ದಾವಣಗೆರೆ:,ನ.06 :560ಕ್ಕೂ ಹೆಚ್ಚು ರಾಜ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿದ ಹಾಗೂ ರಾಷ್ಟ್ರದ ಏಕತೆಗೆ ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ಇಂದಿಗೂ ಪ್ರಸ್ತುತ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ತಿಳಿಸಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗ ಪ್ರಕಟಿಸಿರುವ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯ ಸೇನಾನಿಗಳ ಪುಸ್ತಕಗಳನ್ನು ಕುರಿತು ಮಾತನಾಡಿದ ಅವರು, ಆಜಾದಿ ಕಾ ಅಮೃತ ಮಹೋತ್ಸವ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನದ ಸ್ಮರಣೆಯಾಗಿದ್ದು, ಈ ನಿಟ್ಟಿನಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು ರಾಷ್ಟ್ರದ ಏಕತೆಗೆ ಸ್ಪೂರ್ತಿಯಾಗಿದ್ದಾರೆ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದೇಶದ ಪ್ರಥಮ ಉಪಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ತತ್ವ ಆದರ್ಶಗಳು ಯುವಜನತೆಗೆ ದಾರಿದೀಪವಾಗಿದೆ ಎಂದರು.
ಏಕಭಾರತ-ಶ್ರೇಷ್ಠ ಭಾರತದ ನಿರ್ಮಾಣಕ್ಕೆ ಸ್ಪೂರ್ತಿಯಾಗಿರುವ ಅನೇಕ ವಿಚಾರಧಾರೆಯುಳ್ಳ ಪುಸ್ತಕಗಳು ಮಾತೃಭಾಷೆ ಕನ್ನಡದಲ್ಲಿ ಲಭ್ಯವಿರುವುದು ಶ್ಲಾಘನೀಯ. ಅಲ್ಲದೇ ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಪುಸ್ತಕಗಳು ರಿಯಾಯಿತಿ ದರದಲ್ಲಿ ಓದುಗರಿಗೆ ತಲುಪುತ್ತಿರುವುದು ಸಂತಸಕರ ಎಂದರು.
ಈ ಸಂದರ್ಭದಲ್ಲಿ ಪ್ರಕಾಶನ ವಿಭಾಗದ ನಿರ್ದೇಶಕ ಎಂ.ದೇವೆಂದ್ರ, ಉಪನಿರ್ದೇಶಕಿ ಬಿ.ಕೆ.ಕಿರಣ್ಮಯಿ ಉಪಸ್ಥಿತರಿದ್ದರು.