32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಸಮಾರೋಪ,ಈ ವರ್ಷ ಶೇ.20 ರಷ್ಟು ಅಪಘಾತಗಳನ್ನು ತಡೆಯುವ ಉದ್ದೇಶವಿದೆ: ಎಎಸ್ಪಿ ಬಿ.ಎನ್.ಲಾವಣ್ಯ

0
99

ಬಳ್ಳಾರಿ,ಫೆ.17 ; ಪ್ರತಿ ವರ್ಷ ಭಾರತದಲ್ಲಿ 1.5 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಕರ್ನಾಟದಲ್ಲಿ 10 ಸಾವಿರ ಜನ ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ 345 ಅಪಘಾತಗಳು ನಡೆದಿವೆ. 2019 ರಲ್ಲಿ ಬಳ್ಳಾರಿಯಲ್ಲಿ 318 ಜನ ಸಾವನ್ನಪ್ಪಿದ್ದಾರೆ. ಅಪಘಾತಗಳನ್ನು ಪೂರ್ಣ ಪ್ರಮಾಣದಲ್ಲಿ ಕಡಿಮೆ ಮಾಡಲು ಆಗದಿದ್ದರು, ಪ್ರಸಕ್ತ ವರ್ಷದಲ್ಲಿ ಶೆ.20 ರಷ್ಟನ್ನಾದರೂ ಕಡಿಮೆ ಮಾಡಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್.ಲಾವಣ್ಯ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಪೊಲೀಸ್, ಸಂಚಾರಿ ಪೊಲೀಸ್ ಠಾಣೆ, ಇವರ ಸಹಯೋಗದಲ್ಲಿ ನಗರದ ಸೆಂಟನರಿ ಹಾಲ್ ನಲ್ಲಿ ಬುಧವಾರ ಸಂಜೆ ನಡೆದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವು ಯಶಸ್ವಿಯಾಗಿದೆ. ಜಿಲ್ಲೆಯಾದ್ಯಂತ ಸಂಚಾರಿ ಪೊಲೀಸ್ ರಿಂದ ಜನಕ್ಕೆ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಿದೆ. ಸಂಚಾರಿ ಪೊಲೀಸರು ಸಿಗ್ನಲ್ ಸರಿಯಾದ ರೀತಿಯಲ್ಲಿ ಫಾಲೋ ಮಾಡಿ, ತಪ್ಪದೇ ಯೂನಿಫಾರ್ಮ ಧರಿಸಿ,ಆಟೋ ಚಾಲಕರು ವೇಗವನ್ನು ಮೀರಿ ಆಟೋ ಚಲಾಯಿಸಬೇಡಿ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳ ಜನ ಹೆಲ್ಮೆಟ್ ಹಾಕುವುದನ್ನು ನಿರ್ಲಕ್ಷಿಸುತ್ತಿದ್ದಾರೆ. ಅವರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಪ್ಪದೆ ಸಂಚಾರಿ ನಿಯಮವನ್ನು ಪಾಲಿಸಿ. ಯಾರದರೂ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಾಗ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಚಾರಿ ಠಾಣೆಯ ಸಿ.ಪಿ.ಐ ನಾಗರಾಜ್ ಎಂ. ಅವರು ಮಾತನಾಡಿ, 2018 ರಲ್ಲಿ 35 ಸಾವಿರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 47 ಲಕ್ಷ ದಂಡ ವಿಧಿಸಲಾಗಿದೆ. 2019 ರಲ್ಲಿ 35 ಜನ ಸಾವನ್ನಪ್ಪಿದ್ದಾರೆ. 49 ಸಾವಿರ ಸಂಚಾರಿ ಪ್ರಕರಣಗಳಲ್ಲಿ 1.5 ಕೋಟಿ ದಂಡ ವಿಧಿಸಲಾಗಿದೆ. 2020 ರಲ್ಲಿ 25 ಜನರು ಸಾವನ್ನಪ್ಪಿದ್ದು 34 ಸಾವಿರ ಪ್ರಕರಣಗಳಲ್ಲಿ 1.65 ಕೋಟಿ ದಂಡ ವಿಧಿಸಿ ಸರ್ಕಾರಕ್ಕೆ ಜಮೆ ಮಾಡಲಾಗಿದೆ.
ಜ.18 ರಿಂದ ಪ್ರಾರಂಭವಾದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಒಂದು ತಿಂಗಳ ಅವಧಿಯಲ್ಲಿ 40 ಶಾಲಾ ಕಾಲೇಜುಗಳಲ್ಲಿ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಬೈಕ್ ಜಾಥಾ ಮೂಲಕ ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ ಅರಿವು ಮೂಡಿಸಲಾಗಿದೆ. ಅಪಘಾತಗಳಲ್ಲಿ ಪ್ರಾಣಗಳನ್ನು ಕಳೆದುಕೊಂಡರೆ ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ ಮಾಡಲಾಗುತ್ತದೆ. ಜಾಗೃತಿ ಮೂಡಿಸುವ ಕಾರ್ಯ ಇಲ್ಲಿಗೆ ನಿಲ್ಲದೆ ನಿರಂತರವಾಗಿ ಸಾಗುತ್ತದೆ ಎಂದರು.
ಸಂಚಾರಿ ಠಾಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ನೆನಪಿನ ಕಾಣೆಕೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಆರ್ ಬಿ ಡಿವೈಎಸ್ಪಿ ಮಹೇಶ್ವರ ಗೌಡ, ಮಹಿಳಾ ಘಟಕದ ಸಿಪಿಐ ವಾಸು, ಕೌಲ್ ಬಜಾರ್ ಠಾಣೆ ಸಿಪಿಐ ಸುಭಾಷ್ ಚಂದ್ರ, ಆಟೋ ಸಂಘದ ಅಧ್ಯಕ್ಷರಾದ ತಾಯಪ್ಪ, ಆಟೋ ಚಾಲಕರು, ಪದಾದಿಕಾರಿಗಳು, ಸನ್ಮಾರ್ಗ ಗೆಳೆಯರ ಬಳಗದ ಪದಾದಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here