ಬಳ್ಳಾರಿ,ಮಾ.10 : ಕಾರ್ಮಿಕ ಇಲಾಖೆ ವತಿಯಿಂದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸಾಂಪ್ರದಾಯಿಕ ಸಪ್ತಾಹ ಮತ್ತು ಪಿಂಚಣಿ ಸಪ್ತಾಹ ಎಂಬ ಘೋಷವಾಕ್ಯದಡಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ದನ್ ಹಾಗೂ ಇ-ಶ್ರಮ್ ಹಾಗೂ ವಿವಿಧ ಕಾರ್ಮಿಕ ಇಲಾಖೆಗಳ ಯೋಜನೆಗಳ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಿರಗುಪ್ಪ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಕಾನೂನು ಸೇವಾ ಪ್ರಾಧಿಕಾರಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಸಿ.ಎನ್.ಲೋಕೇಶ್ ಅವರು ಮಾತನಾಡಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ದನ್ ಹಾಗೂ ಇ-ಶ್ರಮ್ ಹಾಗೂ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಫಲಾನುಭವಿಗಳಿಗೆ ತಲುಪವಂತೆ ನೋಡಿಕೊಳ್ಳಬೇಕು ಎಂದರು.
ಸರಕಾರದ ವಿವಿಧ ಯೋಜನೆಗಳು ನಿಗದಿಪಡಿಸಿದ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಅದರ ಉದ್ದೇಶ ಈಡೇರಲು ಸಾಧ್ಯ ಎಂಬುದನ್ನು ಅರಿತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಯ ವಿವಿಧ ಯೋಜನೆಗಳು ಕುರಿತು ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಮಾರಿಕಾಂಬ ಹುಲಿಕೋಟಿ, ಕಮಲ್ ಶಾ ಅಲ್ತಫ್ ಅಹಮದ್ ಅವರು ಮಾತನಾಡಿ, ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರು ನೋಂದಾಯಿಸುವ ಇ-ಶ್ರಮ್ ಕಾರ್ಡ್ ಹಾಗೂ ಅದರ ಪ್ರಯೋಜನಗಳು, ಸೌಲಭ್ಯಗಳು ಹಾಗೂ ಅಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸುವ ಪ್ರಧಾನ ಮಂತ್ರಿ ಶ್ರಮ್ಯೋಗಿ ಮಾನ್-ಧನ್ ಎಂಬ ಮಹತ್ವಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ಅಸಂಘಟಿತ ವಲಯ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.
ಸಿರುಗುಪ್ಪದ ಕಾರ್ಮಿಕ ನಿರೀಕ್ಷಕರಾದ ಸಿ.ಎನ್. ರಾಜೇಶ್ ಮತ್ತು ವಿವಿಧ ಅಸಂಘಟಿತ ಕಾರ್ಮಿಕರು ಮತ್ತು ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.