ಉಸ್ತುವಾರಿ ಸಚಿವರಿಂದ ಜಿಲ್ಲಾಸ್ಪತ್ರೆ ದಿಢೀರ್ ಭೇಟಿ ಸಮರ್ಪಕ ನಿರ್ವಹಣೆ ಮಾಡದ ಅಧಿಕಾರಿಗಳಿಗೆ ಎಚ್ಚರಿಕೆ

0
85

ದಾವಣಗೆರೆ,ಏ.21.ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರು ಬುಧವಾರ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕೋವಿಡ್ ಚಿಕಿತ್ಸೆ ಮತ್ತು ಇತರೆ ನಿರ್ವಹಣೆ ವ್ಯವಸ್ಥೆಯಯನ್ನು ಪರಿಶೀಲಿಸಿದರು.
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೌಂಟರ್ ಬಳಿ ಕೆಲ ರೋಗಿಗಳು ಚಿಕಿತ್ಸೆಗಾಗಿ ಬೆಳಿಗ್ಗೆ 8 ಗಂಟೆಯಿಂದ ಕಾಯುತ್ತಾ ಕುಳಿತಿರುವುದನ್ನು ಕಂಡು ಅವರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಕಾಲಿಗೆ ಪೆಟ್ಟಾದ, ಜಾಂಡಿಸ್ ರೋಗಕ್ಕೆ ತುತ್ತಾದ ಹೀಗೆ ವಿವಿಧ ರೀತಿಯ ಗಂಭೀರ ಸಮಸ್ಯೆವುಳ್ಳ ರೋಗಿಗಳು ಬೆಳಗಿನಿಂದಲೂ ಆಸ್ಪತ್ರೆಯಲ್ಲಿ ಕಾದು ಕುಳಿತರೂ ತಮಗೆ ಸಮರ್ಪಕ ಚಿಕಿತ್ಸೆ ದೊರಕದ ಬಗ್ಗೆ ಸಚಿವರ ಬಳಿ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಜಯಪ್ರಕಾಶ್‍ರವರ ಗಮನಕ್ಕೆ ತಂದು ಈ ರೀತಿ ತುರ್ತು ಮತ್ತು ಗಂಭೀರ ಸಮಸ್ಯೆ ಇರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಕಾಯುವಂತೆ ಮಾಡಬಾರದು. ತಕ್ಷಣವೇ ಚಿಕಿತ್ಸೆ ನೀಡಬೇಕು. ಹಾಗೂ ಈ ರೀತಿ ರೋಗಿಗಳಿಗೆ ಅನುಕೂಲ ಮಾಡದೇ ಇರುವ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸಬೇಕೆಂದು ಸೂಚನೆ ನೀಡಿದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ಕೆಲವು ನ್ಯೂನತೆಗಳು ಕಂಡು ಬಂದಿವೆ. ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಯ ನೆರವಿಗಾಗಿ ಧಾವಿಸುತ್ತಿದ್ದು ಅವರಿಗೆ ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮವಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದೇ ಅವ್ಯವಸ್ಥೆ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೇನೆ ಎಂದರು.
ಕೋವಿಡ್ ರೋಗಿಗಳನ್ನು ನೋಡಿಕೊಳ್ಳಲು ಮನೆಯ ಇತರೆ ಸದಸ್ಯರು ಇರುವ ಅಗತ್ಯವಿಲ್ಲ. ವೈದ್ಯರು ಮತ್ತು ಶುಶ್ರೂಷಕರು ಅವರ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಮತ್ತು ಔಷಧಿ ಮತ್ತು ಲಸಿಕೆ ಸಮಸ್ಯೆ ಉಂಟಾಗಿಲ್ಲ ಎಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here