ಬಸವರಾಜ ಬೊಮ್ಮಾಯಿ ಸರ್ಕಾರದ ನೂತನ ಸಂಪುಟ ರಚನೆ: ಯಾರಿಗೆ ಸಿಗಲಿದೆ ಸಚಿವ ಸ್ಥಾನ? ಯಾರಿಗೆ ಕೈತಪ್ಪಲಿದೆ .?

0
479

 ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಯಾರಿದ್ದಾರೆ ಎಂಬ ಕುತೂಹಲ ಇದೀಗ ಕೆರಳಿಸಿದೆ. ಸಂಪುಟಕ್ಕೆ ಸೇರ್ಪಡೆಯಾಗಲು ಅಂತಿಮ ಹಂತದ ಕಸರತ್ತನ್ನು ಆಕಾಂಕ್ಷಿಗಳು ನಡೆಸುತ್ತಿದ್ದಾರೆ. ಇನ್ನು ಯಡಿಯೂರಪ್ಪ ಸಂಪುಟದಲ್ಲಿ ಇದ್ದ ಹಲವರಿಗೆ ಹೊಸ ಸಂಪುಟದಲ್ಲಿ ನಾವು ಇರುತ್ತೇವೋ ಇಲ್ಲವೋ ಎಂಬ ಆತಂಕ ಶುರುವಾಗಿದೆ. ಇದೀಗ ಅಂತಿಮ ಹಂತದ ಲಾಬಿ ಮುಂದುವರಿದಿದೆ.

ಹೈಕಮಾಂಡ್‌ ಬುಲಾವಿನ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿದ್ದಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಹೈಕಮಾಂಡ್ ಜೊತೆಗಿನ ಮಾತುಕತೆ ಬಳಿಕ ಹೊಸ ಸಂಪುಟದಲ್ಲಿ ಯಾರು ಇರಲಿದ್ದಾರೆ ಎಂಬುವುದು ಅಂತಿಮಗೊಳ್ಳಲಿದೆ.

ಸದ್ಯ ಎಂ ಚಂದ್ರಪ್ಪ, ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್,ಎಂಪಿ ಕುಮಾರಸ್ವಾಮಿ ಸೇರಿದಂತೆ ಹಲವರು ಸಚಿವಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಪ್ರಬಲ ಆಕಾಂಕ್ಷಿಯಾಗಿರುವ ಎಂಪಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇನ್ನು ತೆರೆಮರೆಯಲ್ಲಿ ಹಲವು ಶಾಸಕರು ಕಸರತ್ತು ನಡೆಸುತ್ತಿದ್ದಾರೆ. ನೆಹರೂ ಓಲೆಕಾರ್ ಅವರ ಬೆಂಬಲಿಗರು ಬಿಎಸ್‌ವೈ ನಿವಾಸದ ಮುಂದೆ ಘೋಷಣೆ ಕೂಗಿದ್ದಾರೆ. ನೆಹರೂ ಓಲೆಕಾರ್ ಅವರು ಮಂತ್ರಿಗಿರಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯಮಟ್ಟದಲ್ಲಿ ಒಂದಿಷ್ಟು ಜನರು ಲಾಬಿ ನಡೆಸುತ್ತಿದ್ದರೆ ಬಿಎಸ್‌ವೈ ಸರ್ಕಾರದಲ್ಲಿ ಸಚಿವರಾಗಿದ್ದ ಕೆಲವರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಸಿಎಂ ದೆಹಲಿಯಲ್ಲಿ ಇರುವುದರಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವ ಸಿ.ಸಿ ಪಾಟೀಲ್ ಅವರು ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.

ಬಹುತೇಕ ವರಿಷ್ಠರು ಸೋಮವಾರವೇ ನೂತನ ಸಂಪುಟ ರಚನೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ವರಿಷ್ಠರ ಅನುಮತಿ ಸಿಕ್ಕ ಬಳಿಕ ಅಂತಿಮ ಘೋಷಣೆ ಆಗಲಿದೆ. ಒಟ್ಟಿನಲ್ಲಿ ಯಾರಿಗೆ ಮಂತ್ರಿಗಿರಿ ಸಿಗುತ್ತೆ ಯಾರಿಗೆ ಕೈತಪ್ಪುತ್ತದೆ ಎಂಬುವುದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

LEAVE A REPLY

Please enter your comment!
Please enter your name here