ಸಂಡೂರು: ಮಾ: 7: ಮಿಷನ್ ಇಂದ್ರಧನುಷ್ 4.0 ಅಭಿಯಾನದಲ್ಲಿ ಲಸಿಕೆ ವಂಚಿತ ಎರಡು ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ಅಭಿಯಾನವನ್ನು ಆಯೋಜಿಸಲಾಗಿತ್ತು
ತಾಲೂಕಿನ ತೋರಣಗಲ್ಲು, ಮತ್ತು ತೋರಣಗಲ್ಲು ರೈಲ್ವೆ ನಿಲ್ದಾಣ, ಕುರೇಕುಪ್ಪ, ಹೊಸದರೋಜಿ ಗ್ರಾಮದಲ್ಲಿ ಮಿಷನ್ ಇಂದ್ರಧನುಷ್ 4.0 ಲಸಿಕಾ ಅಭಿಯಾನ ಇಂದಿನಿಂದ ಆಯೋಜಿಸಲಾಗಿದೆ, ಈ ವಿಶೇಷ ಲಸಿಕಾ ಅಭಿಯಾನ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ನಡೆಯುತ್ತಿದ್ದು ಬಳ್ಳಾರಿ ಸಹ ಒಂದಾಗಿದೆ, ಲಸಿಕಾ ವೇಳಾ ಪಟ್ಟಿಯಂತೆ ಸೂಕ್ತ ವಯಸ್ಸಿನಲ್ಲಿ ಯಾವುದೋ ಕಾರಣಕ್ಕೆ ಲಸಿಕೆ ಪಡೆಯಲು ಸಾಧ್ಯವಾಗಿರದ ಮಕ್ಕಳನ್ನು ಸಮೀಕ್ಷೆ ಮಾಡಿ ಪತ್ತೆ ಹಚ್ಚಿ ಇಂದು ಇಂದ್ರಧನುಷ್ ಲಸಿಕಾ ಅಭಿಯಾನದಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ಡಾ. ಗೋಪಾಲ್ ರಾವ್ ತಿಳಿಸಿದರು,
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಪ್ರತಿ ಗುರುವಾರ ಹಮ್ಮಿಕೊಂಡು ಹುಟ್ಟಿನಿಂದ ಹದಿನೆಂಟು ತಿಂಗಳೊಳಗೆ ಹನ್ನೆರಡು ಮಾರಕ ರೋಗಿಗಳ ವಿರುದ್ದ ಲಸಿಕೆ ನೀಡಲಾಗುತ್ತಿದೆ, ಕೆಲವು ವೇಳೆ ನಾನಾ ಕಾರಣಗಳಿಂದ ಮಕ್ಕಳಿಗೆ ಲಸಿಕೆ ಕೊಡಿಸಲು ಸಾಧ್ಯವಾಗಿರದು, ಅವಧಿ ಮೀರಿದೆ ಎಂದು ಪೋಷಕರು ಲಸಿಕೆ ಕೊಡಿಸದಿರಬಹುದು, ಅಂತಹ ಮಕ್ಕಳಿಗೆ ಇಂದ್ರಧನುಷ್ ವರದಾನವಾಗಿದೆ, ಲಸಿಕೆ ವಂಚಿತ ಮಗು ಎರಡು ವರ್ಷದೊಳಗೆ ಇದ್ದಲ್ಲಿ ಪ್ರಸ್ತುತ ಅನ್ವಯಿಸುವ ಲಸಿಕೆಗಳನ್ನು ನೀಡಲಾಗುತ್ತದೆ, ಮಹಿಳೆ ಗರ್ಭಿಣಿಯೆಂದು ಗೊತ್ತಾದ ನಂತರ ಎರಡು ಡೋಸ್ ಟಿ.ಡಿ ಲಸಿಕೆ ಕಡ್ಡಾಯವಾಗಿ ಒಂದು ತಿಂಗಳ ಅಂತರದಲ್ಲಿ ಪಡೆದಿರಬೇಕು, ಕೆಲವು ಕೂಲಿಕೆಲಸ, ಕಾರ್ಖಾನೆ ಕೆಲಸಕ್ಕೆ ಹೋಗುವ ಗರ್ಭಿಣಿ ಮಹಿಳೆಯರು ಕೆಲವೊಮ್ಮೆ ಲಸಿಕೆ ಪಡೆದಿರುದಿಲ್ಲ ಅಂತಹವರನ್ನೂ ಸಹಾ ಗುರುತಿಸಿ ಲಸಿಕೆ ನೀಡಲಾಗುತ್ತದೆ, ನಿಗದಿಯಂತೆ ಮಾರ್ಚ್- 7, ಏಪ್ರಿಲ್-4, ಮೇ- 9 ಮೂರು ಸುತ್ತುಗಳಲ್ಲಿ ಏಳುದಿನಗಳ ಕಾಲ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ 4.0 ನಡೆಯಲಿದ್ದು ಯಾವುದೇ ಮಗು ಮತ್ತು ಗರ್ಭಿಣಿ ಲಸಿಕೆ ವಂಚಿತರಾಗದಂತೆ ಕಾಳಜಿ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆ ಕಾವೇರಿ, ಹುಲಿಗೆಮ್ಮ,ಪದ್ಮಾ, ರೇಖಾ,ಆಶಾ, ತೇಜಮ್ಮ,ಗೋವಿಂದಮ್ಮ, ವೆಂಕಟ ಲಕ್ಷ್ಮಿ, ಮಂಜುಳ ಇತರರು ಇದ್ದರು