ಕೊಟ್ಟೂರು:ಮೇ:17:- ವಿಶಿಷ್ಟಾಚರಣೆಯ ಇಲ್ಲಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವವು ಬೌದ್ದಪೊರ್ಣಿಮೆಯ ದಿನವಾದ ಸೋಮವಾರ ಇಳಿ ಸಂಜೆ 5.45ರ ಸುಮಾರಿನಲ್ಲಿ ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ವಿಜೃಂಭಣೆಯಿಂದ ಜರುಗಿತು.
ರಥಕ್ಕೆ ಚಾಲನೆ ದೊರಕುತಿದ್ದಂತೆ ದುರ್ಗಮ್ಮದೇವಿಗೆ ಹರಕೆ ಹೊತ್ತ ಕೆಲ ಭಕ್ತರು ಜೀವಂತ ಕೋಳಿಗಳನ್ನು ತೂರಿ ತಮ್ಮ ಭಕ್ತಿ ಸಮರ್ಪಿಸಿದರು.
ದೇವಿಯ ರಥೋತ್ಸವಕ್ಕೂ ಮುಂಚೆ ಗುಡುಗು ಸಮೇತ ಮಳೆ ಆರ್ಭಟಕ್ಕೆ ಭಕ್ತರಿಗೆ ಆತಂಕ ಶುರುವಾಗಿತ್ತು. ಸ್ವಲ್ಪ ಸಮಯದಲ್ಲಿ ಮಳೆ ಶಾಂತವಾದ ಕಾರಣ, ಭಕ್ತರು ಬಿಕ್ಕಿಮರಡಿ ದುರ್ಗಮ್ಮದೇವಿಯ ದೇವಸ್ಥಾನದ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸತೊಡಗಿದರು, ನಂತರ ರಥೋತ್ಸವ ಜರುಗುವ ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊಂಡವು.
ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ಏಕೈಕ ಸಂಪ್ರದಾಯ ಕೊಟ್ಟೂರಿನ ಬಿಕ್ಕಿಮರಡಿ ದುುರ್ಗಮ್ಮದೇವಿಯ ರಥೋತ್ಸವದ್ದಾಗಿದ್ದು ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ದಂಡು ದಂಡಾಗಿ ಮಧ್ಯಾಹ್ನದಿಂದಲೇ ಇಲ್ಲಿನ ಕೆರೆಯ ದಂಡೆಯ ಮೇಲಿರುವ ದೇವಿಯ ಗುಡಿಯ ಬಳಿ ಜಮಾಯಿಸತೊಡಗಿದರು.
ಈ ಪೈಕಿ ಹೊಸದಾಗಿ ಮದುವೆಯಾದ ದಂಪತಿಗಳ ಸಂಖ್ಯೆ ಹೆಚ್ಚಕ್ಕಿತ್ತು.
ರಥೋತ್ಸವಕ್ಕೂ ಮೊದಲು ಗುಡಿಯಿಂದ ದುರ್ಗಮ್ಮದೇವಿಯ
ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯೋಂದಿಗೆ ರಥದ ಬಳಿ ತರಲಾಯಿತು.
ರಥದ ಸುತ್ತಲೂ ಮೂರು ಸುತ್ತು ಪಲ್ಲಕ್ಕಿ ಮೆರವಣಿಗೆ ಪ್ರದಕ್ಷಿಣೆ ನಡೆಯಿತು.ನಂತರ ದೇವಿಯನ್ನು ಪಲ್ಲಕ್ಕಿಯಿಂದ ರಥದಲ್ಲಿ ಕೂರಿಸಲಾಯಿತು.ನಂತರ ದೇವಿಯ ಪಟಾಕ್ಷಿ ಹರಾಜು ಕೂಗೊ ಪ್ರಕ್ರಿಯೆ ನಡೆಯಿತು.
ಕೊಟ್ಟೂರಿನ ಸುಂಕದಕಲ್ಲು ಮೂಗಣ್ಣ ಎಂಬ ಭಕ್ತ 35101 ರೂಗೆ ಕೂಗಿ ತನ್ನದಾಗಿಸಿಕೊಂಡ. ಈ ಪ್ರಕ್ರಿಯೆ ಮುಗಿಯುತ್ತಿಂದತೆಯೇ. ಭಕ್ತರು ಜೀವಂತ ಕೋಳಿಗಳನ್ನು ತೂರಿದರು. ಕೋಳಿಗಳನ್ನು ತೊರುತ್ತಿದ್ದಂತೆ ರಾಶಿಯೋಪಾದಿಯಲ್ಲಿ ಬಾಳೆಹಣ್ಣುಗಳನ್ನು ಮತ್ತಷ್ಟು ಬಗೆಯ ಭಕ್ತರು ತೂರಿ ಭಕ್ತಿ ಸರ್ಮಪಿಸಿದರು.
ರಥೋತ್ಸವ ಸುಮಾರು 3೦೦ ಮೀಟರ್ ದೂರವಿರುವ ಆಂಜನೇಯ ದೇವಸ್ಥಾನದ ಬಳಿ ಸಾಗಿ ವಾಪಸ್ ಮರಳಿ ಬಂದು ದುರ್ಗಮ್ಮದೇವಿ ಗುಡಿಯ ಮುಂಭಾಗದ ಬಳಿ ನಿಲುಗಡೆಗೊಳ್ಳುತ್ತಿದ್ದಂತೆ ಮತ್ತೆ ಮಳೆಯ ಆರ್ಭಟ ಹೆಚ್ಚಾದ ಕಾರಣ ಭಕ್ತರು ಜಾತ್ರೆಯ ಮಂಡಕಿ, ಮಿರ್ಚಿ ಸವಿಯದೆ ಮನೆ ಕಡೆ ಮುಖಮಾಡಿದರು
ವರದಿ: ಶಿವರಾಜ್ ಕನ್ನಡಿಗ