ಬಳ್ಳಾರಿ,ಮೇ 20: ಬಳ್ಳಾರಿಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಿಂದ ವರ್ಗಾವಣೆಗೊಂಡಿರುವ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸದಾನಂದ.ಎಂ ದೊಡ್ಡಮನಿ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರಾಜೇಶ್ ಕರ್ಣಂ ಅವರಿಗೆ ಬಳ್ಳಾರಿ ವಕೀಲರ ಸಂಘದಿಂದ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರದಂದು ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸದಾನಂದ.ಎಂ ದೊಡ್ಡಮನಿ ಅವರು ಮಾತನಾಡಿ, ವಕೀಲರ ಸಂಘದಲ್ಲಿ ಉತ್ತಮ ಕಾನೂನು ಪಾಂಡಿತ್ಯ ಹಾಗೂ ವೃತ್ತಿಪರತೆಯನ್ನು ಹೊಂದಿದ್ದಾರೆ ತಾವು ಅತ್ಯುತ್ತಮವಾಗಿ ನ್ಯಾಯ ವಿತರಣೆ ಮಾಡುವುದಕ್ಕೆ ವಕೀಲರು ಒಳ್ಳೆಯ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಸಮಾಜದಲ್ಲಿ ನ್ಯಾಯಾಂಗದ ಬಗ್ಗೆ ಅತ್ಯಂತ ಗೌರವನ್ನು ಹೊಂದಿದ್ದು ಅದಕ್ಕೆ ಧಕ್ಕೆಬಾರದ ದಿಕ್ಕಿನಲ್ಲಿ ಸಾಗಬೇಕಾದರೆ, ನ್ಯಾಯಾಧೀಶರು ಹಾಗೂ ವಕೀಲರು ಪರಸ್ಪರ ಸಹಕಾರ ಹಾಗೂ ಬಾಂಧವ್ಯವನ್ನು ಹೊಂದಿದ್ದಲ್ಲಿ ಮಾತ್ರ ಶೀಘ್ರ ನ್ಯಾಯ ಹಾಗೂ ಪರಿಣಾಮಕಾರಿ ತೀರ್ಪುಗಳನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಿರಿಯ ವಕೀಲರು ಸತತ ಅಧ್ಯಯನಶೀಲರಾಗಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಲ್ಲಿ ಸಂಪೂರ್ಣ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಕರ್ಣಂ ರವರು ಮಾತನಾಡಿ, ತಾವು ಉತ್ತಮವಾಗಿ ಕೆಲಸ ಮಾಡುವುದಕ್ಕೆ ವಕೀಲರು ಉತ್ತಮ ಸಹಕಾರ ನೀಡಿದ್ದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್ ಪುμÁ್ಪಂಜಲಿ ದೇವಿ, ವಕೀಲರ ಸಂಘದ ಅಧ್ಯಕ್ಷರಾದ ಕೆ.ಎರ್ರಿಗೌಡ, ಸಂಘದ ಉಪಾಧ್ಯಕ್ಷರಾದ ಎಂ.ನಾಗರಾಜ್ ನಾಯಕ, ಕಾರ್ಯದರ್ಶಿ ರವೀಂದ್ರನಾಥ್ ಸೇರಿದಂತೆ ಬಳ್ಳಾರಿಯ ಎಲ್ಲಾ ನ್ಯಾಯಾಧೀಶರುಗಳು ಹಾಗೂ ವಕೀಲರು ಭಾಗವಹಿಸಿದ್ದರು.