ಮಣ್ಣೆತ್ತಿನ ಅಮಾವಾಸ್ಯೆ :ಮಣ್ಣು,ಎತ್ತು,ರೈತನ ಅವಿನಾಭಾವ ಸಂಬoಧದ ಹಬ್ಬ!

0
218

ಮುಂಗಾರು ಹಂಗಾಮಿನ ಬಿತ್ತನೆಯ ಕೆಲಸ ಮುಗಿದ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆ ಭೂತಾಯಿ ಮಕ್ಕಳ ಹಬ್ಬವಾಗಿದೆ. ಸಂಪ್ರದಾಯಕ್ಕೆ ಸೀಮಿತವಾಗುತ್ತಿರುವ ಈ ಹಬ್ಬ ಸಕಾಲಿಕವಾಗಿ ಮಳೆಯಾಗದಿರುವುದಕ್ಕೆ ಕೊಂಚ ಕಳೆಗುಂದುತ್ತಿದೆ.

ಪುನರ್ವಸು ಮಳೆಯ ಹೊತ್ತಿಗೆ ಬಿತ್ತನೆ ಕೆಲಸ ಮುಗಿದು, ರೈತಾಪಿ ವರ್ಗ ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಂತೆ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಈ ವರ್ಷ ಕೊರೊನಾ ಸೋಂಕು 2ನೇ ಅಲೆ ಹಾವಳಿಯಿಂದಾಗಿ ಹಬ್ಬದ ಸಂಭ್ರಮ ಮಾಯವಾಗಿದೆ. ಆದರೂ ಹೊನ್ನಾಳಿ, ನ್ಯಾಮತಿ ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗದ ರೈತರು ಸಂಪ್ರದಾಯದಂತೆ ಮಣ್ಣೆತ್ತಿನ ಅಮವಾಸ್ಯೆ ಹಬ್ಬ ಆಚರಣೆಗೆ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸಂಬಂಧದ ಸಂಕೇತ:
ಈ ಹಬ್ಬ ರೈತ, ಮಣ್ಣು (ಭೂಮಿ) ಮತ್ತು ಎತ್ತುಗಳ ನಡುವೆ ಇರುವ ಅನನ್ಯ ಅವಿನಾಭಾವ ಸಂಬಂಧದ ಸಂಕೇತ. ಎತ್ತು, ಭೂಮಿ ಇಲ್ಲದೆ ರೈತನ ಬದುಕು ಇಲ್ಲ. ರೈತನಿಗೆ ಭೂಮಿ ಎಷ್ಟು ಮುಖ್ಯವೋ, ಎತ್ತುಗಳು ಸಹ ಅಷ್ಟೇ ಅವಶ್ಯ. ಹೀಗಾಗಿಯೇ ಎತ್ತುಗಳು ನಮ್ಮ ಮನೆಯ ಮುತ್ತುಗಳು ಎಂದು ರೈತರು ಅಭಿಮಾನದಿಂದ ಕರೆಯುವುದು ಉಂಟು. ವರ್ಷ ಪೂರ್ತಿ ರೈತನ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಹಿನ್ನೆಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಮಾಡಲಾಗುತ್ತಿದೆ. ಈ ಅಮವಾಸ್ಯೆಯ ದಿನ ಮಣ್ಣಿ ಎತ್ತುಗಳ ತಯಾರಿಸಿ ಪೂಜಿಸುವ ಪರಂಪರೆ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಹಿರಿಯ ಪುರೋಹಿತರಾದ ಕೋಟೆಮಲ್ಲೂರು ವಿರಕ್ತಮಠದ ಶಿವಲಿಂಗರಾಧ್ಯ ಶಾಸ್ತ್ರೀ.

ಅವಿನಾಭಾವ ಸಂಬಂಧ:
ಮಣ್ಣು ಮತ್ತು ಮಾನವನಿಗೆ ಅವಿನಾಭಾವ ಸಂಬಂಧ. ರೈತರಿಗೆ ಎತ್ತುಗಳು ಕಣ್ಣುಗಳಿದ್ದಂತೆ. ಮತ್ತೊಂದಡೆ ಮಣ್ಣು ಕೂಡಾ ದೇವ ಸ್ವರೂಪಿ. ಎತ್ತುಗಳು ಜಮೀನಿನಲ್ಲಿ ರೈತನಿಗೆ ಹಗಲಿರುಳು ದುಡಿಯುವಲ್ಲಿ ನೆರವಾಗುತ್ತವೆ. ಮತ್ತೊಂದೆಡೆ ಭೂತಾಯಿ ರೈತನಿಗೆ ಅನ್ನ ನೀಡ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಪೂಜನೀಯ ಭಾವದಿಂದ ಕಾಣುತ್ತಾರೆ. ಹೀಗಾಗಿ ರೈತರು ಎತ್ತು ಮತ್ತು ಮಣ್ಣನ್ನು ಪೂಜೆ ಮಾಡ್ತಾರೆ.

ಮಣ್ಣಿನ ಹಬ್ಬಕ್ಕೆ ಚಾಲನೆ:
ಹಬ್ಬಗಳಿಗೂ ಮತ್ತು ಮಣ್ಣಿಗೂ ಸಂಬಂಧವಿದೆ. ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನ ಎತ್ತು, ನಾಗರ ಪಂಚಮಿಗೆ ಮಣ್ಣಿನ ನಾಗರ ಹಾವು, ಗೌರಿ ಹುಣ್ಣಿಮೆಗೆ ಮಣ್ಣಿನ ಗೌರಿ. ಗಣೇಶ ಚತುರ್ಥಿಗೆ ಮಣ್ಣಿನ ಗಣೇಶ, ಜೋಕುಮಾರನ ಹಬ್ಬಕ್ಕೆ ಮಣ್ಣಿನ ಜೋಕುಮಾರ ಮಣ್ಣಿನ ಮೂರ್ತಿ ಮಾಡಿಸಿ ಭಕ್ತರು ಪೂಜೆ ಸಲ್ಲಿಸುವುದು ಹಳ್ಳಿಗಳಲ್ಲಿಈಗಲೂ ಚಾಲ್ತಿಯಲ್ಲಿದೆ.

ಗ್ರಾಮೀಣ ಭಾಗದಲ್ಲಿನ ರೈತರು ಇಂದಿಗೂ ಕೂಡಾ ಜಮೀನಿನಿಂದ ತಂದ ಮಣ್ಣಿನಲ್ಲಿಎತ್ತುಗಳನ್ನು ಮಾಡಿ ಪೂಜೆಸುತ್ತಾರೆ. ಅನೇಕ ಕುಂಬಾರರು ಈ ಸಮಯದಲ್ಲಿ ಮಣ್ಣಿನ ಎತ್ತುಗಳನ್ನು ಸಿದ್ಧ ಮಾಡಿ ಮಾರಾಟ ಮಾಡ್ತಾರೆ. ಅನೇಕರು ಮಣ್ಣಿನ ಸುಂದರ ಎತ್ತುಗಳನ್ನು ತಗೆದುಕೊಂಡು ಹೋಗಿ ಪೂಜೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here