ರಾಮನಗರ, ಮಾ. 11: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯನ್ನು ಜಿಲ್ಲೆಯಲ್ಲಿ ಮಾರ್ಚ್ 12 ರಂದು ಬೆಳಿಗ್ಗೆ 11 ಗಂಟೆಗೆ ರಾಮನಗರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.
ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕಾರ್ಯಕ್ಕೆ ರಾಮನಗರ ತಾಲೂಕಿನ ಕಸಬಾ ಹೋಬಳಿಯ ಮಾದಪುರ ಗ್ರಾಮದಲ್ಲಿ ಚಾಲನೆ ನೀಡಲಾಗುವುದು. ಗ್ರಾಮವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ನೋಡಲ್ ಅಧಿಕಾರಿಗಳು ಕಂದಾಯ ದಾಖಲೆಗಳನ್ನು ತಲುಪಿಸಲಿದ್ದಾರೆ ಎಂದರು.
ಕಂದಾಯ ದಾಖಲೆಗಳಾದ ಆರ್.ಟಿ.ಸಿ, ಅಟ್ಲಾಸ್ , ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಮುದ್ರಣ ಮಾಡಿ ಕುಟುಂಬವಾರು ವಿಂಗಡಿಸಿ ಜನರಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾ.12 ರಂದು ಕಂದಾಯ ದಾಖಲೆ ಪೂರ್ಣ ಪ್ರಮಾಣದಲ್ಲಿ ವಿತರಿಸಲು ಪ್ರಯತ್ನಿಸಲಾಗುವುದು. ಮಾ.12 ರಂದು ದಾಖಲೆ ಸಿಗದಿದ್ದಲ್ಲಿ ಜನರು ಗೊಂದಲಕ್ಕೆ ಒಳಗಾಗಬಾರದು ಉಚಿತವಾಗಿ ಮಾ.21 ರಿಂದ 26 ರವರೆಗೆ ಮಾತ್ರ ನಾಡ ಕಚೇರಿಗಳಲ್ಲಿ ದಾಖಲೆ ನೀಡಲು ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಅಧಿಕೃತ ಗುರುತಿನ ಚೀಟಿ ಹಾಜರುಪಡಿಸಿ ಪಡೆದುಕೊಳ್ಳುವುದು ಎಂದರು.
ಜಿಲ್ಲೆಯಲ್ಲಿ 1,39,000 ಕುಟುಂಬಗಳಿಗೆ ಕಂದಾಯ ದಾಖಲೆ ನೀಡಲು ಗುರಿ ನಿಗದಿಯಾಗಿದ್ದು, ಈಗಾಗಲೇ 60,000 ಕುಟುಂಬಗಳಿಗೆ ದಾಖಲೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಅವರು ಉಪಸ್ಥಿತರಿದ್ದರು.