆ ಜೀವನದಲ್ಲಿ ಅತ್ಯವಶ್ಯ ಇವುಗಳನ್ನು ತಮ್ಮ ಪರಿವಾರದಲ್ಲಿ ಮತ್ತು ಸಮುದಾಯದಲ್ಲಿ ಮುಂದಿನ ದಿನದಲ್ಲಿ ಉಪಯೋಗಿಸುವ ಸಂದರ್ಭ ಬರಬಹುದು. ದೇಶದಲ್ಲಿ ಸಾವಿರಾರು ಕಾನೂನುಗಳಿವೆ. ಅವುಗಳಲ್ಲಿ ಎಲ್ಲವೂ ಮುಖ್ಯವಾಗಿವೆ. ಆದರೆ ವಿಧ್ಯಾಥಿ೯ ಜೀವನದಲ್ಲಿ ಅವಶ್ಯಕವಾಗಿರುವ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆಯರ ಸಂರಕ್ಷಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಡ್ಡಾಯ ಶಿಕ್ಷಣದ ಹಕ್ಕುಗಳು ಮೊದಲಾದ ಕಾನೂನುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ. ಯಾರೂ ಕೂಡ ಕಾನೂನು ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಕಾನೂನು ಜೀವನದ ಅವಿಭಾಜ್ಯ ಅಂಗ. ಹೀಗಾಗಿ ಸಂಸ್ಥೆ ಕಾನೂನೇತರ ಪದವಿ ಕಾಲೇಜುಗಳಲ್ಲಿ ಕಾನೂನುಗಳನ್ನು ತಜ್ಞರ ಮೂಲಕ ಕಾನೂನುಗಳನ್ನು ತಿಳಿಯಪಡಿಸುವ ಕೆಲಸ ಮಾಡುತ್ತಿದೆ. ಜೊತೆಗೆ ವಿದ್ಯಾರ್ಥಿಗಳು ಪ್ರಬಂಧ ಮಂಡಿಸುವ ಮೂಲಕ ಕಾನೂನು ಜ್ಞಾನವನ್ನು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಾಗಾರ ಅತ್ಯುತ್ತಮವಾಗಿ ಏರ್ಪಟ್ಟಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ ವಿ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಆರ್. ಅಂಜನಾ ರೆಡ್ಡಿ ಇವರು ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆಯರ ಸಂರಕ್ಷಣೆ ಕಾನೂನು ಬಗ್ಗೆ ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸತೀಶ್ ಗೌಡ ಇವರು ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಮಾತನಾಡಿದರು. ಈ ಎರಡು ಕಾನೂನುಗಳ ಕುರಿತು ಹತ್ತು ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ಇದರಲ್ಲಿ ಉತ್ತಮವಾಗಿ ಪ್ರಬಂಧ ಮಂಡಿಸಿದ ಮೂವರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್. ಪಾವ೯ತಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಸಂಸು ಸಂಸ್ಥೆಯ ಸಂಶೋಧನಾ ಮುಖ್ಯಸ್ಥರಾದ ಡಾ.ರೇವಯ್ಯ ಒಡೆಯರ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಉಪಪ್ರಾಚಾರ್ಯರಾದ ಶ್ರೀ ನಾರಾಯಣಸ್ವಾಮಿ ಅವರು ವಂದನೆ ಸಲ್ಲಿಸಿದರು.