ಕೊಟ್ಟೂರು: ಕೊಟ್ಟೂರು ತಾಲ್ಲೂಕು ಪಂಚಾಯಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಮನುಷ್ಯನ ಬದುಕಿಗೆ ಪರಿಸರ ಅತ್ಯವಶ್ಯಕವಾಗಿ ಬೇಕಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ಮನುಷ್ಯನ ಆದ್ಯ ಕರ್ತವ್ಯವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ತನ್ನ ಅವಶ್ಯಕತೆಗೆ, ಅನುಕೂಲಗಳಿಗೆ ಪರಿಸರವನ್ನು ಹಾಳುಗೆಡವುತ್ತಿದ್ದಾನೆ. ಈ ಕಾರಣಕ್ಕಾಗಿಯೇ ಪರಿಸರ ತನ್ನ ಮುನಿಸನ್ನು ಬೇರೆ ಬೇರೆ ರೀತಿಗಳಿಂದ ತನ್ನ ಸಿಟ್ಟನ್ನು ಹೊರಹಾಕುತ್ತಿದೆ. ಕಾಲಕಾಲಕ್ಕೆ ಸರಿಯಾದ ಮಳೆಯಾಗದಿರುವುದು, ಅತೀವೃಷ್ಟಿ, ಜಾಗತಿಕ ತಾಪಮಾನದ ಏರಿಕೆ ಇವೆಲ್ಲವುಗಳು ಜೀವನದ ಮೇಲೆ ತೀವ್ರತರವಾದ ಪರಿಣಾಮವನ್ನು ಬೀರುತ್ತಿದೆ.
ಪರಿಸರದ ದಿನ ಜೂನ್-5 ರಂದು ನೆಪಮಾತ್ರಕ್ಕೆ ಸಸಿನೆಟ್ಟು, ನೀರನ್ನು ಹಾಕಿದರೆ ಪರಿಸರ ಸಂರಕ್ಷಣೆಯಾಗುವುದಿಲ್ಲ. ಅದಕ್ಕೆ ಪ್ರತಿದಿನವೂ ಪರಿಸರದ ರಕ್ಷಣೆ ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಕೊಟ್ಟೂರು ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಎ.ಡಿ. ವಿಜಯಕುಮಾರ್ ಹೊಳಗುಂದಿ ಮಾತನಾಡಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು. ಪರಿಸರದ ರಕ್ಷಣೆ ಮನುಷ್ಯನ ಆದ್ಯ ಕರ್ತವ್ಯವಾಗಬೇಕು.
ಆಗ ಮಾತ್ರ ಪರಿಸರವನ್ನು ಸಂರಕ್ಷಿಸಲು ಸಾಧ್ಯ ಎಂದು ಹೇಳಿದರು. ವ್ಯವಸ್ಥಾಪಕರಾದ ಪುಷ್ಪಲತಾ ಮಾತನಾಡುತ್ತ, ಪ್ರತಿ ಮನೆಗೊಬ್ಬರು ದಿನಕ್ಕೊಂದು ಸಸಿ ನೆಡುವ ಸಂಕಲ್ಪ ಮಾಡಬೇಕು ಆ ನಿಟ್ಟಿನಲ್ಲಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಮಾತನಾಡಿದರು. ತಾಲ್ಲೂಕು ಪಂಚಾಯಿತಿಯ ಸಿಬ್ಬಂದಿಗಳಾದ ಮೆಹಬೂಬ್ ಬಾಷ, ಪ್ರಭು ಇನ್ನು ಮುಂತಾದವರು ಇದ್ದರು.