ಬಳ್ಳಾರಿ,ಫೆ.10: 50 ದಿನಗಳಲ್ಲಿ ತರಬೇತಿ ನೀಡುವಲ್ಲಿ ಶಿಕ್ಷಕರ ಪರಿಶ್ರಮ ಅತ್ಯಮೂಲ್ಯವಾಗಿದೆ. ಕಲಿಕೆಯಲ್ಲಿ ದುರ್ಬಲ ಇರುವ ಮಕ್ಕಳನ್ನು ಗುರುತಿಸಿ ಬುದ್ಧಿವಂತ ಮಕ್ಕಳ ಜೊತೆಗೂಡಿಸಿ ಗುಂಪುಚರ್ಚೆ ಮಾಡುವ ಮೂಲಕ ಕಲಿಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
ಮಾರ್ಚ್/ಎಪ್ರಿಲ್ನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಮುಖ್ಯಪರೀಕ್ಷೆಯ ಫಲಿತಾಂಶ ಸುಧಾರಣೆಗೆ 50 ದಿನಗಳ ಕಾರ್ಯನಿರ್ವಹಣೆಗಾಗಿ ಮಾದರಿ ಕ್ರಿಯಯೋಜನೆ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಘದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಯರುಗಳಿಗೆ ಗುರುವಾರ ನಗರದ ಬಿಡಿಎಎ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗಳು ಇನ್ನು 50 ದಿನಗಳಲ್ಲಿ ಆರಂಭವಾಗಲಿದ್ದು, ಶಿಕ್ಷಕರು ವಿದ್ಯಾರ್ಥಿಗಳನ್ನು ಸುಧಾರಣೆ ಮಾಡುವುದು ಹಾಗೂ ಕೋರೊನಾ ಸಾಂಕ್ರಾಮಿಕ ರೋಗದಿಂದ ಶಿಕ್ಷಕರು ಮೊದಲು ಜಾಗೃತರಾಗಿದ್ದು, ಮಾಸ್ಕ್ ಧರಿಸುವ ಮೂಲಕ ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಕೋವಿಡ್-19 ರೋಗದ 1ನೇ, 2ನೇ ಮತ್ತು 3ನೇ ಅಲೆಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿ, ಕಲಿಕೆಯ ನಿರಂತರತೆಯಿಂದ ವಂಚಿತರಾಗಿದ್ದು,ಅವರ ಸುಧಾರಣೆಗೆ ವಿಶೇಷ ಒತ್ತು ನೀಡುವಿಕೆ ಅವಶ್ಯ ಎಂದು ಅವರು ಹೇಳಿದರು.
ಮುಂಜಾನೆ ಮತ್ತು ಸಂಜೆಯ ಅವಧಿಗಳಲ್ಲಿ ಹೆಚ್ಚಿನ ಅವಧಿಯಲ್ಲಿ ಅಭ್ಯಸಿಸುವಂತೆ ಹೇಳಬೇಕು ಹಾಗಾದರೆ ಮಾತ್ರ ಜಿಲ್ಲೆಯು ಶೈಕ್ಷಣಿಕತೆಯಲ್ಲಿ ಮುಂಚೂಣಿಯಲ್ಲಿ ಬರಲು ಸಾಧ್ಯ ಮತ್ತು ವಿದಾರ್ಥಿಗಳ ಜೀವನ ಶಿಕ್ಷಕರ ಕೈಯಲ್ಲಿದೆ ಎಂದು ಹೇಳಿದರು.
ಗುರುಗಳು ವಿದ್ಯಾರ್ಥಿಗಳನ್ನು ಮರೆತರು, ವಿದ್ಯೆ ಕಲಿತ ವಿದ್ಯಾರ್ಥಿಗಳು ಮಾತ್ರ ಗುರುಗಳನ್ನು ಮರೆಯುವುದಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ಮಾಲಪಾಟಿ ಅವರು ಎಸ್ಎಸ್ಎಲ್ಸಿಯ ಫಲಿತಾಂಶ ಸುಧಾರಣೆಗೆ 50 ದಿನಗಳ ‘ಕ್ರಿಯಾ ಯೋಜನೆ’ ಎನ್ನುವ ವಿಷಯವಾರು ಭೋದನಾ ಚಟುವಟಿಕೆಗಳ ಪುಸ್ತಕವನ್ನು ಅನಾವರಣಗೊಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ರಾಮಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪ್ರಥಮ ಘಟ್ಟದ ಮುಖ್ಯ ಹಂತವಾದ ಎಸ್ಎಸ್ಎಲ್ಸಿ ಯ ಮುಖ್ಯ ಪರೀಕ್ಷೆಯು ಮಾ.28 ಕ್ಕೆ ನಿಗದಿಯಾಗಿದ್ದು, ಜಿಲ್ಲೆಯ ಫಲಿತಾಂಶವನ್ನು ಉತ್ತಮಪಡಿಸುವ ಸಲುವಾಗಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
2019-20ನೇ ಸಾಲಿನಲ್ಲಿ ಬಳ್ಳಾರಿಯು ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ 23ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಬಂದು ಮೈಲಿಗಲ್ಲು ಸೃಷ್ಟಿಸಿದೆ ಹಾಗೂ 10ನೇ ಸ್ಥಾನಕ್ಕೆ ಬರುವುದಕ್ಕೆ ಎಲ್ಲಾ ಶಾಲಾ ಮುಖ್ಯೋಪಾಧ್ಯಯರು ಮತ್ತು ಶಿಕ್ಷಕರು ಶ್ರಮವಹಿಸಬೇಕು ಎಂದು ತಿಳಿಸಿದರು. 2020-21ನೇ ಸಾಲಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಗಳ ಹಾಗೂ ಭೌತಿಕ ತರಗತಿಗಳಿಗೆ ಸಿಕ್ಕ ಸಮಯ ಕಡಿಮೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು-112, ಅನುದಾನಿತ ಶಾಲೆಗಳು-34 ಮತ್ತು ಅನುದಾನ ರಹಿತ ಶಾಲೆಗಳು-163 ಹಾಗೂ ಇತರೆ ಸೇರಿದಂತೆ ಒಟ್ಟು 337 ಪ್ರೌಢಶಾಲೆಗಳಿದ್ದು, 23,863 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯಲ್ಲಿ ನೊಂದಾಯಿಸಿಕೊಂಡಿದ್ದು, ಜಿಲ್ಲೆಯ ಒಟ್ಟು 67 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ವಿವರಿಸಿದರು.
ಶಾಲಾ ಶಿಕ್ಷಕರು ಕಲಿಕೆಯಿಂದ ಹಿಂದುಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಕರೆತರಬೇಕು ಹಾಗೂ ಸಂಜೆವೇಳೆ ವಿದ್ಯಾರ್ಥಿಗಳೊಟ್ಟಿಗೆ ಹೆಚ್ಚಾಗಿ ಗುಂಪುಚರ್ಚೆ ನಡೆಸಬೇಕು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಬೇಕು ಎಂದು ಶಿಕ್ಷಕರುಗಳಿಗೆ ಮನವರಿಕೆ ಮಾಡಿದರು. ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಡಿಎಂಎಫ್ ಯೋಜನೆಯಲ್ಲಿ ರೂ.10 ಕೋಟಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಶಿಕ್ಷಣ ಸಂಯೋಜಕರು, ಜಿಲ್ಲೆಯ ಎಲ್ಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಯರು, ಡಯಟ್ನ ಸಿಬ್ಬಂದಿ ವರ್ಗದವರು, ಶಿಕ್ಷಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.