ಜಗಳೂರು ತಾಲ್ಲೂಕು ಜನಸ್ಪಂದನ ಸಭೆ ಶೀಘ್ರದಲ್ಲಿ ಜಗಳೂರಿನ 57 ಕೆರೆಗಳಿಗೆ ನೀರು : ಜಿಲ್ಲಾ ಉಸ್ತುವಾರಿ ಸಚಿವರು

0
149

ದಾವಣಗೆರೆ ಜ. 27 : ಜಗಳೂರಿನ 57 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೇ ತಿಂಗಳುಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡು ಜಗಳೂರು ಬರ ಮುಕ್ತವಾಗಲಿದೆ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹೇಳಿದರು.
ಬುಧವಾರ ಜಗಳೂರಿನ ಗುರುಭವನ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಸುಮಾರು ರೂ.650 ಕೋಟಿಗಳ ವೆಚ್ಚದಲ್ಲಿ ತಾಲ್ಲೂಕಿನ 57 ಕೆರೆಗಳಿಗೆ ನೀರು ಬರಲಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬಲಿವೆ ಎಂದರು.
ಮಾನ್ಯ ಮುಖ್ಯಮಂತ್ರಿಗಳು ಕೋವಿಡ್ ಸಂದರ್ಭದಲ್ಲಿಯೂ ಅಭಿವೃದ್ದಿ ಕಡೆಗಣಿಸದೇ ಆರ್ಥಿಕ ಸಂಕಷ್ಟದ ನಡುವೆಯೂ ಜಗಳೂರು ತಾಲ್ಲೂಕಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜಗಳೂರು ತಾಲ್ಲೂಕು ಹಿಂದಿನಿಂದ ಬರಪೀಡಿತ ತಾಲ್ಲೂಕು ಎಂದು ಹೆಸರಾಗಿದೆ. ಆ ಹೆಸರನ್ನು ಸದ್ಯದಲ್ಲಿಯೇ ತೊಡೆದುಹಾಕಿ ಕೆರೆಗಳನ್ನು ತುಂಬಿಸಿ ಬರಪೀಡಿತ ಎಂಬ ಹಣೆಪಟ್ಟಿಯನ್ನು ಅಳಿಸಲು ಶ್ರಮಿಸುತ್ತಿರುವ ಶಾಸಕರಿಗೆ ನಾವೆಲ್ಲರೂ ಒತ್ತಾಸೆಯಾಗಿ ನಿಂತು ಕಾರ್ಯಗತಗೊಳಿಸೋಣ ಎಂದ ಅವರು ಜಗಳೂರಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ ಘಟಕ ನಿರ್ಮಾಣಕ್ಕಾಗಿ ಸುಮಾರು 4.31 ಎಕರೆ ಜಮೀನನ್ನು ಕೆಎಸ್‍ಆರ್‍ಟಿಸಿ ಗೆ ಹಸ್ತಾಂತರಿಸಲಾಗಿದೆ ಎಂದರು.
ನಮ್ಮ ಸುದೈವವೆಂದರೆ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಇದರೊಂದಿಗೆ ಕೆರೆಗಳನ್ನು ತುಂಬಿಸುವುದರಿಂದ ಜಗಳೂರಿನ ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಲಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಗಳೂರು ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಜಗಳೂರು ಶಾಸಕರು ಸತತ ಪರಿಶ್ರಮಪಟ್ಟು ಇಂದು 57 ಕೆರೆಗಳಿಗೆ ನೀರನ್ನು ತಂದು ತಾಲ್ಲೂಕಿನ ಅಭಿವೃದ್ದಿಯ ಹರಿಕಾರ ಎನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಪ್ಪರ್ ಭದ್ರಾ ಯೋಜನೆಯಲ್ಲಿ ತಾಲ್ಲೂಕಿನ 45000 ಎಕರೆಗೆ ನೀರನ್ನು ಹರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ನಂತರ ಬಂದ ಸರ್ಕಾgದಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಬಿಜೆಪಿ ಸರ್ಕಾರವು ಈ ಯೋಜನೆಯನ್ನು ಮುಂದುವರೆಸಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ನೀರಾವರಿ ಯೋಜನೆಯಲ್ಲಿ ರೂ. 16500 ಕೋಟಿ ಅನುದಾನವಿದ್ದು ಅದರಲ್ಲಿ ಜಗಳೂರಿಗೆ ರೂ.1200 ಕೋಟಿಯನ್ನು ನೀಡಲಾಗಿದೆ. ಈ ಯೋಜನೆಯು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು ಇಲ್ಲಿನ ಜನತೆ ಆರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದರು.
