ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ; ನದಿತೀರದ ಮೋಳವಾಡ ಗ್ರಾಮದಲ್ಲಿ ವಾಸ್ತವ್ಯ,
ಸಮರ್ಪಕ ಪುನರ್ವಸತಿ ಕಲ್ಪಿಸಲು ಗ್ರಾಮಸ್ಥರ ಮನವಿ

0
95

ಬೆಳಗಾವಿ, ಮಾ.19 : ಆಡಳಿತವನ್ನು ಜನರ ಮನೆಬಾಗಿಲಿಗೆ ತೆಗೆದುಕೊಂಡು ಹೋಗುವ ಸರಕಾರದ ಆಶಯದಂತೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶನಿವಾರ(ಮಾ.19) ಕೃಷ್ಣಾ ಹೊಳೆದಂಡೆಯ ಕಾಗವಾಡ ತಾಲ್ಲೂಕಿನ ಮೋಳವಾಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದರು.

ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಗ್ರಾಮದ ಹಿರಿಯರು, ಪೂರ್ಣಕುಂಭ ಹೊತ್ತ ಮಹಿಳೆಯರು ಆತ್ಮೀಯವಾಗಿ ಬರಮಾಡಿಕೊಂಡರು.

ಮೋಳವಾಡದ ಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿಗಳು ಗ್ರಾಮಸಂಚಾರವನ್ನು ಆರಂಭಿಸಿದರು.
ಅಹವಾಲು ಆಲಿಸಲು ಬಂದ ಜಿಲ್ಲಾಧಿಕಾರಿಗಳನ್ನು ಅಲಂಕೃತ ಎತ್ತಿನ ಬಂಡಿಯಲ್ಲಿ ಪ್ರೀತಿಯಿಂದ ಬರಮಾಡಿಕೊಂಡರು.
ಝಾಂಜ್, ಡೊಳ್ಳು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಮಹಾಲಕ್ಷ್ಮೀ ಮಂದಿರದವರೆಗೆ ಕರೆದೊಯ್ದರು. ಗ್ರಾಮದ ಮಹಾದೇವ ಮಂದಿರದ ಬಳಿ ಎತ್ತಿನ ಬಂಡಿಯಿಂದ ಕೆಳಗಿಳಿದ ಜಿಲ್ಲಾಧಿಕಾರಿಗಳು ಸ್ವತಃ ಡೊಳ್ಳು ಬಾರಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸಾಥ್ ನೀಡಿದರು.
ಇದೇ ವೇಳೆ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ; ಪಕ್ಕದ ಬೀರದೇವರ ದರ್ಶನ ಪಡೆದುಕೊಂಡರು. ಇದಾದ ಬಳಿಕ ಜೈನ ಬಸದಿಗೆ ಕೂಡ ತೆರಳಿದರು.
ನಂತರ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಬಳಿಕ ಗ್ರಾಮಸ್ಥರ ಅಹವಾಲುಗಳನ್ನು ಕೇಳಿದರು.

2019 ರ ಮಹಾಪೂರ ಸಂದರ್ಭದಲ್ಲಿ ಮುಳುಗಡೆಯಾಗಿದ್ದ ಪ್ರದೇಶಗಳ ಕುರಿತು ಜನರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ವಿಕಲಚೇತನ ಬಾಲಕ ಪ್ರಜ್ವಲ್ ರಾಮು ಬಾಳಿಕಾಯಿ ಅವರ ಪಾಲಕರೊಂದಿಗೆ ಮಾತನಾಡಿದರು. ಮಗ ಬುದ್ಧಿಮಾಂಧ್ಯನಾಗಿದ್ದು, ತಂದೆ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಕೂಡಲೇ ಮನೆಯನ್ನು ಕಟ್ಟಿಸಿಕೊಡುವಂತೆ ಬಾಲಕನ ತಂದೆ ಪ್ರಜ್ವಲ್ ಮನವಿ ಮಾಡಿಕೊಂಡರು.

ಸಮೀಪ ಪುನರ್ವಸತಿ ಕಲ್ಪಿಸಲು ಮನವಿ:

ಕೃಷ್ಣಾ ನದಿತೀರದಲ್ಲಿರುವ ಮೋಳವಾಡ ಗ್ರಾಮವನ್ನು ಮುಳುಗಡೆ ಗ್ರಾಮ ಎಂದು ಘೋಷಿಸಿ ಈಗಾಗಲೇ ಎಲ್ಲ ಕುಟುಂಬಗಳಿಗೂ ಪರಿಹಾರವನ್ನು ಸರಕಾರ ಒದಗಿಸಿದೆ. ಆದರೆ ಪುನರ್ವಸತಿ ಕೇಂದ್ರವು ಮುಳುಗಡೆ ಗ್ರಾಮದಿಂದ ಎಂಟತ್ತು ಕಿ.ಮೀ. ದೂರವಿದೆ. ಇದರ ಬದಲಾಗಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸಮೀಪದಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿ, ತಹಶಿಲ್ದಾರ ಆರ.ಆರ್.ಬುರ್ಲಿ, ತಾಲ್ಲೂಕು ಆರೋಗ್ಯಾಧಿಕಾರಿ ಬಸಗೌಡ ಕಾಗೆ ಸೇರಿದಂತೆ ಎಲ್ಲ ಇಲಾಖೆಗಳ‌ ತಾಲ್ಲೂಕುಮಟ್ಟದ ಅಧಿಕಾರಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here