ರೈತರ ಕಬ್ಬು ಮಾರಾಟಕ್ಕೆ ಆ್ಯಪ್ ಅಭಿವೃದ್ಧಿ
-ಡಿ.ಸಿ. ಯಶವಂತ ವಿ. ಗುರುಕರ್

0
114

ಕಲಬುರಗಿ,ಮಾ.18:ಜಿಲ್ಲೆಯಲ್ಲಿ ಬೆಳೆಯಲಾಗುವ ಕಬ್ಬು ಸಕಾಲದಲ್ಲಿ ಮತ್ತು ಎಲ್ಲಾ ರೈತರ ಕಬ್ಬು ಮಾರಾಟವಾಗುವಂತೆ ದೀರ್ಘಾವಧಿಯ ವ್ಯವಸ್ಥೆಯಾಗಿ ಜಿಲ್ಲಾಡಳಿತದಿಂದ ವಿನೂತನವಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಹೇಳಿದರು.

ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಬ್ಬು ಖರೀದಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಮೂರು ತಿಂಗಳಲ್ಲಿ ಆ್ಯಪ್ ಅಭಿವೃದ್ಧಿಪಡಿಸಿ ಮುಂದಿನ ವರ್ಷದಿಂದ ಇದನ್ನು ಜಾರಿಗೆ ತರಲಾಗುವುದು ಎಂದು ಹೋಳಿ ಹಬ್ಬದ ದಿನದಂದು ಕಬ್ಬು ಬೆಳೆಯುವ ರೈತರಿಗೆ ಶುಭ ಸುದ್ದಿ ನೀಡಿದರು.

ರೈತರು ಆ್ಯಪ್‍ನಲ್ಲಿಯೇ ತಮ್ಮ ಜಮೀನಿನ ಸರ್ವೇ ಸಂಖ್ಯೆ ಜೊತೆಗೆ ಕಬ್ಬು ಕಟಾವಿಗೆ ವೈಯಕ್ತಿಕ ವಿವರದೊಂದಿಗೆ ಮನವಿ ಸಲ್ಲಿಸಬೇಕು. ಈ ಮಾಹಿತಿ ಸಕ್ಕರೆ ಕಾರ್ಖಾನೆ ಮತ್ತು ಜಿಲ್ಲಾಡಳಿತಕ್ಕೆ ಏಕಕಾಲದಲ್ಲಿ ರವಾನೆಯಾಗಲಿದೆ. ಅದರಂತೆ ಸಕ್ಕರೆ ಕಾರ್ಖಾನೆಯವರು ಕ್ಷೇತ್ರಕ್ಕೆ ಹೋಗಿ ಕಟಾವು ಮಾಡಿಕೊಳ್ಳುತ್ತಾರೆ. ಈ ರೀತಿಯ ತಂತ್ರಾಂಶ ಕಾರ್ಯನಿರ್ವಹಿಸಲಿದ್ದು, ಇದರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಲಿದೆ ಎಂದರು.

ಕಟಾವಿಗೆ ದಿನಾಂಕ ನಿಗದಿ, ಪ್ರಾಯೋಗಿಕ ಜಾರಿ:

ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ ಆಳಂದ ತಾಲೂಕಿನ ಭೂಸನೂರ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಬಾಕಿ ಉಳಿದಂತಹ 4239 ಎಕರೆ ಪ್ರದೇಶದಲ್ಲಿ ಬೆಳೆಯಲಾದ ಕಬ್ಬನ್ನು ಕಟಾವು ಮಾಡಲು ಗ್ರಾಮವಾರು ದಿನಾಂಕ ನಿಗದಿ ಮಾಡಿದೆ. ಏಪ್ರಿಲ್ 10 ರೊಳಗೆ ಕಾರ್ಖಾನೆ ವ್ಯಾಪ್ತಿಯ ಎಲ್ಲಾ ಕಬ್ಬು ಕಟಾವು ಮಾಡುವಂತೆ ಪ್ರಾಯೋಗಿಕ ಯೋಜನೆಯಾಗಿ ಎನ್.ಎಸ್.ಎಲ್. ಕಾರ್ಖಾನೆಯ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ. ಇದು ಯಶಕಂಡಲ್ಲಿ ಮುಂದಿನ ದಿನದಲ್ಲಿ ಜಿಲ್ಲೆಯ ಇತರೆ ಸಕ್ಕರ ಕಾರ್ಖಾನೆ ವ್ಯಾಪ್ತಿಯಲ್ಲಿಯೂ ಜಾರಿಗೆ ತರಲಾಗುವುದು ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದರು.

