ಧಾರವಾಡ:ಜ.06: ಬದಲಾದ ಪರಿಸ್ಥಿತಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ನ್ಯಾಯಾಂಗದೊಂದಿಗೆ ನ್ಯಾಯವಾದಿಗಳು ಸಹಕರಿಸಬೇಕು ಎಂದು ರಾಜ್ಯದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಕರೆ ನೀಡಿದರು.
ಅವರು ಇಂದು ಧಾರವಾಡ ಹೈಕೋರ್ಟ್ ಪೀಠ, ವಕೀಲರ ಸಂಘ, ಡಿಹಾಲ್ಸ್, ಹಾಗೂ ವಕೀಲರ ಗುಮಾಸ್ತರ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇ-ಫೈಲಿಂಗ್, ದೃಶ್ಯ ಸಂವಾದ ಮುಂತಾದವುಗಳು ಮುಂಬರುವ ದಿನಗಳಲ್ಲಿ ಮುನ್ನೆಲೆಗೆ ಬರಲಿವೆ. ಕಾಲಕ್ಕೆ ತಕ್ಕಂತೆ ಇವೆಲ್ಲ ಅನಿವಾರ್ಯ. ಉತ್ತರ ಪ್ರದೇಶದಿಂದ ಬಂದಿರುವ ನನಗೆ ಕನ್ನಡ ನಾಡಿನ ವಾತಾವರಣ ತುಂಬಾ ಇಷ್ಟವಾಗಿದೆ, ಕರ್ನಾಟಕ ಹೈಕೋರ್ಟ್ ದೇಶದ ಅತ್ಯುತ್ತಮ ಹೈಕೋರ್ಟ್ಗಳಲ್ಲಿ ಒಂದಾಗಿದೆ. ಇಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿರುವುದು ಅಪಾರ ಸಂತೋಷ ಉಂಟು ಮಾಡಿದೆ ಎಂದರು.
ವೇದಿಕೆ ಮೇಲೆ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ ಉಪಸ್ಥಿತರಿದ್ದರು
ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ, ಬಿ.ಎಮ್.ಶ್ಯಾಮಪ್ರಸಾದ್. ಮೊಹಮ್ಮದ ನವಾಜ್, ಸಚಿನ್ ಮುಗದುಮ್, ನಟರಾಜ್ ರಂಗಸ್ವಾಮಿ, ಎಮ್.ನಾಗಪ್ರಸನ್ನ, ವಿಶ್ವಜಿತ್ ಶೆಟ್ಟಿ, ಅನಂತ ಹೆಗಡೆ, ಎಸ್ ರಾಚಯ್ಯ, ವಕೀಲರ ಸಂಘದ ಅಧ್ಯಕ್ಷ ಸುರೇಶ ಹುಡೇದಗಡ್ಡಿ, ಉಪಾಧ್ಯಕ್ಷ ಹರೀಶ್ ಮೈಗೂರ್, ಸಂಘದ ಪದಾಧಿಕಾರಿಗಳಾದ ರಾಜಶೇಖರ್ ಹಳ್ಳಿ, ಎ.ಎಮ್. ಮಾಲಿ ಪಾಟೀಲ್, ಶಿವಾನಂದ ಮಾಳಶೆಟ್ಟಿ, ವಿರೇಶ್ ಗಡಾದ್, ಲಕ್ಷಣ ಕುರಹಟ್ಟಿ ಹಾಜರಿದ್ದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಾಧಿಕ್ ಗೂಢವಾಲಾ ಸ್ವಾಗತಿಸಿದರು, ಮಹಿಳಾ ಪ್ರತಿನಿಧಿ ನಿರ್ಮಲಾ ಬಾನಿ ಅತಿಥಿ ಪರಿಚಯ ಮಾಡಿದರು. ಆಡಳಿತ ಮಂಡಳಿ ಸದಸ್ಯೆ ದೀಪಿಕಾ ಹೊಳೆಯಣ್ಣವರ ವಂದಿಸಿದರು.