ಪ್ರಾಧ್ಯಾಪಕರೂ ಮತ್ತು ಸಾಹಿತಿಗಳಾಗಿ ಹೆಸರಾದ ವಾಮನ ದತ್ತಾತ್ರೇಯ ಬೇಂದ್ರೆ ರವರ ಹುಟ್ಟು ಹಬ್ಬ

0
333

ವಾಮನ ದತ್ತಾತ್ರೇಯ ಬೇಂದ್ರೆ ಅವರು ಪ್ರಾಧ್ಯಾಪಕರೂ ಮತ್ತು ಸಾಹಿತಿಗಳಾಗಿ ಹೆಸರಾದವರು. ವಾಮನ ಬೇಂದ್ರೆಯವರು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ 1935ರ ಜುಲೈ 28ರಂದು ಜನಿಸಿದರು. ತಂದೆ ವರಕವಿ ದ.ರಾ.ಬೇಂದ್ರೆ. ತಾಯಿ ಲಕ್ಷ್ಮೀಬಾಯಿ.
ವಾಮನ ದತ್ತಾತ್ರೇಯ ಬೇಂದ್ರೆ ಅವರ ಪ್ರಾರಂಭಿಕ ಶಿಕ್ಷಣ ಗದಗದಲ್ಲಿ ನೆರವೇರಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿ ಪಡೆದ ಅವರು ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ – ಒಂದು ಅಧ್ಯಯನ ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು.
ವಾಮನ ಬೇಂದ್ರೆಯವರು ಉದ್ಯೋಗ ಪ್ರಾರಂಭಿಸಿದ್ದು ಸಾಂಗ್ಲಿಯ ವೆಲ್ಲಿಂಗ್‌ಡನ್ ಕಾಲೇಜಿನಲ್ಲಿ. ನಂತರ ವಿದ್ಯಾರಣ್ಯ ಕಿರಿಯ ಕಾಲೇಜ್ ಧಾರವಾಡದಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜ್ ಧಾರವಾಡದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು.
ವಾಮನ ಬೇಂದ್ರೆಯವರಿಗೆ ಸಾಹಿತ್ಯ ರಚನೆ ತಂದೆಯಿಂದ ಬಂದ ಬಳುವಳಿ. ಶಾಲೆಯಲ್ಲಿದ್ದಾಗಲೇ ಅವರ ಬರವಣಿಗೆ ಪ್ರಾರಂಭಗೊಂಡಿತು. ಇಂಟರ್ ಮೀಡಿಯೆಟ್ ಓದುತ್ತಿದ್ದಾಗಲೇ ಪ್ರಬಂಧ, ನಾಟಕ ರಚನೆಯಲ್ಲಿ ಸಮರ್ಥರಾಗಿದ್ದ ಅವರು, ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿಭಾಷೆಗಳ ಮೇಲಣ ಪ್ರಭುತ್ವ ಸಾಧಿಸಿದ್ದರಲ್ಲದೆ, ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹಾ ತಮ್ಮ ಹವ್ಯಾಸವಾಗಿರಿಸಿಕೊಂಡಿದ್ದರು.
ವಾಮನ ಬೇಂದ್ರೆಯವರ ಮೊದಲ ಕವನ ಮೊದಲ ತೊದಲು. ನಂತರ ಅನಂತಧಾರೆ, ಸ್ಪಂದನ ಪ್ರಕಟಗೊಂಡವು. ಸೊಂಡಿಲ ಗಣಪ್ಪ ಬಂದ, ಸ್ಪರ್ಶ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ ಮಾಡಿದರು. ಕುಶಲಕವಿ ಲಕ್ಷ್ಮೀಶ, ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಲಕ್ಷ್ಮೀಶ: ಒಂದು ಅಧ್ಯಯನ, ಬೇಂದ್ರೆ ಕಾವ್ಯಲೋಕ, ಬೇಂದ್ರೆ ಬೆಳಕು, ಕವಿಚೂತವನ ಚೈತ್ರ ಲಕ್ಷ್ಮೀಶ, ದ.ರಾ.ಬೇಂದ್ರೆ ಜೀವನ ಪರಿಚಯ ಮುಂತಾದವು ವಾಮನ ಬೇಂದ್ರೆಯವರ ಹಲವು ಕಥನಗಳು. ಇದಲ್ಲದೆ ಕುಣಿಯೋಣ ಬಾರ, ಅಂಬಿಕಾತನಯ ಹಾಡs ಬೆಳದಿಂಗಳ ನೋಡs, ನೋಡ್ಯಾನs ದಶಾವತಾರ, ಅಂಬಿಕಾತನಯ ಹಾಡ್ಯಾನs, ಕನ್ನಡಕ್ಕೆ ಕಿಟೆಲ್ ಕೊಡುಗೆ, ನಾಳಿನ ಕನಸು, ಚೈತನ್ಯದ ಪೂಜೆ, ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ತ್ವ, ಸಿದ್ಧಾಂತ, ಬೇಂದ್ರೆ ಋತುದರ್ಶನ, ಬೇಂದ್ರೆ ಸಮಗ್ರ ಕಾವ್ಯ ಸಂಪುಟ, ಬೇಂದ್ರೆಯವರ ಜೀವನ ಮಹಾಕಾವ್ಯ ‘ಔದುಂಬರ ಗಾಥೆ’ ಮುಂತಾದ ಕೃತಿಗಳನ್ನು ವಾಮನ ಬೇಂದ್ರೆಯವರು ಸಂಪಾದಿಸಿದರು. ಅವರ ಭಾಷಾಂತರಗಳೆಂದರೆ ಗುರುಗೋವಿಂದ ಸಿಂಗ, ಭಾರತೀಯ ಸಾಹಿತ್ಯ ಸಂಕಲನ, ಕಾಲಾಯ ತಸ್ಮೈನಮಃ, ಜಾನಪದ ಸಾಹಿತ್ಯ, ಸಮರ್ಥ ರಾಮದಾಸ ಹಾಗೂ ಸ್ವಾಮಿ ವಿವೇಕಾನಂದ ಮುಂತಾದವು. ಇದಲ್ಲದೆ ಅವರು ಬೇಂದ್ರೆಯವರ ಕವನಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾಮನ ಬೇಂದ್ರೆಯವರಿಗೆ ಸಂದಿದ್ದವು.


