ಕೋವಿಡ್ 3ನೇ ಅಲೆ ತಡೆಗೆ ಬಳ್ಳಾರಿ ಜಿಲ್ಲಾಡಳಿತದಿಂದ ಕಠಿಣ ಕ್ರಮ, ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂ 8ರಿಂದ ಬೆಳಗ್ಗೆ 6ರವರೆಗೆ ಬಳ್ಳಾರಿ ನಗರ ಸೇರಿ ತಾಲೂಕಿನಾದ್ಯಂತ ಜ.23ರವರೆಗೆ ಎಲ್ಲ ಶಾಲಾ-ಕಾಲೇಜುಗಳ ಬಂದ್:ಡಿಸಿ ಮಾಲಪಾಟಿ

0
1126

ಬಳ್ಳಾರಿ,ಜ.15 : ಕೋವಿಡ್-19 ಮೂರನೇ ಅಲೆ ಹರಡದಂತೆ ನಿಯಂತ್ರಿಸಲು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಚಿದ ಬಳ್ಳಾರಿ ನಗರ ಸೇರಿದಂತೆ ಬಳ್ಳಾರಿ ತಾಲೂಕಿನಲ್ಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಕಾಲೇಜುಗಳು, ಎಲ್ಲಾ ವಸತಿ ಶಾಲೆಗಳು, ಎಲ್ಲಾ ಹಾಸ್ಟೆಲ್‍ಗಳು ಹಾಗೂ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ಮುಚ್ಚಿಸಿ ಬಳ್ಳಾರಿ ಜಿಲ್ಲಾಡಳಿತ ಶನಿವಾರ ಆದೇಶ ಹೊರಡಿಸಿದೆ.
ಬಳ್ಳಾರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.

ಬಳ್ಳಾರಿ ನಗರ ಸೇರಿ ಬಳ್ಳಾರಿ ತಾಲ್ಲೂಕಿನಲ್ಲಿ 01 ರಿಂದ 10ನೇ ತರಗತಿಯವರೆಗಿನ ಎಲ್ಲಾ ತರಹದ ಸರ್ಕಾರಿ/ಖಾಸಗಿ ಶಾಲೆಗಳು, ಎಲ್ಲಾ ತರಹದ ರೆಸಿಡೆನ್ಸಿಯಲ್ ಸ್ಕೂಲ್ಸ್, ಎಲ್ಲಾ ತರಹದ ವಿಶ್ವವಿದ್ಯಾಲಯಗಳು ಹಾಗೂ ಎಲ್ಲಾ ಹಾಸ್ಟೆಲ್‍ಗಳನ್ನು ಸಂಪೂರ್ಣವಾಗಿ ಜ.23ರವರೆಗೆ ಮುಚ್ಚುವುದು.
ಈಗಾಗಲೇ ಆದೇಶ ಹೊರಡಿಸಲಾಗಿರುವ ಜಿಂದಾಲ್ ಸುತ್ತಮುತ್ತಲಿನ ಪ್ರದೇಶಗಳಾದ ತೋರಣಗಲ್ಲು, ಬಿ.ಟಿ.ಪಿ.ಎಸ್. ಕುಡಿತಿನಿ, ವಡ್ಡು, ಸುಲ್ತಾನಪುರ, ತಾರಾನಗರ, ಕುರೇಕುಪ್ಪ ಹಾಗೂ ಜಿಂದಾಲ್ ಟೌನ್‍ಶಿಪ್ ನಲ್ಲಿ ಬರುವ ಎಲ್ಲಾ 01 ರಿಂದ 8ನೇ ತರಗತಿವರೆಗಿನ ಎಲ್ಲಾ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚುವುದನ್ನು ಜ.23ರವರೆಗೆ ಮುಂದುವರೆಸಿ ಆದೇಶಿಸಿದೆ ಎಂದು ಜಿಲ್ಲಾದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂ 8ರಿಂದ ಬೆಳಗ್ಗೆ 6ರವರೆಗೆ:
ಬಳ್ಳಾರಿ ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂವನ್ನು ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ಜ.31ರವರೆಗೆ ಜಾರಿಗೊಳಿಸಲಾಗಿದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿರುವ ಡಿಸಿ ಮಾಲಪಾಟಿ ಅವರು ಜಿಲ್ಲೆಯ ಎಲ್ಲಾ ತರಹದ ಪ್ರಾರ್ಥನಾ ಮಂದಿರಗಳಾದ ದೇವಸ್ಥಾನ, ಮಸೀದಿಗಳು, ಚರ್ಚ್‍ಗಳು, ಜೈನ್ ಮಂದಿರ ಮತ್ತು ಇತ್ಯಾದಿಗಳಲ್ಲಿ ಭಕ್ತಾದಿಗಳ ಮತ್ತು ಸಾರ್ವಜನಿಕರ ದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸುತ್ತಾ ಕೇವಲ ಆಯಾ ಪ್ರಾರ್ಥನಾ ಮಂದಿರಗಳಲ್ಲಿ ಅರ್ಚಕರ/ಮೌಲಿಗಳು/ಫಾಧರ್ ಗಳು ಮಾತ್ರ ದಿನ ನಿತ್ಯ ಪೂಜೆ ಮಾಡಿ ಪ್ರಾರ್ಥನ ಮಂದಿರಗಳನ್ನು ಜ.16ರಿಂದ ಜ.31ರವರೆಗೆ ಸಂಪೂರ್ಣವಾಗಿ ಮುಚ್ಚುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿನ ಎಲ್ಲಾ ಈಜುಕೊಳಗಳು ಮತ್ತು ಜಿಮ್‍ಗಳನ್ನು ಹಾಗೂ ಎಲ್ಲ ಚಿತ್ರ ಮಂದಿರಗಳನ್ನು ಸಹ ಜ.31ರವರೆಗೆ ಸಂಪೂರ್ಣವಾಗಿ ಮುಚ್ಚಲು ಆದೇಶ ಹೊರಡಿಸಿದ್ದಾರೆ.

