ಬಳ್ಳಾರಿ,ಮೇ 25: ಪ್ರತಿಯೊಬ್ಬರೂ ಪರಿಸರದಲ್ಲಿ ಬದುಕುತ್ತೇವೆ ಮತ್ತು ಪರಿಸರದೊಂದಿಗೆ ವಾಸಿಸುತ್ತೇವೆ. ಆದ್ದರಿಂದ ಪರಿಸರದ ಕಾಳಜಿಯು ನಮಗೆ ಅವಶ್ಯವಾಗಿದ್ದು, ಇಂತಹ ಪರಿಸರ ಸಂರಕ್ಷಣೆಯಲ್ಲಿ ಸಾಂಪ್ರದಾಯಿಕ ಬುದ್ದಿವಂತಿಕೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಸಿದ್ದು ಪಿ ಆಲಗೂರ ಅವರು ಹೇಳಿದರು.
ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ವತಿಯಿಂದ ಬುಧವಾರದಂದು ಆಯೋಜಿಸಿದ್ದ ‘ಭಾರತೀಯ ಸಂಪ್ರದಾಯದಲ್ಲಿ ಪರಿಸರ ಮತ್ತು ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಿಕ ಬುದ್ಧಿವಂತಿಕೆ’ ಎಂಬ ವಿಚಾರ ಸಂಕೀರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯು ನೀರಿನ ಮಹತ್ವವನ್ನು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀರಿಗಾಗಿ ಮೂರನೇ ಮಹಾಯುದ್ಧ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಹಾಗೂ ನಮ್ಮ ಪೂರ್ವಜರು ನೀರನ್ನು ಸಂರಕ್ಷಿಸಿ, ನಿರ್ವಹಿಸಿ ಹಾಗೂ ಸದ್ಬಳಕೆ ಮಾಡುತ್ತಿದ್ದರು. ಇಂತಹ ಪರಿಸರ ಸಂರಕ್ಷಣೆಯ ಸಾಂಪ್ರದಾಯಿಕ ಕಾರ್ಯಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಹಣ ಬಲದಿಂದ ಏನನ್ನಾದರೂ ಕೊಂಡುಕೊಳ್ಳಬಹುದಾದ ವಾತಾವರಣ ನಿರ್ಮಾಣವಾಗಿದೆ. ಆದರೆ ನಮ್ಮ ಸಂಸ್ಕøತಿ, ಸಂಪ್ರದಾಯ, ಬಂಧು-ಬಳಗವನ್ನು ಕೊಂಡುಕೊಳ್ಳಲು ಅಸಾಧ್ಯ ಎಂದರು. ಈ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯ ಆವರಣದಲ್ಲಿ ದೀನದಯಾಳ್ ಸಂಶೋಧನಾ ಸಂಸ್ಥೆಯವತಿಯಿಂದ ರಾಷ್ಟ್ರೀಯ ವಿಚಾರ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ದೀನದಯಾಳ್ ಸಂಶೋಧನಾ ಸಂಸ್ಥೆ ನ್ಯೂ ದೆಹಲಿಯ ಪ್ರಧಾನ ಕಾರ್ಯದರ್ಶಿ ಅತುಲ್ ಜೈನ್ ಅವರು ಮಾತನಾಡಿ, ಮನುಷ್ಯ ಬದುಕಲು ಅನಿವಾರ್ಯವಾಗಿರುವ ಮೂಲ ಅವಶ್ಯಕಗಳು ಸಿಗುವುದೇ ಪರಿಸರದಿಂದ. ಹೀಗಾಗಿ ಸುಸ್ಥಿರ ಬದುಕಿಗೆ ಪರಿಸರದ ಸಂರಕ್ಷಣೆಗೆ ವೈಯಕ್ತಿಕವಾಗಿ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ವಿಜಯಕುಮಾರ್ ಡಿ ಕುಚನುರೆ, ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಶಂಕರಗೌಡ ಸಿ.ಪಾಟೀಲ್, ಕುಲಸಚಿವರು(ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಡಾ. ಕೆ.ಸಿ ಪ್ರಶಾಂತ್, ಐಕ್ಯೂಎಸಿ ನಿರ್ದೇಶಕರಾದ ಪ್ರೊ.ತಿಪ್ಪೇರುದ್ರಪ್ಪ.ಜೆ, ಡಾ.ನಿರ್ಮಲ, ಡಾ.ಅರ್ಚನಾ, ಡಾ.ಅರುಣಕುಮಾರ್, ಡಾ.ರವಿ ನಾರಾಯಣ್, ಡಾ.ಐಕ್ಯೂಎಸಿ ನಿರ್ದೇಶಕರಾದ ಪ್ರೊ.ತಿಪ್ಪೇರುದ್ರಪ್ಪ.ಜೆ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.