ವಾಮನ ಬೇಂದ್ರೆಯವರ ‘ಅನಂತಧಾರೆ’ ಕವನ ಸಂಕಲನಕ್ಕೆ ಮುನ್ನುಡಿಯಲ್ಲಿ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಹೀಗೆ ಗುರುತಿಸುತ್ತಾರೆ: ಸಾಧನಕೇರಿಯ ‘ಶ್ರೀಮಾತಾ’ದಲ್ಲಿ ದ ರಾ ಬೇಂದ್ರೆಯವರು ಈಗ ಇಲ್ಲ; ಈಗ ಅವರು ‘ಸಾವಿರದ ಮನೆಗಳಲ್ಲಿ’ ಮನೆ ಮಾಡಿಕೊಂಡಿದ್ದಾರೆ. ಆದರೂ ಧಾರವಾಡದ ಮನೆ ಅವರ ಕರ್ಮಕ್ಷೇತ್ರವೇ. ಈ ‘ಅನಂತಧಾರೆ’ ಕವನ ಸಂಕಲನದ ಕವಿತೆಯೊಂದರಲ್ಲಿ ವಾಮನರು ಹೇಳುತ್ತಾರೆ –
ಬರ್ರಿ ಬರ್ರಿ ನೀವು ಒಳಗೆ ಬನ್ನಿರಿ
ಬೇಂದ್ರೆ ಇನ್ನಿಲ್ಲಾ ಅನ್ನಬ್ಯಾಡರಿ
ಬಟ್ಟಲ ಸಕ್ಕರ್ಯಾಗಿ ಸಿಹಿ ಹಂಚತಾನ
ಮನಸ್ಸಿದ್ದರೆ ಕೈ ಹಾಕರಿ.”
ದ. ರಾ. ಬೇಂದ್ರೆ ಮತ್ತು ವಾಮನ ಬೇಂದ್ರೆ ಇಬ್ಬರೂ ಈಗಿಲ್ಲ. ವಾಮನ ಬೇಂದ್ರೆ ಅವರು 2016ರ ಸೆಪ್ಟಂಬರ್ 28ರಂದು ಈಲೋಕವನ್ನಗಲಿದರು. ಅವರು ಹಂಚಿದ ಸಿಹಿಯ ಸವಿಯನ್ನರತವರಿಗೆ ಅವರ ನೆನಪು ಸದಾ ಜೀವಂತ.

ಕೃಪೆ:- ಕನ್ನಡ ಸಂಪದ

LEAVE A REPLY

Please enter your comment!
Please enter your name here