ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಿದ್ಧತಾ ಸಭೆ, ವಿಜಯನಗರ ಉತ್ಸವ ಅಗತ್ಯ ಸಿದ್ಧತೆಗಳು ಕೈಗೊಳ್ಳಿ: ವಿಶೇಷಾಧಿಕಾರಿ ಅನಿರುದ್ಧ ಶ್ರವಣ್

0
125

ವಿಜಯನಗ,ಸೆ. 27 : ವಿಜಯನಗರ ಉತ್ಸವ ಇದೇ ಅ.2 ಮತ್ತು 3ರಂದು ನಡೆಯಲಿದ್ದು,ಇದಕ್ಕಾಗಿ ಇದುವರೆಗೆ ನಡೆದಿರುವ ಸಿದ್ಧತಾ ಕಾರ್ಯಗಳನ್ನು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್ ಅವರು ಪರಿಶೀಲಿಸಿದರು. ಅಗತ್ಯ ಸಿದ್ಧತೆಗಳನ್ನು ಕೂಡಲೇ ಕೈಗೊಳ್ಳುವಂತೆ ಜವಾಬ್ದಾರಿ ವಹಿಸಲಾಗಿರುವ ವಿವಿಧ ಇಲಾಖೆಗಳ‌ ಅಧಿಕಾರಿಗಳಿಗೆ ಸೂಚಿಸಿದರು.
ಅ.2 ಮತ್ತು 3 ರಂದು ಅದ್ದೂರಿಯಾಗಿ ನಡೆಯಲಿರುವ ವಿಜಯನಗರ ಜಿಲ್ಲಾ ಉತ್ಸವ ಕಾರ್ಯಕ್ರಮ ನಿಮಿತ್ತ ವಿಶೇಷ ಅಧಿಕಾರಿ ಅನಿರುಧ್ ಶ್ರವಣ್ ಅಧ್ಯಕ್ಷತೆಯಲ್ಲಿ ವಿಶೇಷ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.
ಸ್ವಚ್ಛತೆ,ಭದ್ರತೆ, ಗಣ್ಯರು ಮತ್ತು ಕಲಾವಿದರಿಗೆ ಮಾಡಲಾದ ವಸತಿ ವ್ಯವಸ್ಥೆ ಸೇರಿದಂತೆ ಇನ್ನೀತರ ಸಿದ್ಧತೆಗಳ ಪ್ರಗತಿಯನ್ನು ವಿಶೇಷಾಧಿಕಾರಿ‌ ಅನಿರುದ್ಧ ಶ್ರವಣ್ ಅವರು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ನಗರದ ವಡಕರಾಯನ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಿಜಯ ರಥ ಮೆರವಣಿಗೆ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಈ ಸಾಂಸ್ಕ್ರತಿಕ ಮೆರವಣಿಗೆಯಲ್ಲಿ ಸುಮಾರು 80ರಿಂದ 100 ತಂಡಗಳು‌ ಭಾಗವಹಿಸಲಿವೆ.ಎಲ್ಲಾ ತಂಡಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ನೋಡಿಕೊಳ್ಳಬೇಕು ಎಂದರು.
*ವೇದಿಕೆ ಪಕ್ಕದಲ್ಲಿ 30 ಮಳಿಗೆಗಳು: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ವೇದಿಕೆ ಪಕ್ಕದಲ್ಲಿ 30 ಮಳಿಗೆಗಳನ್ನ ಹಾಕಲಾಗುತ್ತಿದೆ. ಇದರಲ್ಲಿ 10ಮಳಿಗೆಗಳು ಸರಕಾರಿ ಇಲಾಖೆಗಳಿಗೆ ಮೀಸಲಿಟ್ಟು,ಉಳಿದವುಗಳನ್ನು ಖಾಸಗಿಯವರಿಗೆ ನೀಡಲಾಗುತ್ತದೆ‌. ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರದ್ದಾಗಿದೆ ಎಂದು ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರು ಹೇಳಿದರು.
ಜನರು ಕಾರ್ಯಕ್ರಮ ನಡೆಯುವುದಕ್ಕಿಂತ ಮುಂಚೆ ಬೆಳಗ್ಗೆಯಿಂದ ಸಂಜೆಯವರೆಗೆ ಮಳಿಗೆಗಳ ಹತ್ತಿರ ಬಂದು ವೀಕ್ಷಿಸಬಹುದಾಗಿದೆ. ಕಾರ್ಯಕ್ರಮ ಆರಂಭವಾದ ನಂತರ ಪಾಸ್ ಇದ್ದವರು ಮಾತ್ರ ನೋಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಕಡ್ಡಾಯ ಕೋವಿಡ್ ನಿಯಮಗಳನ್ನು ಪಾಲಿಸಿ: ಕಡ್ಡಾಯವಾಗಿ ಕೋವಿಡ್ ನಿಯಮವಾಳಿಗಳನ್ನು ಈ ಕಾರ್ಯಕ್ರಮದಲ್ಲಿ ಪಾಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಸೂಚಿಸಿದರು.
ಕಾರ್ಯಕ್ರಮಕ್ಕೆ ಹಾಜರಾಗುವವರಿಗೆ ತರ್ಮಲ್ ಸ್ಕಾನಿಂಗ್ ಮಾಡಿ,ಸ್ಯಾನಿಟೈಸಿಂಗ್ ಮಾಡಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು ಎಂದರು.
ನಗರದಲ್ಲಿ ದೀಪಗಳ ಆಲಂಕಾರ, ಸಿಡಿಮದ್ದುಗಳ ಚಿತ್ತಾರ,ತೇರೆದ ಬಸ್ಸುಗಳಲ್ಲಿ ಭುವನೇಶ್ವರಿ ದೇವಿಯ ಹಾಗು ವೇಷಧಾರಿ ಗಳ ಮೆರವಣಿಗೆ,ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕುರಿತು ಚರ್ಚಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಪಾಸ್ ಗಳ‌ನ್ನು ನೀಡುವುದು,ಅಂಬ್ಯುಲೆನ್ಸ್ ಗಳನ್ನು ಹೆಚ್ಚುವರಿ ಕಾಯ್ದಿರಿಸುವುದು.ಎನ್ ಸಿಸಿ ವಿಧ್ಯಾರ್ಥಿಗಳು ಹಾಗು ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಯಕ್ರಮಕ್ಕೆ ನಿಯೋಜಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗದ ದಂಡಾಧಿಕಾರಿ ಸಿದ್ದರಾಮೇಶ್ವರ , ಡಿವೈಎಸ್ಪಿಗಳಾದ ವಿಶ್ವನಾಥ ಕುಲಕರ್ಣಿ, ಕಾಶಿ,ತಹಶಿಲ್ದಾರ್ ವಿಶ್ವನಾಥ, ಪುರಸಭೆ ಆಯುಕ್ತ ಮನ್ಸೂರದ ಅಲಿ, ತಾಲ್ಲೂಕು ವೈದ್ಯಾಧಿಕಾರಿ ಭಾಸ್ಕರ್ ಹಾಗೂ ಸಲೀಂ ಹಾಗೂ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here