ನಿಂಬರ್ಗಾ ವಿಭಾಗದಲ್ಲಿ 550 ಎಕರೆ, ಆಳಂದ ವಿಭಾಗದಲ್ಲಿ 410 ಎಕರೆ, ಕಲಬುರಗಿ ವಿಭಾಗದಲ್ಲಿ 1205 ಎಕರೆ, ಚೌಡಾಪೂರ ವಿಭಾಗದಲ್ಲಿ 1458 ಎಕರೆ, ಅಫಜಲಪೂರ ವಿಭಾಗದಲ್ಲಿ 184 ಎಕರೆ, ಕರಜಗಿ ವಿಭಾಗದಲ್ಲಿ 130 ಎಕರೆ ಹಾಗೂ ಕಡಗಂಚಿ ವಿಭಾಗದಲ್ಲಿ 302 ಸೇರಿ ಒಟ್ಟು 4239 ಎಕರೆ ಪ್ರದೇಶಗಳಿಂದ ಅಂದಾಜು 1,24,768 ಮೆಟ್ರಿಕ್ ಟನ್ ಬಾಕಿ ಕಬ್ಬು ಕಟಾವು ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದರು.

ಕಬ್ಬು ಪಾವತಿ ವಿವರ:

2021-22ನೇ ಸಾಲಿಗೆ ಎನ್.ಎಸ್.ಎಲ್. ಕಾರ್ಖಾನೆಯು 6,594 ರೈತರಿಂದ 8,27,737 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 24,128.53 ಲಕ್ಷ ರೂ. ಮೊತ್ತ ಪೈಕಿ 19,348.45 ಲಕ್ಷ ರೂ. (ಶೇ.80.18 ರಷ್ಟು) ರೈತರಿಗೆ ಪಾವತಿಸಿದ್ದು, 4,780.08 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ನಾನು ಅಧಿಕಾರ ವಹಿಸಿದಾಗ ಪಾವತಿ ಪ್ರಮಾಣ ಶೇ.38 ಇತ್ತು, ಇದೀಗ ಅದು 80.18 ತಲುಪಿದೆ ಎಂದರು.

ಅಫಜಲಪೂರ ತಾಲೂಕಿನ ಹವಳಗಾದ ರೇಣುಕಾ ಸುಗರ್ಸ್ ಕಾರ್ಖಾನೆಯು 11,250 ರೈತರಿಂದ 11,73,010 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 34,765.67 ಲಕ್ಷ ರೂ. ಮೊತ್ತ ಪೈಕಿ 30,442.36 ಲಕ್ಷ ರೂ. (ಶೇ.87.56 ರಷ್ಟು) ಪಾವತಿಸಿದ್ದು, 4,323.31 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ.

ಅದೇ ರೀತಿ ಯಡ್ರಾಮಿ ತಾಲೂಕಿನ ಮಳ್ಳಿ ಉಗರ್ ಸುಗರ್ ಕಾರ್ಖಾನೆಯು 4,36,550 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 13,573.34 ಲಕ್ಷ ರೂ. ಮೊತ್ತ ಪೈಕಿ 8,920.463 ಲಕ್ಷ ರೂ. (ಶೇ.65.73 ರಷ್ಟು) ಪಾವತಿಸಿದ್ದು, 4,651.877 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ.

ಸಹಾಯವಾಣಿ ಸ್ಥಾಪನೆ:

ರೈತರಿಂದ ಕಬ್ಬು ಕಟಾವು ಸಮಸ್ಯೆಗಳನ್ನು ಆಲಿಸಲು ಸಹಾಯವಾಣಿ ಸ್ಥಾಪಿಸಲಾಗುತ್ತದೆ. ರೈತರು ದೂರವಾಣಿ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು ಎಂದರು.

ಸಾಮಾಜಿಕ ಪಿಂಚಣಿಗೂ ಸಹಾಯವಾಣಿ:

ಜಿಲ್ಲೆಯಾದ್ಯಂತ ಸಾಮಾಜಿಕ ಪಿಂಚಣಿ ಕುರಿತು ಸಮಸ್ಯೆ ಮತ್ತು ದೂರುಗಳನ್ನು ಆಲಿಸಲು ಟೋಲ್-ಫ್ರೀ ಸಹಾಯವಾಣಿ ಸ್ಥಾಪಿಸಲಾಗುತ್ತದೆ. ದೂರು ಬಂದ 72 ಗಂಟೆಯಲ್ಲಿಯೆ ಸಮಸ್ಯೆ ಪರಿಹಾರಕ್ಕೆ ಒದಗಿಸುವ ವಿನೂತನ ವ್ಯವಸ್ಥೆ ಜಿಲ್ಲಾಡಳಿತ ಜಾರಿಗೆ ತರುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ‌ ಭೀಮಾಶಂಕರ ತೆಗ್ಗಳ್ಳಿ ‌ಇದ್ದರು.

LEAVE A REPLY

Please enter your comment!
Please enter your name here