ಬಳ್ಳಾರಿ,ಫೆ.20; ಬಳ್ಳಾರಿ ಮಹಾನಗರ ಪಾಲಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ನಗರದ ವಿವಿಧ ಸಂಘ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನ ನಿಮಿತ್ತ ಸ್ವಚ್ಛತೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ “ಸೈಕಲ್ ಜಾಥಾ”ಗೆ ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಶನಿವಾರ ಬೆಳಗ್ಗೆ ಚಾಲನೆ ನೀಡಿದರು.
ಜಾಥಾಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿ, ನಗರವನ್ನು ಒಂದು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ರೂಪುಗೊಳಿಸುವ ಉದ್ದೇಶದಿಂದ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಾಥಾದಲ್ಲಿ ವಿವಿಧ ಶಾಲೆಗಳಿಂದ ಸುಮಾರು 100 ಮಕ್ಕಳು, ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಅನೇಕ ಜನರು ಪಾಲ್ಗೊಂಡಿದ್ದರು.
ಜಾಥಾವು ದುರುಗಮ್ಮ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್.ಪಿ.ವೃತ್ತ, ಫೈರ್ ಆಫೀಸ್ ಸರ್ಕಲ್, ಇಂದಿರಾ ನಗರದಿಂದ ಓ.ಪಿ.ಡಿ ವೃತ್ತ ಮತ್ತು ಸುಧಾ ಕ್ರಾಸ್ನಲ್ಲಿ ಇರುವ ಮಹಾತ್ಮ ಗಾಂಧಿ ಸ್ಮಾರಕದವರೆಗೆ ಸಾಗಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳಾದ ಡಾ.ಹನುಮಂತಪ್ಪ, ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರಾದ ಶ್ರೀನಿವಾಸ್ ಮತ್ತು ಅವಿನಾಷ್, ಶಾಲೆಯ ಮಕ್ಕಳು ಹಾಗೂ ಶಿಕ್ಷಕರು, ರೆಡ್ ಕ್ರಾಸ್ ಸದಸ್ಯರಾದ ಹರಿಶಂಕರ್ ಅಗರ್ವಾಲ್, ಐಆರ್ಸಿಎಸ್ ನ ಕಾರ್ಯದರ್ಶಿಗಳಾದ ಎಂ.ಎ.ಷಕೀಬ್ ಮಹಾಂತೇಶ್, ದಿವಾಕರ್, ಮಹಬೂಬ್ ಬಾಷಾ, ಎಂ.ವಲಿಬಾಷಾ ಮತ್ತು ಮತ್ತು ಮಂಜುನಾಥ್, ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.