ಪರ್ಯಾಯ ಮಾರ್ಗಗಳ ಮೂಲಕ ಬೋಧನಾ ಕ್ರಮ ಮುಂದುವರಿಸಿ:
ಮುಂದಿನ ದಿನಗಳಲ್ಲಿ ಕೊವಿಡ್-19 ಸೊಂಕಿನ ಪರಿಸ್ಥಿತಿಯನ್ನು ಅವಲೋಕಿಸಿ ಮೇಲಿನ ನಿರ್ದೇನಗಳ ಕುರಿತು ಅಗತ್ಯ ಆದೇಶಗಳನ್ನು ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಜಿಲ್ಲಾಧಿಕಾರಿ ಮಾಲಪಾಟಿ ಅವರು ಈ ಅವಧಿಯಲ್ಲಿ ಪರ್ಯಾಯ ಮಾರ್ಗಗಳ ಮೂಲಕ (ಆನ್ ಲೈನ್/ಇತರೆ ಮಾರ್ಗಗಳು) ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಕಾ/ಬೋಧನಾ ಚಟುಚಟಿಕೆಗಳನ್ನು ಮುಂದುವರೆಸಲು ಕ್ರಮವಹಿಸಬಹುದು ಎಂದು ಅವರು ಸೂಚನೆ ನೀಡಿದ್ದಾರೆ.

ನಿಯಮ ಉಲ್ಲಂಘಿಸಿದ್ರೆ ಕ್ರಮಕ್ಕೆ ಖಡಕ್ ಸೂಚನೆ:
ಈ ಆದೇಶದಲ್ಲಿನ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳ ಉಲ್ಲಂಘನೆ ಕಂಡು ಬಂದಲ್ಲಿ ಅಂತಃ ಶಾಲೆಗಳ/ರೆಸಿಡೆನ್ಸಿಯಲ್ ಸ್ಕೂಲ್ಸ್/ಕಾಲೇಜುಗಳ/ಹಾಸ್ಟೆಲ್‍ಗಳ/ ಚಿತ್ರಮಂದಿರಗಳ/ ಈಜುಕೊಳ/ಜಿಮ್ ಗಳ ಮ್ಯಾನೆಜ್ ಮೆಂಟ್/ ಶಾಲಾ/ಕಾಲೇಜು ಮುಖ್ಯಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 51 ರಿಂದ 60ರ ಅನ್ವಯವಾಗುವ ಹಾಗೂ ಐ.ಪಿ.ಸಿ. ಸೆಕ್ಷನ್ 188 ರಂತೆ ಹಾಗೂ ಕರ್ನಾಟಕ ಸಾಂಕ್ರಮಿಕ ರೋಗಗಳ ಕಾಯ್ದೆ 2020ರ ಕಲಂ (4), (5) ಮತ್ತು (10) ರಂತೆ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳತಕ್ಕದ್ದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬಳ್ಳಾರಿ ನಗರ ಮತ್ತು ತಾಲೂಕಿನಲ್ಲಿ ಪಾಸಿಟಿವಿಟಿ ದರ ಶೇ.13ಕ್ಕೇರಿಕೆ:
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಡಿ.31ರಂದು ಕೋವಿಡ್-19 ಸೋಂಕಿನ ಪ್ರಮಾಣ ಶೇ.0.14% ಇದ್ದು, ಈ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಾ ಜ.14ರಂದು ಶೇ.10ಕ್ಕೆ ಏರಿಕೆಯಾಗಿದೆ.
ಇದರಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ತಾಲ್ಲೂಕಿನಲ್ಲಿ ಪಾಸಿಟಿವಿಟಿ ರೇಟ್ ಶೇ.13 ರನ್ನು ಮೀರಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿರುವುದು ಗಂಭೀರದ ಸಂಗತಿಯಾಗಿರುವುದಲ್ಲದೇ ಸೊಂಕು ತ್ವರಿತಗತಿಯಲ್ಲಿ ಹರಡುತ್ತಿರುವುದು ಕಂಡು ಬರುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಸೊಂಕಿನ ಪಾಸಿಟಿವಿಟಿ ರೇಟ್ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಬಳ್ಳಾರಿ ನಗರ ಮತ್ತು ತಾಲೂಕಿನ ಕೆಲ ಸರಕಾರಿ/ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೊಂಕು ತಗುಲಿ ಕೋವಿಡ್ ಹಾಟ್‍ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿರುವುದರಿಂದ ಮತ್ತು ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ಕೋವಿಡ್-19 ನಿಯಂತ್ರಣ ಕ್ರಮಗಳನ್ನು ತಕ್ಷಣದಿಂದಲೇ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here