ಕೋವಿಡ್-19 ರ ಸಮಯದಲ್ಲೂ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಸಕರು ಜಿಲ್ಲೆಯಲ್ಲೇ ಅತಿ ಹೆಚ್ಚು ಅನುದಾನ ತಂದಿದ್ದು ಕೇವಲ 2 ವರ್ಷದಲ್ಲಿ ಜಗಳೂರಿಗೆ ಸುಮಾರು ರೂ.3000 ಕೋಟಿ ಹಣವನ್ನು ತರಲು ಪ್ರಯತ್ನ ನಡೆಸಿದ್ದಾರೆ ಎಂದರು.
ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ತಂದಿವೆ. ಆದರೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಪಲಾನುಭವಿಗಳು ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದ್ದು, ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮೊದಲ ಹಂತದಲ್ಲಿ 22 ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆಗೆ ಕಾಮಗಾರಿ ಸಾಗುತ್ತಿದ್ದು ಇನ್ನು ಒಂದು ವರ್ಷದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮದ ಮನೆ ಮನೆಗಳಿಗೆ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದರು.
ಕೇಂದ್ರ ಸರ್ಕಾರವು ಕೋವಿಡ್ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದು ಪ್ರಥಮ ಹಂತದಲ್ಲಿ 3 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಜನರಿಗೂ ಲಸಿಕೆ ನೀಡಲಾಗುತ್ತದೆ. ನಮ್ಮ ದೇಶದ ಲಸಿಕೆಗೆ ವಿದೇಶದಲ್ಲಿ ಬೇಡಿಕೆ ಇದ್ದು ನಮ್ಮ ವಿರೋಧ ಪಕ್ಷಗಳು ಇದು ಬಿಜೆಪಿ ಲಸಿಕೆ ಎಂದು ಟೀಕೆ ಮಾಡುತ್ತಿವೆ. ಜನರ ಪ್ರಾಣ ರಕ್ಷಣೆ ಮಾಡುವ ಲಸಿಕೆ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ರಾಜಕೀಯ ಮಾಡುತ್ತಿವೆ ಎಂದರು.
ಮೋದಿಯವರು ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿವರ್ಷ ರೂ.6000 ಗÀಳನ್ನು ನೀಡುತ್ತಿದ್ದಾರೆ ಮುಂದಿನ ಹಂತದಲ್ಲಿ ಈ ಹಣವನ್ನು ರೂ.10,000 ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಮೋದಿಯವರು ಸಾಮಾನ್ಯ ಪ್ರಜೆಯಾಗಿ ಬೆಳೆದು ಇಂದು ಪ್ರಪಂಚಕ್ಕೆ ಬೇಕಾದ ವ್ಯಕಿಯಾಗಿದ್ದಾರೆ. ಇಂದು ಜನರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಮರ್ಪಕವಾಗಿ ಸಿಗಲು ಕಾರಣ ಮೋದಿಜಿಯವರಾಗಿದ್ದು, ನಿಷ್ಕಳಂಕ ವ್ಯಕ್ತಿಗೆ ಕಳಂಕ ತರುವ ಕೆಲಸ ಮಾಡುವುದು ಸಲ್ಲದು ಎಂದು ರೈತರ ಪ್ರತಿಭಟನೆ ಕುರಿತು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಕರೋನದ ಸಂದರ್ಭದಲ್ಲಿ ಮೆಕ್ಕಜೋಳ ಬೆಳೆಗಾರರಿಗೆ, ನೇಕಾರರು, ಆಟೋ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಅಕ್ಕಸಾಲಿಗರಿಗೆ, ಕ್ಷೌರಿಕರಿಗೆ ಹಾಗೂ ಇತರೆ ಕಾರ್ಮಿಕರಿಗೆ ತಲಾ ರೂ.5000 ಗಳನ್ನು ಪ್ರೋತ್ಸಹ ಧನವನ್ನಾಗಿ ನೀಡಿದ್ದಾರೆ. ಹಾಗಾಗಿ ಈ ಸರ್ಕಾರ ರೈತರ, ಬಡವರ ಭವಿಷ್ಯಕ್ಕಾಗಿ ಹಿಂದುಳಿದವರ ಪರವಾಗಿರುವ ಸರ್ಕಾರ ಇಂತಹ ಕೆಲವರು ಸರ್ಕಾರಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ, ಜನರು ಸುಳ್ಳುಸುದ್ದಿಗೆ ಕಿವಿಗೊಡದೆ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದರು.
