ಶಿವಮೊಗ್ಗ ರಂಗಾಯಣದಲ್ಲಿ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಆರಂಭ: ಸಂದೇಶ ಜವಳಿ

0
58

ಶಿವಮೊಗ್ಗ, ನ.17 : ಶಿವವಮೊಗ್ಗ ರಂಗಾಯಣದಲ್ಲಿ ಮುಂದಿನ ತಿಂಗಳಿನಿಂದ ಮೂರು ತಿಂಗಳ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದರು.

ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ರಂಗಭೂಮಿಯ ಹೊಸ ಆಯಾಮಗಳನ್ನು ರಂಗಾಸಕ್ತರಿಗೆ ಪರಿಚಯಿಸುವ, ನಾಟಕ ಸಾಹಿತ್ಯವನ್ನು ಅಧ್ಯಯನ ಮಾಡಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಸಹಯೋಗದೊಂದಿಗೆ ಕೋರ್ಸ್ ಪ್ರಾರಂಭಿಸಲಾಗುತ್ತಿದೆ ಎಂದರು.

ಮೂರು ತಿಂಗಳ ಅವಧಿಯಲ್ಲಿ ರಂಪಠ್ಯಗಳಾದ ಜಾಗತಿಕ ರಂಗಭೂಮಿ, ಭರತನ ನಾಟ್ಯಶಾಸ್ತ್ರ, ಭಾರತೀಯ ರಂಗಭೂಮಿ, ಅಭಿನಯ ಸಿದ್ಧಾಂತಗಳು ಮತ್ತು ಪ್ರಾಯೋಗಿಕ ತರಗತಿಗಳಾದ ನಾಟಕ ಪ್ರಕಾರಗಳು ಮತ್ತು ರಚನೆ, ನಿರ್ದೇಶನ ಮತ್ತು ರಂಗ ತರಬೇತಿ ಮತ್ತು ನೇಪಥ್ಯ ವಿಚಾರಗಳ ಕುರಿತು ತರಬೇತಿ ನೀಡಲಾಗುವುದು. ಮುಂದಿನ ವರ್ಷದಿಂದ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಒಂದು ವರ್ಷದ ರಂಗಶಿಕ್ಷಣ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ರಂಗಶಿಕ್ಷಣಕ್ಕೆ ಸೇರ ಬಯಸುವ ಅಭ್ಯರ್ಥಿಗಳು ಕನಿಷ್ಟ ಪಿಯುಸಿ/ತತ್ಸಮಾನ ತೇರ್ಗಡೆಯಾಗಿರಬೇಕು. 18ರಿಂದ 35 ವರ್ಷ ಒಳಗಿರಬೇಕು. ಕೋರ್ಸಿನ ತರಬೇತಿ ಅವಧಿ ಸಂಜೆ 5.30ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ವಾರದಲ್ಲಿ ನಾಲ್ಕು ದಿನ ಕಟೀಲು ಅಶೋಕ ಪೈ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. 30ಮಂದಿಗೆ ಪ್ರವೇಶಕ್ಕೆ ಅವಕಾಶವಿದ್ದು, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ನಮೂನೆ ರಂಗಾಯಣ ಮತ್ತು ಕಾಲೇಜಿನಲ್ಲಿ ಲಭ್ಯವಿದೆ. ಅರ್ಜಿಯೊಂದಿಗೆ ಶೈಕ್ಷಣಿಕ ಅಂಕಪಟ್ಟಿಯ ಪ್ರತಿ, ಪಾರ್ಸ್‍ಪೋರ್ಟ್ ಅಳತೆಯ 4 ಭಾವಚಿತ್ರ ಮತ್ತು ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು ಎಂದರು.

ಕಲಾತ್ಮಕ ಸ್ಪರ್ಶ: ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕøತಿಕ ಭವನದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಮತ್ತು ಚಿತ್ರಕಲಾ ಪರಿಷತ್ ಬೆಂಗಳೂರು ಸಹಯೋಗದಲ್ಲಿ ಮ್ಯೂರಲ್ ಆರ್ಟ್ ಗ್ಯಾಲರಿ ನಿರ್ಮಿಸಲಾಗಿದ್ದು, ಸಾರ್ವಜನಿಕರು ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಭವನದಲ್ಲಿ ಪ್ರವೇಶ ದ್ವಾರದಲ್ಲಿ ಬೃಹತ್ ಮ್ಯೂರಲ್ ಆರ್ಟ್‍ಗಳು ಮತ್ತು ಮುಖವಾಡಗಳು ಆಕರ್ಷಕವಾಗಿದ್ದು, ಪ್ರಥಮ ಮಹಡಿಯ ಭಿತ್ತಿಗಳಿಗೆ ಕನ್ನಡದ ಪ್ರಮುಖ ನಾಟಕಗಳಾದ ಚಾಣಕ್ಯ ಪ್ರಪಂಚ, ಸಾಹೇಬ್ರು ಬರುತ್ತಾರೆ, ಸಾಮ್ರಾಟ್ ಅಶೋಕ, ಇದಕ್ಕೆ ಕೊನೆ ಎಂದು ? ಮಾತ್ರವಲ್ಲದೆ ಸೂತ್ರದ ಗೊಂಬೆಯಾಟದ ದೃಶ್ಯಾವಳಿಗಳು, ವಿವಿಧ ಕಲಾಪ್ರಕಾರಗಳು ಸೇರಿದಂತೆ ಆಕರ್ಷಕ ಕಲಾಕೃತಿಗಳನ್ನು ಕಲಾ ಗ್ಯಾಲರಿಯಲ್ಲಿ ಅನಾವರಣಗೊಳಿಸಲಾಗಿದೆ ಎಂದರು.

ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಕಾವೇರಿ, ಉಪನ್ಯಾಸಕರಾದ ವಿಭಾ ಡೋಂಗ್ರೆ, ಮಂಜುನಾಥ ಸ್ವಾಮಿ, ರಂಗ ಸಮಾಜದ ಸದಸ್ಯ ಹಾಲಸ್ವಾಮಿ, ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here