ಬಳ್ಳಾರಿ:ಸೆ:26:- ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಸೆಪ್ಟೆಂಬರ್ 27ರ ಭಾರತ್ ಬಂದ್ ಗೆ ಬೆಂಬಲಿಸಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಮೋದಿ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟಂಬರ್ 27ಕ್ಕೆ ಭಾರತ್ ಬಂದ್ ಗೆ ಕರೆ ನೀಡಿದೆ. ಈ ಭಾರತ್ ಬಂದ್ ಅನ್ನು ಯಶಸ್ವಿಗೊಳಿಸಲು ಜನಗಳನ್ನು ಮನವಿ ಮಾಡಲು ಇಂದು ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪಂಜಿನ ಮೆರವಣಿಗೆಯು ಈಡಿಗ ಹಾಸ್ಟೆಲ್ ನಿಂದ ಪ್ರಾರಂಭವಾಗಿ ಬೆಂಗಳೂರು ರೋಡು, ತೇರು ಬೀದಿ, ಬ್ರಾಹ್ಮಣ ಬೀದಿಯ ಮೂಲಕ ಸಾಗಿ ತಾಲೂಕು ಕಚೇರಿಯಲ್ಲಿ ಕೊನೆಗೊಂಡಿತು. ನೂರಾರು ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡಿದ್ದರು. ಕೃಷಿ ಕಾಯ್ದೆಗಳಲ್ಲದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಖಾಸಗೀಕರಣ ಮುಂತಾದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ನಡೆಯುತ್ತಿರುವ ಭಾರತ್ ಬಂದ್ ಅನ್ನು ಯಶಸ್ವಿಗೊಳಿಸಲು ಜನರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಈ ಮೆರವಣಿಗೆಯಲ್ಲಿ ರೈತ ಕೃಷಿ ಕಾರ್ಮಿಕ ಸಂಘಟನೆಯ ಹನುಮಪ್ಪ, ಗೋವಿಂದ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಾಧವ ರೆಡ್ಡಿ, ಸಂಗನಕಲ್ ಕೃಷ್ಣಪ್ಪ , ಕರ್ನಾಟಕ ಪ್ರಾಂತ ರೈತ ಸಂಘದ ಶಿವಶಂಕರ್, ಚಾಗನೂರು ರೈತ ಹೋರಾಟ ಸಮಿತಿಯ ಮಲ್ಲಿಕಾರ್ಜುನರೆಡ್ಡಿ, ಸಿಐಟಿಯುನ ಶಿವಶಂಕರ್ ಮುಂತಾದವರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.