ಜಗಳೂರು ಶಾಸಕರು ಹಾಗೂ ವಾಲ್ಮೀಕಿ ಪರಿಶಿಷ್ಟ ಪಂಗಡÀ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರ ಮಾತನಾಡಿ, ಜೂನ್ ತಿಂಗಳಲ್ಲಿ 17, ಆಗಸ್ಟ್ ಮತ್ತು ನವೆಂಬರ್‍ನಲ್ಲಿ ತಲಾ 20 ಕೆರೆಗಳಿಗೆ ನೀರು ಬರಲಿದ್ದು, ತಾಲ್ಲೂಕಿನ ಜನರ ನೀರಿನ ಬವಣೆ ನೀಗಲಿದೆ. ತಾಲ್ಲೂಕು ಸರ್ವತೋಮುಖ ಅಭಿವೃದ್ದಿ ಕಾಣುತ್ತಿದ್ದು, ವಾಲ್ಮೀಕಿ ಭವನ, ನೌಕರರ ಭವನಗಳು ಅಭಿವೃದ್ದಿಯಾಗುತ್ತಿವೆ. ತಾಲ್ಲೂಕಿನ ಮತ್ತಷ್ಟು ಅಭಿವೃದ್ದಿಯ ಹಿತದೃಷ್ಟಿಯಿಂದ ತಿಂಗಳಲ್ಲಿ ಎರಡು ಕಡೆ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಿ ತಾಲ್ಲೂಕು ಆಡಳಿತವೇ ಪ್ರತಿ ಸಾರ್ವಜನಿಕರ ಮನೆ ಬಾಗಿಲಿಗೆ ಹೋಗಿ ಅವರ ಕುಂದು ಕೊರತೆಗಳನ್ನು ನಿವಾರಿಸಲಾಗುವುದು ಎಂದರು.
ಒಂದು ಸಾವಿರ ಮನೆಗಳ ಮಂಜೂರಾತಿ ಸರ್ಕಾರದ ಹಂತದಲ್ಲಿದ್ದು, ಆದೇಶ ಬಂದ ತಕ್ಷಣ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುವುದು. ಸಮಗ್ರ ನೀರಾವರಿ ಯೋಜನೆಯಡಿ ರೂ. 1200 ಕೋಟಿಯಷ್ಟು ಹಣ ಸಿಗಲಿದ್ದು, ತಾಲ್ಲೂಕು ಪ್ರಗತಿಯ ಪಥದಲ್ಲಿ ಸಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಧ್ಯಾಸುರಕ್ಷಾ, ವೃದ್ದಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ, ಮೈತ್ರಿ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಜಿ.ಪಂ ಸದಸ್ಯರಾದ ಎಸ್.ಕೆ.ಮಂಜುನಾಥ, ಉಮಾ, ಪ.ಪಂ ಅಧ್ಯಕ್ಷರಾದ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಮುದೇಗೌಡ್ರ ಬಸವರಾಜಪ್ಪ, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪ್ರಭಾರ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ರಾಜೀವ್, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಡಾ.ನಾಗವೇಣಿ, ಇಓ ಮಲ್ಲಾನಾಯ್ಕ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here