ಕಲಬುರಗಿ:ಡಿ.6: ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶಗಳಾದ ಸಮಾನತೆ, ಸಹಿಷ್ಣುತೆ, ಭಾತೃತ್ವ ಮತ್ತು ಜಾತ್ಯಾತೀತ ತತ್ವಗಳನ್ನು ನಾವೆಲ್ಲರು ಜೀವನದಲ್ಲಿ ಅಳವಡಿಸಿಕೊಂಡಿದಲ್ಲಿ ಮಾತ್ರ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಹೇಳಿದರು.
65ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸೋಮವಾರ ನಗರದ ಜಗತ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಸಹಾಯಕ ಆಯುಕ್ತೆ ಮೋನಾ ರೋಟ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್. ಅಲ್ಲಾಭಕ್ಷ ಅವರು ಸಹ ಮಹಾ ಮಾನವತಾವಾದಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್. ಮುಖಂಡರಾದ ಡಾ.ಡಿ.ಜಿ. ಸಾಗರ, ಜಿಲ್ಲಾ ಎ.ಸಿ.-ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಎಸ್. ಮದನಕರ್, ಪ್ರಧಾನ ಕಾರ್ಯದರ್ಶಿ ಬಾಬು ಮೌರ್ಯ, ವಿಜಯಕುಮಾರ ನಾಗೂರ, ವಿಠ್ಠಲ ಗೋಳಾ, ಸಂಜಯಕಪೂರ ಸೇರಿದಂತೆ ವಿವಿಧ ಸಮಾದ ಮುಖಂಡರು, ನೌಕರರು, ಸಂಘಟನೆಗಳ ಪದಾಧಿಕಾರಿಗಳು ಸಂವಿಧಾನ ಪಿತಾಮಹನಿಗೆ ಗೌರವ ಸಲ್ಲಿಕೆಯಲ್ಲಿ ಭಾಗಿಯಾಗಿದ್ದರು.
ಸಿದ್ದಾರ್ಥ ವಿಹಾರ ಟ್ರಸ್ಟಿನ ಪೂಜ್ಯ ಸಂಗಾನಂದ ಭಂತೇಜಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪೂಜೆ ಮಾಡಿ ಬುದ್ಧ ವಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡಿ.ಸಿ. ವಿ.ವಿ. ಜ್ಯೋತ್ಸ್ನಾ ಅವರು ಪಂಚಶೀಲ ದ್ವಜಾರೋಹಣ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕಿ ಇಶಾ ಪಂತ್ ಅವರು ನೀಲಿ ಧ್ವಜಾರೋಹಣ ಮಾಡಿದರು.