ಬಳ್ಳಾರಿ,ಫೆ.04 : ವಿಶ್ವಕ್ಯಾನ್ಸರ್ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ,ಜಿಪಂ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದ ಸಹಯೋಗದಲ್ಲಿ ಡಿಎಚ್ಒ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಡಿಎಚ್ಒ ಡಾ.ಎಚ್.ಎಲ್.ಜನಾರ್ಧನ್ ಅವರು ಶುಕ್ರವಾರ ಚಾಲನೆ ನೀಡಿದರು.
ಡಿಎಚ್ಒ ಕಚೇರಿ ಆವರಣದಿಂದ ಆರಂಭವಾದ ಜಾಗೃತಿ ಜಾಥಾವು ಜಿಲ್ಲಾಸ್ಪತ್ರೆಯ ಮುಖಾಂತರ,ಸಂಗಮ ಸರ್ಕಲ್, ರಾಘವ ಕಲಾಮಂದಿರದ ಮಾರ್ಗವಾಗಿ ರಾಯಲ್ ಸರ್ಕಲ್ ಮುಖಾಂತರ,ಬೆಂಗಳೂರು ರಸ್ತೆಯ ಮೂಲಕ ಮೀನಾಕ್ಷಿ ವೃತ್ತದಿಂದ ಮಿಲ್ಲರಪೇಟೆ ನಗರ ಆರೋಗ್ಯ ಪ್ರಾಥಮಿಕ ಕೇಂದ್ರದವರೆಗೆ ತಲುಪಿತು.
ಜಾಥಾದಲ್ಲಿ ಕ್ಯಾನ್ಸರ್ ಜಾಗೃತಿಗೆ ಸಂಬಂಧಿಸಿದ ಸಂದೇಶಗಳು ಗಮನಸೆಳೆದವು.
ಜಾಥಾಗೆ ಚಾಲನೆ ನೀಡಿದ ನಂತರ ಮಾತನಾಡಿದ ಡಿಎಚ್ಒ ಡಾ. ಎಚ್.ಎಲ್.ಜನಾರ್ಧನ ಅವರು ಕ್ಯಾನ್ಸರ್ ಇರುವ ಜನರಲ್ಲಿ ಯಾವುದೆ ರೀತಿಯ ಆತಂಕ ಬೇಡ ಎಂದರು.
ಕ್ಯಾನ್ಸರ್ ಇರುವ ರೋಗಿಗಳಲ್ಲಿ ಧೈರ್ಯ ಮತ್ತು ಮನೋಸ್ಥೈರ್ಯವನ್ನು ತುಂಬುವ ಕೆಲಸ ಮಾಡಬೇಕು ಮತ್ತು ಮೊದಲಿನ ರೀತಿಯಲ್ಲಿಯೇ ಅವರು ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳುವ ಹಾಗೆಯೇ ಮಾಡುವ ಕೆಲಸ ಆರೋಗ್ಯ ಇಲಾಖೆ ಹಾಗೂ ಸಮುದಾಯದ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಅನಿಲ್ ಕುಮಾರ್ ಆರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ ಅರ್, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಇಂದ್ರಾಣಿ ವಿ, ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ. ವಿರೇಂದ್ರ ಕುಮಾರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಗುರುನಾಥ್ ಚವ್ಹಾಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ,ಎಫ್ಪಿಎ ಇಂಡಿಯಾ,ರೋಟರಿ ಕ್ಲಬ್ನ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಜಾಥಾದ ನಂತರ ನಗರದ ಮಿಲ್ಲರಪೇಟೆ ನಗರ ಅರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.